ಚಿತ್ರದುರ್ಗ: ಭೀಕರ ಆ್ಯಸಿಡ್ ದಾಳಿಯೊಂದರಲ್ಲಿ ಮಹಿಳೆ ಹಾಗ ಮೂವರು ಮಕ್ಕಳು ಸೇರಿ ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆಯೊಂದು ಚಿತ್ರದುರ್ಗದ ಮಲಪ್ಪನಹಟ್ಟಿ ಪ್ರದೇಶದಲ್ಲಿ ಗುರುವಾರ ಸಂಜೆ ನಡೆದಿದೆ.
ತಹಸೀನಾ ಭಾನು (47), ನಗ್ಮಾ ನಾಯಕ್ (49), ರೋಶ್ನಿ (12), ನೇಹಾ (27) ಮತ್ತು ಇಕ್ಸ್ರಾ ಫಾತಿಮಾ (4) ಆ್ಯಸಿಡ್ ದಾಳಿಯಲ್ಲಿ ಗಾಯಗೊಂಡಿದ್ದಾರೆ.
ಚಿತ್ರದುರ್ಗ ನಗರದ ನೆಹರು ನಗರದ ಸುಹೈಲ್ ಬಾಷಾ ಅಲಿಯಾಸ್ ಸುಹೈಲ್ (50) ಈ ಹೇಯ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ತಸೀನಾ ಬಾನು ಅವರಿಂದ ವಿಚ್ಛೇದನ ಪಡೆದಿದ್ದ ಸುಹೈಲ್ ಕೋಪದಿಂದ ಆಕೆಯ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿ, ನಂತರ ಆಕೆಯ ಕೈ ಮತ್ತು ಕಾಲುಗಳ ಮೇಲೆ ಆ್ಯಸಿಡ್ ಸುರಿದಿದ್ದಾನೆ.
ಈ ನಡುವೆ ಜಗಳ ತಡೆಯಲು ಮಧ್ಯಪ್ರವೇಶಿಸಿದ ನಗ್ಮಾ ನಾಯ್ಕ್ ಮತ್ತು ಮೂವರು ಮಕ್ಕಳ ಮುಖ, ಕೈ ಮತ್ತು ಕಾಲುಗಳಿಗೂ ಆ್ಯಸಿಡ್'ನಿಂದ ಗಾಯಗಳಾಗಿವೆ. ಗಾಯಗೊಂಡ ಎಲ್ಲರನ್ನೂ ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಕೋಟೆ ಪೊಲೀಸರು ದೂರು ದಾಖಲಿಸಿಕೊಂಡು ಘಟನೆಯ ತನಿಖೆ ನಡೆಸುತ್ತಿದ್ದಾರೆ.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ವಿಜಯ್ ಅವರು ಆಸ್ಪತ್ರೆಯಲ್ಲಿ ಗಾಯಾಳುಗಳನ್ನು ಭೇಟಿ ಮಾಡಿ ಅವರ ಆರೋಗ್ಯ ಸ್ಥಿತಿಯ ಬಗ್ಗೆ ವಿಚಾರಿಸಿದರು. ಈ ಮಧ್ಯೆ ಪೊಲೀಸರು ಮೂರು ತಂಡಗಳನ್ನು ರಚಿಸಿ ಘಟನೆಯ ತನಿಖೆ ನಡೆಸುತ್ತಿದ್ದಾರೆ.