ಬೆಂಗಳೂರು: ಅಕ್ರಮವಾಗಿ ಬರೊಬ್ಬರಿ 390 ಕೆ.ಜಿ ತಂಬಾಕನ್ನು ರವಾನೆ ಮಾಡುತ್ತಿದ್ದ ವ್ಯಕ್ತಿಯೋರ್ವ ಇದನ್ನು ಪ್ರಶ್ನಿಸಿದ ಪೊಲೀಸ್ ಅನ್ನೇ ಕಾರಿನ ಬಾನೆಟ್ ಮೇಲೆ ಎಳೆದೊಯ್ದ ಭೀಕರ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಬೆಂಗಳೂರು ಹೊರವಲಯದ ಬೆಂಗಳೂರು-ಹೊಸೂರು ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ತಂಬಾಕು ಮತ್ತು ಮದ್ಯವನ್ನು ಕಳ್ಳಸಾಗಣೆ ಮಾಡುತ್ತಿದ್ದ 34 ವರ್ಷದ ವ್ಯಕ್ತಿಯನ್ನು ಹರಸಾಹಸಪಟ್ಟು ಹಿಡಿದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತನನ್ನು ಯಾರಬ್ ಪಾಷಾ ಎಂದು ಗುರುತಿಸಲಾಗಿದೆ.
ಭಾನುವಾರ ಕರ್ನಾಟಕ-ತಮಿಳುನಾಡು ಗಡಿಯಲ್ಲಿರುವ ಜುಜ್ವಾಡಿ ಚೆಕ್ಪಾಯಿಂಟ್ ಬಳಿ ಆರೋಪಿಯ ವಾಹನವನ್ನು ತಪಾಸಣೆ ಮಾಡುವಾಗ ಕಾರಿನಲ್ಲಿ ತಂಬಾಕು ಮತ್ತು ಅಕ್ರಮ ಮದ್ಯ ಪತ್ತೆಯಾಗಿತ್ತು. ಈ ವೇಳೆ ಸಿಕ್ಕಿಬೀಳುವ ಭೀತಿಯಲ್ಲಿ ದುಷ್ಕರ್ಮಿ ಪರಾರಿಯಾಗಲು ಯತ್ನಿಸಿದ್ದಾನೆ.
ಆದರೆ ಅಲ್ಲಿ ಕರ್ತವ್ಯ ನಿರತರಾಗಿದ್ದ ಮುಖ್ಯಪೇದೆ ರಾಜೀವ್ ಎಂಬುವವರು ಕಾರಿನ ಬಾನೆಟ್ ಹಿಡಿದು ಕಾರನ್ನು ನಿಲ್ಲಿಸಲು ಯತ್ನಿಸಿದ್ದಾರೆ. ಆದರೆ ಆರೋಪಿ ಯಾರಬ್ ಪಾಷಾ ಕಾರನ್ನು ನಿಲ್ಲಿಸಿದೇ ಪೇದೆ ಸಮೇತವಾಗಿ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾನೆ.
ಇದು ಅದೇ ದಾರಿಯಲ್ಲಿ ಚಲಿಸುತ್ತಿದ್ದ ಬೇರೊಂದು ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆರೋಪಿ ಪಾಷಾ ಸುಮಾರು 500 ಮೀಟರ್ ಗಳ ವರೆಗೂ ಪೇದೆಯನ್ನು ಬಾನೆಟ್ ಮೇಲೆ ಎಳೆದೊಯ್ದಿದ್ದಾನೆ. ಅದೃಷ್ಟವಶಾತ್, ಹೆಡ್ ಕಾನ್ಸ್ಟೆಬಲ್ ಗಂಭೀರ ಗಾಯಗಳಿಲ್ಲದೆ ಪಾರಾಗಿದ್ದಾರೆ.
ನಂತರ ಪೊಲೀಸರು ಆರೋಪಿ ಯಾರಬ್ ಪಾಷಾನನ್ನು ಬಂಧಿಸಿ ಅಕ್ರಮವಾಗಿ ಸಾಗಿಸುತ್ತಿದ್ದ ಸರಕುಗಳನ್ನು ವಶಪಡಿಸಿಕೊಂಡರು. ಅಧಿಕಾರಿಗಳು ವಾಹನದಿಂದ ಸುಮಾರು 2.2 ಲಕ್ಷ ರೂ. ಮೌಲ್ಯದ 390 ಕೆಜಿ ಗುಟ್ಕಾ (ತಂಬಾಕು) ಮತ್ತು ಮದ್ಯವನ್ನು ವಶಪಡಿಸಿಕೊಂಡರು.