ಮಡಿಕೇರಿ: ವಿರಾಜಪೇಟೆ ವ್ಯಾಪ್ತಿಯಲ್ಲಿ ಮಾನವ-ಆನೆ ಸಂಘರ್ಷಕ್ಕೆ ಕಾರಣವಾಗಿದ್ದ ಮತ್ತೊಂದು ಒಂಟಿ ಸಲಗವವನ್ನು ಸೆರೆ ಹಿಡಿಯುವಲ್ಲಿ ಕೊಡಗು ವಿಭಾಗದ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಮೂರು ಗಂಟೆಗಳ ಯಶಸ್ವಿ ಕಾರ್ಯಾಚರಣೆ ಬಳಿಕ ಸುಮಾರು 35 ವರ್ಷದ ಒಂಟಿ ಸಲಗವನ್ನು ಯಶಸ್ವಿಯಾಗಿ ಸೆರೆ ಹಿಡಿಯಲಾಗಿದೆ.
ಕಾಡಾನೆಗಳ ಚಲನವಲನದ ಹೆಚ್ಚಳ ಹಾಗೂ ಕಕ್ಲೂರು, ಚೆಂಬ ಬೆಳ್ಳೂರು ಸುತ್ತಮುತ್ತಲ ಗ್ರಾಮಗಳ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಒಂಟಿ ಸಲಗ ಸೆರೆ ಹಿಡಿಯಲು ಸರ್ಕಾರ ಅನುಮತಿ ನೀಡಿತ್ತು.
ಭಾನುವಾರ ಬೆಳಗ್ಗೆ ಆನೆ ಪತ್ತೆಯಾದ ನಂತರ ಸೆರೆ ಹಿಡಿಯುವ ಕಾರ್ಯಾಚರಣೆ ಆರಂಭವಾಗಿದ್ದು, ಮಧ್ಯಾಹ್ನದ ವೇಳೆಗೆ ಅರಣ್ಯಾಧಿಕಾರಿಗಳು ಯಶಸ್ವಿಯಾಗಿ ಒಂಟಿ ಸಲಗವನ್ನು ಸೆರೆ ಹಿಡಿದಿದ್ದಾರೆ.
ದುಬಾರೆ ಹಾಗೂ ಮತ್ತಿಗೋಡು ಶಿಬಿರದ ಸಾಕಾನೆಗಳಾದ ಅಭಿಮನ್ಯು, ಮಹೇಂದ್ರ, ಕಂಜನ್, ಭೀಮ, ಸುಗ್ರೀವ ಮತ್ತು ಹರ್ಷ ಸೇರಿದಂತೆ 100 ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಕುಕ್ಲೂರು ಗ್ರಾಮದ ಎಸ್ಟೇಟ್ ಬಳಿ ಆನೆ ಪತ್ತೆಯಾಗಿದ್ದು, ಪಶುವೈದ್ಯ ಡಾ.ರಮೇಶ್ ಮತ್ತು ಶಾರ್ಪ್ ಶೂಟರ್ ರಂಜನ್ ಸಾಕಾನೆಗಳ ಸಹಾಯದಿಂದ ಬಂದೂಕಿನಿಂದ ಅರವಳಿಕೆ ನೀಡಿ ಶಾಂತಗೊಳಿಸಿದ್ದಾರೆ. ಪ್ರತಿರೋಧದ ಹೊರತಾಗಿಯೂ ಸಾಕಾನೆಗಳ ಸಹಾಯದಿಂದ ಸೆರೆಯಾದ ಕಾಡಾನೆಯನ್ನು ಟ್ರಂಕ್ ಗೆ ಹತ್ತಿಸಿಕೊಂಡು ಮತ್ತಿಗೋಡು ಶಿಬಿರಕ್ಕೆ ಸ್ಥಳಾಂತರಿಸಲಾಯಿತು.