ಬೆಂಗಳೂರು: ರಾಜ್ಯದಲ್ಲಿ ತಾಪಮಾನ ಹೆಚ್ಚುತ್ತಿದ್ದು, ಉಷ್ಣ ಅಲೆ ಎದುರಾಗಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ತಾಪಮಾನ ಹೆಚ್ಚಾಗುತ್ತಿರುವ ಈ ಸಮಯದಲ್ಲಿ ಜನರು ಆರೋಗ್ಯ ಕಾಪಾಡಿಕೊಳ್ಳಲು ಮುನ್ನೆಚ್ಚರಿಕೆ ವಹಿಸುವುದು ಬಹಳ ಅಗತ್ಯವಾಗಿದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಹವಾಮಾನ ಇಲಾಖೆಯ ಮಾಹಿತಿಯಂತೆ ಮಾರ್ಚ್ ತಿಂಗಳಿಂದ ಮೇವರೆಗೆ ಉಷ್ಣತೆಯ ಅಲೆ ಸಾಮಾನ್ಯ ದಿನಗಳಿಗಿಂತಲೂ ಹೆಚ್ಚು ಕಂಡುಬರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದ್ದು. ಹೆಚ್ಚುತ್ತಿರುವ ಸೂರ್ಯನ ಕಿರಣಗಳಿಂದ ಚರ್ಮ ಸುಡುವಿಕೆ, ಚರ್ಮದ ಉರಿ, ಕಿರಿಕಿರಿ, ಚರ್ಮ ಕಪ್ಪಾಗುವುದು ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ವೃದ್ಧರು, ಮಕ್ಕಳು, ಹೊರಾಂಗಣದಲ್ಲಿ ಹೆಚ್ಚು ಸಮಯ ಕೆಲಸ ಮಾಡುವವರು ಹಾಗೂ ಆರೋಗ್ಯ ಸಮಸ್ಯೆ ಹೊಂದಿರುವವರು ಉಷ್ಣತೆಯ ಅಲೆಯಿಂದ ಹೆಚ್ಚು ಅಪಾಯಕ್ಕೆ ಒಳಗಾಗುತ್ತಾರೆ. ಈ ಹಿನ್ನೆಲೆಯಲ್ಲಿ ತಂಪು ಆಶ್ರಯ ಕೇಂದ್ರಗಳನ್ನು ಸಿದ್ಧಪಡಿಸಲು, ಸಾಕಷ್ಟು ಕುಡಿಯುವ ನೀರನ್ನು ಒದಗಿಸಲು ಹಾಗೂ ಆರೋಗ್ಯ ಮೇಲ್ವಿಚಾರಣಾ ವ್ಯವಸ್ಥೆಯನ್ನು ಬಲಪಡಿಸುವಂತೆ ಸಲಹೆ ನೀಡಿದ್ದಾರೆ.
ಇನ್ನು ಚರ್ಮ ತಜ್ಞರು ಹೇಳುವಂತೆ ಹೊರಾಂಗಣದಲ್ಲಿ ಹೆಚ್ಚು ಸಮಯ ಕಳೆಯುವವರಲ್ಲಿ ಹೆಚ್ಚಿದ UV ವಿಕಿರಣವು ಚರ್ಮದ ಕೋಶಗಳು ಹಾನಿಗೊಳಿಸುತ್ತವೆ. ಚರ್ಮದಲ್ಲಿ ಉರಿ, ಕಿರಿಕಿರಿ, ವೃದ್ಧಾಪ್ಯ ಚರ್ಮ ಸಮಸ್ಯೆಗಳು ಶೀಘ್ರಗತಿಯಲ್ಲಿ ಎದುರಾಗುವಂತೆ ಮಾಡಲಿದೆ.
ದೀರ್ಘಕಾಲದ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಚರ್ಮವು UVA ಮತ್ತು UVB ವಿಕಿರಣಕ್ಕೆ ಒಡ್ಡಿಕೊಳ್ಳುತ್ತದೆ, ಇದು ಚರ್ಮವನ್ನು ಭೇದಿಸಿ ಚರ್ಮದ ಕೋಶಗಳ DNA ಗೆ ಹಾನಿ ಮಾಡುತ್ತದೆ.
UVB (280-315 nm) ಮುಖ್ಯವಾಗಿ DNA ಮೇಲೆ ನೇರ ಪರಿಣಾಮ ಬೀರುತ್ತವೆ. ಇದು ಚರ್ಮದಲ್ಲಿ ಕಾಲಜನ್ ಅನ್ನು ಒಡೆಯುತ್ತದೆ. ಆಕ್ಸಿಡೇಟಿವ್ ಒತ್ತಡ, ಉರಿಯೂತ ಮತ್ತು ಕ್ರಮೇಣ ಜೀವಕೋಶದ ಹಾನಿಗೆ ಕಾರಣವಾಗುತ್ತದೆ.
ಕಾಲಾನಂತರದಲ್ಲಿ, ಈ ಬದಲಾವಣೆಗಳು ಹೈಪರ್ಪಿಗ್ಮೆಂಟೇಶನ್ ಮತ್ತು ಅಕಾಲಿಕ ವಯಸ್ಸಾಗುವಿಕೆಗೆ ಕಾರಣವಾಗಬಹುದು ಎಂದು ಸಕ್ರಾ ವರ್ಲ್ಡ್ ಆಸ್ಪತ್ರೆಯ ಚರ್ಮರೋಗ ತಜ್ಞರು ಡಾ. ಕಾಂಚನ್ ಟೋಪ್ಗಿ ಹೇಳಿದ್ದಾರೆ.
ಹೀಗಾಗಿ ಜನರು ಹಗುರವಾದ ಹತ್ತಿ ಬಟ್ಟೆಗಳನ್ನು ಧರಿಸುವುದು, ಟೋಪಿ ಅಥವಾ ಛತ್ರಿ ಬಳಸುವುದು, ಹೆಚ್ಚು ಬಿಸಿಲಿರುವ ಸಮಯದಲ್ಲಿ ಹೊರಗೆ ಹೋಗದೆ ತಂಪಗಿರುವ ಸ್ಥಳಗಳಲ್ಲಿ ಉಳಿಯುವುದು ಮುಖ್ಯ. ಜೊತೆಗೆ ಸಾಕಷ್ಟು ನೀರು ಕುಡಿಯುವುದು, ತಣ್ಣಗಿರುವ ಆಹಾರ ಸೇವಿಸುವುದು ಹಾಗೂ ಉಪ್ಪು, ಖಾರ ಮತ್ತು ಎಣ್ಣೆ ಹೆಚ್ಚು ಇರುವ ಆಹಾರಗಳ ಸೇವನೆ ಕಡಿಮೆ ಮಾಡುವುದು. ವಿಟಮಿನ್ ಸಿ ಭರಿತ ಆಹಾರಗಳು, ಮೊಸರು ಅನ್ನ, ಸಲಾಡ್ ಗಳನ್ನು ಸೇವನೆ ಮಾಡಬೇದು ಎಂದು ಮಣಿಪಾಲ್ ಆಸ್ಪತ್ರೆಯ ಚರ್ಮರೋಗ ತಜ್ಞೆ ಡಾ. ಶಾಂತಿನಿ ವಿಜಯಸೂರಿಯರ್ ಅವರು ಸಲಹೆ ನೀಡಿದ್ದಾರೆ.