ಬೆಂಗಳೂರು: ಪ್ಯಾರಾಮೆಡಿಕಲ್ ಕೋರ್ಸ್ಗಳಿಗೆ ಪ್ರವೇಶ ಪಡೆಯಲು ವಿಜ್ಞಾನ ಹಿನ್ನೆಲೆಯ ದ್ವಿತೀಯ ಪಿಯುಸಿ (Second PUC) ವಿದ್ಯಾರ್ಥಿಗಳಿಗಷ್ಟೇ ಅರ್ಹತೆ ಇರಲಿದೆ ಎಂಬ ಸಹಾಯಕ ಮತ್ತು ಆರೋಗ್ಯ ಸೇವಾ ವೃತ್ತಿಗಳ ರಾಷ್ಟ್ರೀಯ ಆಯೋಗ (NCAHP) ತೀರ್ಮಾನದಿಂದ ಕರ್ನಾಟಕದ ಪ್ಯಾರಾಮೆಡಿಕಲ್ ಕಾಲೇಜುಗಳು ಮುಚ್ಚುವ ಭೀತಿಯಲ್ಲಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ ತಿಳಿಸಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಎಂಎಲ್ಸಿ ಐವಾನ್ ಡಿಸೋಜ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಉತ್ತರಿಸಿದರು. ಆಯೋಗದ ಹೊಸ ನಿಯಮದಿಂದ ಕರ್ನಾಟಕದ 640 ಪ್ಯಾರಾಮೆಡಿಕಲ್ ಕಾಲೇಜುಗಳಲ್ಲಿ (32 ಸರ್ಕಾರಿ ಮತ್ತು 608 ಖಾಸಗಿ) ವಿದ್ಯಾರ್ಥಿಗಳ ಕೊರತೆ ಉಂಟಾಗುವ ಸಾಧ್ಯತೆ ಇದೆ ಎಂದು ಐವಾನ್ ಡಿ’ಸೋಜಾ ಆತಂಕ ವ್ಯಕ್ತಪಡಿಸಿದರು.
ಪ್ಯಾರಾಮೆಡಿಕಲ್ ಕೋರ್ಸ್ಗಳನ್ನು ಆಯ್ಕೆಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಇದು ದೊಡ್ಡ ಅಡ್ಡಿಯಾಗಿದೆ ಎಂದು ಶಾಸಕರು ಹೇಳಿದರು.
NCAHP ವೃತ್ತಪತ್ರಿಕೆಯನ್ನು ಉಲ್ಲೇಖಿಸಿದ ಸಚಿವ ಶರಣ್ ಪ್ರಕಾಶ್ ಪಾಟೀಲ್, ಈ ನಿಯಮವು ದೇಶದಾದ್ಯಂತ ಅನ್ವಯವಾಗುತ್ತದೆ ಎಂದರು. ಕರ್ನಾಟಕದಲ್ಲಿ ಸಾವಿರಾರು ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಬಳಿಕ ಪ್ಯಾರಾಮೆಡಿಕಲ್ ಕೋರ್ಸ್ಗಳನ್ನು ಆಯ್ಕೆಮಾಡುತ್ತಾರೆ. ಆದರೆ ಈಗ ಸಹಾಯಕ ಮತ್ತು ಆರೋಗ್ಯ ಸೇವಾ ವೃತ್ತಿಗಳ ರಾಷ್ಟ್ರೀಯ ಆಯೋಗ ದ್ವಿತೀಯ ಪಿಯುಸಿ ವಿಜ್ಞಾನ ಹಿನ್ನೆಲೆಯ ವಿದ್ಯಾರ್ಥಿಗಳಿಗಷ್ಟೇ ಪ್ರವೇಶ ನೀಡಬೇಕು ಎಂದು ಕಡ್ಡಾಯಗೊಳಿಸಿದೆ. ಇದರಿಂದ ಪ್ಯಾರಾಮೆಡಿಕಲ್ ಕಾಲೇಜುಗಳು ಮುಚ್ಚುವ ಭೀತಿಯಲ್ಲಿವೆ ಎಂದು ಹೇಳಿದರು.
ಈ ವಿಷಯವಾಗಿ NCAHP ಅಧ್ಯಕ್ಷರೊಂದಿಗೆ ಮಾತನಾಡಿರುವುದಾಗಿ ಸಚಿವ ಶರಣ್ ಪ್ರಕಾಶ್ ಪಾಟೀಲ ತಿಳಿಸಿದರು.