ಬೆಂಗಳೂರು: ನಗರದಲ್ಲಿನ ಮೈಸೂರು ರಸ್ತೆ ಟ್ರಾಫಿಕ್ ಸಮಸ್ಯೆಗೆ ಬ್ರೇಕ್ ಹಾಕುವ ಸಲುವಾಗಿ ರಾಜ್ಯ ಸರ್ಕಾರ 810 ಕೋಟಿ ರೂ. ವೆಚ್ಚದ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಯೋಜನೆ ಕೈಗೆತ್ತಿಕೊಳ್ಳಲು ಮುಂದಾಗಿದ್ದು, ಯೋಜನೆಗಾಗಿ ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುತ್ತಿದೆ ಎಂದು ತಿಳಿದುಬಂದಿದೆ.
ವಿಧಾನಪರಿಷತ್ನಲ್ಲಿ ಎಂಎಲ್ಸಿ ಶಿವಕುಮಾರ್ ಕೆ ಅವರ ಪ್ರಶ್ನೆಗೆ ಉತ್ತರಿಸಿದ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ.ಶಿವಕುಮಾರ್ ಅವರು, ಕಳೆದ ಎರಡು ವರ್ಷಗಳಿಂದ ಚಾಮರಾಜಪೇಟೆ ಮತ್ತು ಮೈಸೂರು ರಸ್ತೆಯ ಭಾಗದಲ್ಲಿ ಉಂಟಾಗುತ್ತಿರುವ ಭಾರಿ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕಾರ್ಯಸಾಧ್ಯತಾ ವರದಿಯನ್ನು ಸಿದ್ಧಪಡಿಸಲಾಗಿದೆ ಎಂದು ಮಕಾಹಿತಿ ನೀಡಿದರು.
ಈ ವರದಿ ಆಧರಿಸಿ, ಈಗ ಸಿರ್ಸಿ ಸರ್ಕಲ್ವರೆಗೆ ಇರುವ ಫ್ಲೈಓವರ್ನ್ನು BHEL-KIMCO ಜಂಕ್ಷನ್ವರೆಗೆ ವಿಸ್ತರಿಸುವ ಯೋಜನೆ ರೂಪಿಸಲಾಗಿದೆ. ಈ ಕಾರಿಡಾರ್, ಬೆಂಗಳೂರು ನಗರದ ಕೇಂದ್ರ ಭಾಗವನ್ನು ದಕ್ಷಿಣ-ಪಶ್ಚಿಮ ಉಪನಗರಗಳೊಂದಿಗೆ ಸಂಪರ್ಕಿಸುವ ಪ್ರಮುಖ ಮಾರ್ಗವಾಗಿದ್ದು, ಟ್ರಾಫಿಕ್ ದಟ್ಟಣೆ ಕಡಿಮೆ ಮಾಡುವ ನಿರೀಕ್ಷೆಯಿದೆ. ಡಿಪಿಆರ್ ಸಿದ್ಧಪಡಿಸಿದ ನಂತರ, ಪ್ರಸ್ತಾವನೆಯನ್ನು ಆಡಳಿತಾತ್ಮಕ ಅನುಮೋದನೆಗಾಗಿ ಪರಿಶೀಲಿಸಲಾಗುತ್ತಿದೆ.
ಇದಲ್ಲದೆ, ಈ ಭಾಗದಲ್ಲಿ ಇತರ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳು ಸಹ ಪ್ರಗತಿಯಲ್ಲಿವೆ. ನಾಯಂಡಹಳ್ಳಿ ಫ್ಲೈಓವರ್ ನಂತರ ರಾಜರಾಜೇಶ್ವರಿನಗರದ ಬಳಿ ಆರ್ಚ್ ಫ್ಲೈಓವರ್ ನಿರ್ಮಾಣ ಕಾರ್ಯ ಪ್ರಾರಂಭವಾಗಿದ್ದು, ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ರಾಜರಾಜೇಶ್ವರಿನಗರ ಮುಖ್ಯರಸ್ತೆಯಿಂದ ಕೆಂಗೇರಿವರೆಗೆ ರಸ್ತೆ ಸುಧಾರಣಾ ಕಾಮಗಾರಿಗಳು 75 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿದ್ದು, ಪೂರ್ಣಗೊಳ್ಳುವ ಹಂತದಲ್ಲಿವೆ ಎಂದು ಹೇಳಿದರು.
ಇದೇ ವೇಳೆ ಎಲಿವೇಟೆಡ್ ಕಾರಿಡಾರ್ ಯೋಜನೆಯನ್ನು ಹೊರತುಪಡಿಸಿ, ಮೈಸೂರು ರಸ್ತೆಯ ಉದ್ದಕ್ಕೂ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸುರಂಗ ರಸ್ತೆ ಅಥವಾ ಮಳೆನೀರಿನ ಚರಂಡಿಗಳ ಉದ್ದಕ್ಕೂ ಇರುವ ರಸ್ತೆಗಳಂತಹ ಪರ್ಯಾಯ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಯಾವುದೇ ನಿರ್ದಿಷ್ಟ ಪ್ರಸ್ತಾಪವಿಲ್ಲ ಎಂದು ಸ್ಪಷ್ಟಪಡಿಸಿದರು.