ಬೆಂಗಳೂರು: ಮಧ್ಯ ಏಷ್ಯಾ ಯುದ್ಧದ ಪರಿಣಾಮ ಇದೀಗ ಬೆಂಗಳೂರಿನ ಹೋಟೆಲ್ ಉದ್ಯಮಕ್ಕೂ ಭಾರೀ ಹೊಡೆತ ನೀಡಿದ್ದು, ಎಲ್ಪಿಜಿ ಕೊರತೆಯಿಂದ ಮೂರು ವಾರಗಳಲ್ಲಿ ಸುಮಾರು 150 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.
ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಗೌರವಾಧ್ಯಕ್ಷ ಪಿಸಿ ರಾವ್ ಅವರು ಮಾತನಾಡಿ, “ಮಾರ್ಚ್ 7–8ರಿಂದ ಆರಂಭವಾದ ಎಲ್ಪಿಜಿ ಕೊರತೆ ಹೋಟೆಲ್ಗಳ ದೈನಂದಿನ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿದ್ದು, ಪ್ರತಿ ವಾರ ಸುಮಾರು ರೂ.50 ಕೋಟಿ ನಷ್ಟ ಉಂಟಾಗಿದೆ ಎಂದು ಹೇಳಿದ್ದಾರೆ.
ಎಲ್ಪಿಜಿ ಕೊರತೆಯಿಂದ ಅನೇಕ ಹೋಟೆಲ್ಗಳು ತನ್ನ ಕಾರ್ಯಾಚರಣೆಯನ್ನು ಕಡಿಮೆ ಮಾಡಬೇಕಾಗಿ ಬಂದಿದೆ. ಕೆಲವು ಹೋಟೆಲ್ಗಳು ಮೆನುಗಳನ್ನು ಸೀಮಿತಗೊಳಿಸಿದರೆ, ಇನ್ನೂ ಕೆಲವು ಇಂಧನದ ಪರ್ಯಾಯ ಮಾರ್ಗಗಳನ್ನು ಬಳಸಲು ಆರಂಭಿಸಿವೆ. ಇಂಡಕ್ಷನ್ ಸ್ಟೌವ್, ಡೀಸೆಲ್ ಆಧಾರಿತ ಅಡುಗೆ ವ್ಯವಸ್ಥೆಗಳು, ಕೆಲವೆಡೆ ಮರದ ಇಂಧನ ಬಳಸುವ ಪರಿಸ್ಥಿತಿ ಎದುರಾಗಿದೆ.
ಇದಲ್ಲದೆ, ಕೆಲವು ಹೋಟೆಲ್ಗಳು ತಾತ್ಕಾಲಿಕವಾಗಿ ಬಾಗಿಲು ಮುಚ್ಚಬೇಕಾದ ಪರಿಸ್ಥಿತಿಯೂ ನಿರ್ಮಾಣವಾಗಿದೆ. ವಿಶೇಷವಾಗಿ ಚೈನೀಸ್ ಹಾಗೂ ಬಿರಿಯಾನಿ ತಿನಿಸುಗಳಿಗೆ ಹೆಸರಾದ ಹೋಟೆಲ್ಗಳು ಹೆಚ್ಚು ನಷ್ಟ ಅನುಭವಿಸಿವೆ ಎಂದು ತಿಳಿಸಿದ್ದಾರೆ.
ಸೋಮವಾರದಿಂದ ಭಾಗಶಃ ಎಲ್ಪಿಜಿ ಸರಬರಾಜು ಪುನರಾರಂಭವಾಗುವ ಸಾಧ್ಯತೆ ಇದ್ದು, ಹೋಟೆಲ್ಗಳಿಗೆ ಸಾಮಾನ್ಯ ಎಲ್ಪಿಜಿ ಪೂರೈಕೆಯಲ್ಲಿ ಸುಮಾರು ಶೇ. 50 ರಷ್ಟು ಸುಧಾರಣೆಗಳು ಕಂಡು ಬರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾಮಾನ್ಯ ಸರಬರಾಜಿನ ಸುಮಾರು 50% ಮಟ್ಟಕ್ಕೆ ಮರುಸ್ಥಾಪನೆ ಆಗಬಹುದು ಎಂದು ನಿರೀಕ್ಷಿಸಲಾಗಿದೆ. ಕರ್ನಾಟಕಕ್ಕೆ ಸುಮಾರು 50,000 ಸಿಲಿಂಡರ್ಗಳು ಲಭ್ಯವಾಗುವ ಸಾಧ್ಯತೆ ಇದ್ದು, ಅವುಗಳಲ್ಲಿ ಹೆಚ್ಚಿನವು ಬೆಂಗಳೂರಿಗೆ ಸಿಗುವ ನಿರೀಕ್ಷೆ ಇದೆ. ಆದರೆ, ಈ ಹಂಚಿಕೆಯು ಬೆಂಗಳೂರಿಗೆ ಮಾತ್ರವೇ ಅಥವಾ ಕರ್ನಾಟಕದಾದ್ಯಂತವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ರಾಜ್ಯವು ಸುಮಾರು 50,000 ಸಿಲಿಂಡರ್ಗಳನ್ನು ಸ್ವೀಕರಿಸುವ ಅಂದಾಜಿದೆ, ಬೆಂಗಳೂರಿಗೆ ಹೆಚ್ಚಿನ ಪಾಲು ಸಿಗುವ ನಿರೀಕ್ಷೆಯಿದೆ.
ಎರಡು ಸಿಲಿಂಡರ್ ಸಿಗುತ್ತಿದ್ದ ಜಾಗದಲ್ಲಿ ಈಗ ಒಂದು ಸಿಲಿಂಡರ್ ಸಿಕ್ಕರೂ ತಾತ್ಕಾಲಿಕವಾಗಿ ಕಾರ್ಯಾಚರಣೆ ನಡೆಸಬಹುದು. ಹೋಟೆಲ್ ಉದ್ಯಮಗಳು ಪುನರಾರಂಭವಾಗಲೇಬೈಕು. ಇಲ್ಲದಿದ್ದರೆ ನಾವು ಗ್ರಾಹಕರನ್ನು ಕಳೆದುಕೊಳ್ಳುವ ಮತ್ತು ಭಾರೀ ಆರ್ಥಿಕ ನಷ್ಟವನ್ನು ಎದುರಿಸುವ ಅಪಾಯವಿದೆ ಎಂದು ಹೇಳಿದ್ದಾರೆ.
ಇದೇ ವೇಳೆ, ಎಲ್ಪಿಜಿ ಸರಬರಾಜು ಸಮಸ್ಯೆ ಸಂಬಂಧ ಪ್ರಕರಣ ಹೈಕೋರ್ಟ್ನಲ್ಲಿ ವಿಚಾರಣೆಯಲ್ಲಿದ್ದು, ಸರ್ಕಾರ ಮತ್ತು ಸಂಬಂಧಿತ ಅಧಿಕಾರಿಗಳು ಸರಬರಾಜಿನ ಬಗ್ಗೆ ವಿವರ ಸಲ್ಲಿಸುವ ನಿರೀಕ್ಷೆಯಿದೆ.
ಹೋಟೆಲ್ ಉದ್ಯಮಿಗಳು ಶೀಘ್ರದಲ್ಲೇ ಸರಬರಾಜು ಸ್ಥಿರವಾಗಲಿದೆ ಎಂಬ ನಿರೀಕ್ಷೆಯೊಂದಿಗೆ ಮತ್ತೆ ಪೂರ್ಣ ಪ್ರಮಾಣದಲ್ಲಿ ಸೇವೆ ಆರಂಭಿಸಲು ಕಾಯುತ್ತಿದ್ದಾರೆ