ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಾರ್ಚ್ 28 ರಿಂದ ಪ್ರಾರಂಭವಾಗುವ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳಿಗೆ ರಾಜ್ಯ ಸರ್ಕಾರ ಅನುಮತಿ ನೀಡಿದ ಬೆನ್ನಲ್ಲೇ ವಿಧಾನಸಭೆಯಲ್ಲಿ ಟಿಕೆಟ್ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆದಿದೆ.
ನಾವು ವಿಐಪಿಗಳು, ಜನಸಾಮಾನ್ಯರಂತೆ ಕ್ಯೂನಲ್ಲಿ ನಿಲ್ಲಲು ಸಾಧ್ಯವಿಲ್ಲ. ಹೀಗಾಗಿ ಶಾಸಕರ ಕುಟುಂಬಕ್ಕೆ ತಲಾ ಐದು IPL ಟಿಕೆಟ್ ನೀಡಬೇಕು ಎಂದು ಸದನದಲ್ಲಿಯೇ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಆಗ್ರಹಿಸಿದರು.
ಶಾಸಕರಿಗೆ ಗೌರವ ಇಲ್ಲವಾ? ಒಂದು ಟಿಕೆಟ್ ಮಾತ್ರ ಕೊಡುತ್ತಾರೆ. ಹೀಗಿರುವಾಗ ನಮ್ಮ ಮನೆಯವರನ್ನು ಕರೆದುಕೊಂಡು ಹೋಗೊದು ಹೇಗೆ? ಎಂದು ಕಾಶಪ್ಪನವರ್ ಸದನದಲ್ಲಿ ನೋವು ತೋಡಿಕೊಂಡರು.
ಶಾಸಕರು ಮತ್ತು ಸಚಿವರಿಗೆ ಟಿಕೆಟ್ ನಿರಾಕರಿಸಿದ್ದಕ್ಕಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ವಿರುದ್ಧ ವಾಗ್ದಾಳಿ ನಡೆಸಿದ ಕಾಶಪ್ಪನವರ್, ಒಂದು ಟಿಕೆಟ್ ಕೊಡ್ತಾರೆ. ಮನೆಯವರನ್ನೆಲ್ಲಾ ಕರೆದುಕೊಂಡು ಹೋಗೊದು ಹೇಗೆ?. ಒಂದು ಟಿಕೆಟ್ಗೆ 5 ಸಾವಿರದಿಂದ 20 ಸಾವಿರ ರೂ ವೆಚ್ಚವಾಗುತ್ತದೆ. ಜನಸಾಮಾನ್ಯರ ಜೊತೆ ಹೋಗಿ ನಾವು ಕ್ಯೂನಲ್ಲಿ ನಿಲ್ಲಬೇಕಾ ಎಂದು ಪ್ರಶ್ನಿಸಿದರು.
ಬಿಜೆಪಿ, ಕಾಂಗ್ರೆಸ್ ಶಾಸಕರೂ ಸಹ ಟಿಕೆಟ್ಗಾಗಿ ಒಕ್ಕೊರಲಿನಿಂದ ಮನವಿ ಮಾಡಿದರು. ಕ್ರಿಕೆಟ್ನವರಿಗೆ ದುಡ್ಡಿನ ಕೊರತೆನಾ ಎಂದು ಅಶ್ವಥ್ ನಾರಾಯಣ್ ಪ್ರಶ್ನಿಸಿದರು. ಅಲ್ಲಿ ನಮಗೊಂದು ಪಾಸ್ ಕೊಡಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ದೂರಿದರು.
ಮೊನ್ನೆ 11 ಜನ ಸತ್ತಿದ್ದಾರೆ. ಜಾಗ ಕೊಟ್ಟಿರೋದು ಕ್ರಿಕೆಟ್ ಆಡೋಕೆ ಟ್ರೈನಿಂಗ್ಗೆ. ಆದರೆ ಅಲ್ಲಿ ಎಣ್ಣೆ ಹೊಡೆಯೋಕೆ ಅನುಮತಿ ಕೊಟ್ಟಿದ್ದಾರೆ. ಇದನ್ನು ಟೈಟ್ ಮಾಡಿ, ಬಾಯಿ ಮುಚ್ಕೊಂಡು ಬರುತ್ತಾರೆ. ಅವರ ಬಳಿ ಸಾವಿರಾರು ಕೋಟಿ ರೂ ದುಡ್ಡಿದೆ. ಆದರೆ ನಾವು ಒಂದು ಟಿಕೆಟ್ಗೆ ಅಂಗಲಾಚಬೇಕು. ನನ್ನ ಹೆಸರಲ್ಲೇ ಟಿಕೆಟ್ ಕಳಿಸ್ತಾರೆ. ಅದರಲ್ಲಿ ನನ್ನ ಹೆಂಡ್ತಿನೂ ಕಳುಹಿಸೋಕೆ ಆಗಲ್ಲ, ಮಗನನ್ನು ಕಳಿಸೋಕೂ ಆಗಲ್ಲ ಎಂದು ಅಶೋಕ್ ಬೇಸರ ವ್ಯಕ್ತಪಡಿಸಿದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಕಾಶಪ್ಪನವರ್, ಭದ್ರತೆಯಂತಹ ಸರ್ಕಾರಿ ಸೌಲಭ್ಯಗಳನ್ನು ಪಡೆದಿದ್ದರೂ, ಕೆಎಸ್ಸಿಎ, ಚುನಾಯಿತ ಪ್ರತಿನಿಧಿಗಳಿಗೆ ಗೌರವ ನೀಡುವಲ್ಲಿ ವಿಫಲವಾಗಿದೆ ಎಂದರು.
"ಕೆಎಸ್ ಸಿಎ, ಶಾಸಕರು, ಸಚಿವರು ಅಥವಾ ಅವರ ಕುಟುಂಬಗಳಿಗೆ ಟಿಕೆಟ್ಗಳನ್ನು ನೀಡುತ್ತಿಲ್ಲ. ಬದಲಾಗಿ, ಅವರು ಜನರಿಗೆ ಆನ್ಲೈನ್ನಲ್ಲಿ ಬುಕ್ ಮಾಡುವಂತೆ ಹೇಳುತ್ತಾರೆ. ಆನ್ಲೈನ್ ಬುಕಿಂಗ್ ಹೇಗೆ ಕೆಲಸ ಮಾಡುತ್ತದೆ ಎಂದು ನಮಗೆಲ್ಲರಿಗೂ ಗೊತ್ತಿದೆ. ಇದು ಬ್ಲಾಕ್ ಟಿಕೆಟ್ ಮಾರಾಟಕ್ಕೆ ಕಾರಣವಾಗುತ್ತದೆ. 5,000 ರೂ. ಟಿಕೆಟ್ಗಳನ್ನು 35,000 ರೂ. ಗೆ ಮಾರಾಟ ಮಾಡಲಾಗುತ್ತಿದೆ" ಎಂದು ಆರೋಪಿಸಿದರು.