ಬೆಂಗಳೂರು: ಕಾನೂನು ವೃತ್ತಿಯಲ್ಲಿರುವ ಮಹಿಳೆಯರಿಗೆ "ಔಪಚಾರಿಕ ಸಮಾನತೆ"ಯನ್ನು ನೈಜವಾಗಿ ಮತ್ತು ಜೀವಂತ ಅನುಭವಗಳಾಗಿ ಪರಿವರ್ತಿಸುವ ಅಗತ್ಯವನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಶನಿವಾರ ಒತ್ತಿ ಹೇಳಿದರು.
ಇಂದು ನಗರದ ಕರ್ನಾಟಕ ನ್ಯಾಯಾಂಗ ಅಕಾಡೆಮಿ ಸಭಾಂಗಣದಲ್ಲಿ ಬಾರ್ ಅಸೋಸಿಯೇಷನ್ ಆಫ್ ಇಂಡಿಯಾ, ಕರ್ನಾಟಕ ನ್ಯಾಯಾಂಗ ಅಕಾಡೆಮಿ ಮತ್ತು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಸಿಜೆಐ ಸೂರ್ಯಕಾಂತ್ ಅವರು, ಮಹಿಳಾ ವಕೀಲರು ಎದುರಿಸುತ್ತಿರುವ ಸವಾಲುಗಳು ಮತ್ತು ವ್ಯವಸ್ಥಿತ ಪರಿಹಾರಗಳ ಅಗತ್ಯವನ್ನು ದಾಖಲಿಸಿದ್ದ ಸಮೀಕ್ಷೆಯ ಪ್ರಮುಖ ಸಂಶೋಧನೆಗಳನ್ನು ಎತ್ತಿ ತೋರಿಸಿದರು.
"ನಮ್ಮ ಸಾಂವಿಧಾನಿಕ ಚೌಕಟ್ಟಿನೊಳಗೆ ಸಮಾನತೆಯ ಬಗ್ಗೆ ಮಾತನಾಡುವಾಗ, ಈ ಸಮಾನತೆಯು ಕೇವಲ ಕಾಗದಕ್ಕೆ ಸೀಮಿತವಾಗದೇ ವಾಸ್ತವಕ್ಕೆ ಬರಬೇಕು. ಸಮಾನತೆಯನ್ನು ಜೀವಂತ ಅನುಭವಗಳಾಗಿ ಪರಿವರ್ತಿಸಬೇಕು" ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.
ಮಹಿಳಾ ವಕೀಲರು ಸಿದ್ಧಪಡಿಸಿದ್ದ ಸಮೀಕ್ಷೆಯನ್ನು ಶ್ಲಾಘಿಸಿದ ಸಿಜೆಐ, ಇದನ್ನು "ಬಹಳ ಗಮನಾರ್ಹ ಮತ್ತು ಅತ್ಯಂತ ವೈಜ್ಞಾನಿಕ ಸಮೀಕ್ಷೆ" ಎಂದು ಬಣ್ಣಿಸಿದರು.
ಈ ಸಮೀಕ್ಷೆಯನ್ನು ಮಾರ್ಗದರ್ಶಿ ಚೌಕಟ್ಟು ಎಂದು ಬಣ್ಣಿಸುತ್ತಾ, "ಈ ವರದಿಯು ಒಂದು ಮಾರ್ಗದರ್ಶಿ ಪುಸ್ತಕವಾಗಿದೆ. ಇದು ನಮಗೆ ಒಂದು ಸಣ್ಣ ಸಂವಿಧಾನ ಇದ್ದಂತೆ" ಎಂದು ಅವರು ಹೇಳಿದರು.
ಇದು ಲಿಂಗ ತಾರತಮ್ಯವನ್ನು ತೊಡೆದುಹಾಕಲು ಮತ್ತು ಸಮಾನತೆಯ ಸಾಂವಿಧಾನಿಕ ಭರವಸೆಯನ್ನು ಸಾಕಾರಗೊಳಿಸಲು ಸಹಾಯ ಮಾಡುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಎಲ್ಲಾ ಪ್ರಾದೇಶಿಕ ಭಾಷೆಗಳಿಗೂ ತೀರ್ಪು ಅನುವಾದ
ಸುಪ್ರೀಂ ಕೋರ್ಟ್ ತೀರ್ಪುಗಳನ್ನು 16 ಭಾಷೆಗಳಿಗೆ ಅನುವಾದ ಮಾಡಲಾಗಿದೆ. ಮುಂದೆ ಎಲ್ಲಾ ಪ್ರಾದೇಶಿಕ ಭಾಷೆಗಳಿಗೂ ಅನುವಾದ ಮಾಡುವ ಪ್ರಯತ್ನಗಳು ನಡೆಯುತ್ತಿವೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದರು.