ಬೆಂಗಳೂರು: ಅಪರೂಪದ ಬೆಳವಣಿಗೆಯಲ್ಲಿ, ರಾಜ್ಯ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಅವರು ಇಂದು ಸೋಮವಾರ ಸದನವನ್ನು ಮುಂದೂಡಿ ಹೊರನಡೆದ ಪ್ರಸಂಗ ನಡೆದಿದೆ. ಶಾಸಕರು ಕೇಳಿದ ಪ್ರಶ್ನೆಗಳಿಗೆ ಸರ್ಕಾರ ಸಮರ್ಪಕ ಉತ್ತರ ನೀಡಿಲ್ಲ ಎಂಬ ಅಸಮಾಧಾನದಿಂದ ಅವರು ಈ ಕ್ರಮ ಕೈಗೊಂಡರು.
ಇಂದು ವಿಧಾನಸಭೆಯಲ್ಲಿ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಶಾಸಕರು ಕೇಳಿದ್ದ 230 ‘ಅನ್ಸ್ಟಾರ್ಡ್’ ಪ್ರಶ್ನೆಗಳಲ್ಲಿ ಕೇವಲ 84ಕ್ಕೆ ಮಾತ್ರ ಉತ್ತರಗಳನ್ನು ಮಂಡಿಸಿದರು. ಕಳೆದ ವಾರವೂ ಸರ್ಕಾರ ಕೇವಲ ಸುಮಾರು 50 ಪ್ರಶ್ನೆಗಳಿಗೆ ಮಾತ್ರ ಉತ್ತರ ನೀಡಿದ್ದರಿಂದ ಸ್ಪೀಕರ್ ಯು ಟಿ ಖಾದರ್ ಅಸಮಾಧಾನಗೊಂಡಿದ್ದರು.
ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಇದು ಐದನೇ ಬಾರಿ! ಎಚ್ಚರಿಕೆ ನೀಡಿದರೂ ಸರ್ಕಾರದ ಮಂತ್ರಿಗಳು ಸುಧಾರಿಸಿಲ್ಲ. ಸದನಕ್ಕೆ ದೇವರಂತೆ ಬರುತ್ತಾರೆ, ದೇವರಂತೆ ಮನೆಗೆ ಹೋಗುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸದನ ನಡೆಸುವುದು ಶಾಸಕರಿಗೆ
ನಾನು ನಾಲ್ಕು ಬಾರಿ ಸ್ಪಷ್ಟ ಆದೇಶ ನೀಡಿದ್ದೇನೆ, ಈ ಸದನವು ಸಚಿವರಿಗಾಗಿ ಅಲ್ಲ. ಮೂರು ತಿಂಗಳಿಗೆ ಒಮ್ಮೆ ತಮ್ಮ ಸಮಸ್ಯೆಗಳನ್ನು ಚರ್ಚಿಸಲು ಶಾಸಕರು ಇಲ್ಲಿ ಬರುತ್ತಾರೆ. ಅವರು ಪ್ರಶ್ನೆಗಳನ್ನು ಕೇಳುತ್ತಾರೆ. ಅದರಲ್ಲಿ ಕೇವಲ 15 ಪ್ರಶ್ನೆಗಳು ಮಾತ್ರ ‘ಸ್ಟಾರ್ಡ್’ ಆಗುತ್ತವೆ (ಅವುಗಳಿಗೆ ಸದನದಲ್ಲಿ ಉತ್ತರ ನೀಡಬೇಕು). ಉಳಿದ ‘ಅನ್ಸ್ಟಾರ್ಡ್’ ಪ್ರಶ್ನೆಗಳಿಗೆ ಉತ್ತರವೇ ಸಿಗದಿದ್ದರೆ ಶಾಸಕರು ಇಲ್ಲಿ ಬರಬೇಕಾದ ಅಗತ್ಯವೇನು?” ಎಂದು ಪ್ರಶ್ನಿಸಿದರು.
ಸ್ಪಷ್ಟ ಆದೇಶ ನೀಡಿದರೂ ಯಾವುದೇ ಸುಧಾರಣೆ ಕಂಡುಬಂದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾವು ಸದನವನ್ನು ಹೇಗೆ ನಡೆಸಬೇಕು ಎಂದು ಕೇಳಿದರು. ಸಂಬಂಧಪಟ್ಟ ಸಚಿವರು ಮತ್ತು ಕಾರ್ಯದರ್ಶಿಗಳು ಇದರ ಬಗ್ಗೆ ಸ್ಪಷ್ಟನೆ ನೀಡುವವರೆಗೆ ನಾನು ಈ ಸದನವನ್ನು ನಡೆಸುವುದಿಲ್ಲ ಎಂದು ಹೇಳಿ ಸದನವನ್ನು ಮುಂದೂಡಿ ಹೊರನಡೆದರು.
ಸ್ಪೀಕರ್ ಮನವೊಲಿಸಿದ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ ಮುಂದೆಯೇ ಸಚಿವರ ಕಾರ್ಯವೈಖರಿಗೆ ಯು ಟಿ ಖಾದರ್ ಅಸಮಾಧಾನ ಹೊರ ಹಾಕಿ ಹೊರನಡೆದರು.ಆಗ ಸ್ಪೀಕರ್ ಕಚೇರಿಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಖಾದರ್ ಮನವೊಲಿಕೆ ಮಾಡಿದ್ದಾರೆ. ಸಿಎಂ ಸೂಚನೆ ಬಳಿಕ ಸದನ ನಡೆಸಲು ಸ್ಪೀಕರ್ ಖಾದರ್ ಒಪ್ಪಿಕೊಂಡರು.