ಬೆಂಗಳೂರು: ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸುವ ಮೂಲಕ ಜನರನ್ನು "ಮೂರ್ಖರನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಶುಕ್ರವಾರ ಆರೋಪಿಸಿದರು.
ಇದು ತೈಲ ಕಂಪನಿಗಳಿಗೆ ಲಾಭದಾಯಕವಾಗಿದ್ದು, ಜನ ಸಾಮಾನ್ಯ ಜನರಿಗೆ ಯಾವುದೇ ಪರಿಹಾರವನ್ನು ನೀಡುವುದಿಲ್ಲ ಎಂದಿದ್ದಾರೆ. ಇದನ್ನು ಕೇಂದ್ರ ಸರ್ಕಾರದಿಂದ ಬ್ಯಾಲೆನ್ಸ್ ಶೀಟ್ ನಿರ್ವಹಣೆ, ಅನುಕೂಲಕರ ಲೆಕ್ಕಪತ್ರ ನಿರ್ವಹಣೆ ಮತ್ತು ಹೆಡ್ ಲೈನ್ ನಿರ್ವಹಣೆ" ಎಂದು ಕರೆದಿದ್ದು, ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ನಂತರ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಬೆಲೆಗಳಲ್ಲಿ ಸಂಭಾವ್ಯ ಹೆಚ್ಚಳದ ಬಗ್ಗೆ ಎಚ್ಚರಿಕೆ ನೀಡಿದರು.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಜಾಗತಿಕ ತೈಲ ಬೆಲೆ ಏರಿಕೆಯಿಂದ ದೇಶಿಯ ಗ್ರಾಹಕರನ್ನು ರಕ್ಷಿಸುವ ಗುರಿಯೊಂದಿಗೆ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್ಗೆ 10 ರೂ. ಯಷ್ಟು ಕಡಿತಗೊಳಿಸಿದೆ. ಜೊತೆಗೆ, ಸರ್ಕಾರವು ಡೀಸೆಲ್ ಮತ್ತು ಏವಿಯೇಷನ್ ಟರ್ಬೈನ್ ಇಂಧನ (ATF) ರಫ್ತಿನ ಮೇಲೆ ಸುಂಕವನ್ನು ಪುನರ್ ವಿಧಿಸಿ, 43 ಲಕ್ಷ ಕೋಟಿ ರೂ. ಲೂಟಿ ಹೊಡೆದಿದೆ. ಇದು ಮೋದಿ ಸರ್ಕಾರ ಮತ್ತು ಬಿಜೆಪಿ ಕಳೆದ 11 ವರ್ಷಗಳಲ್ಲಿ ಭಾರತದ ಜನರ ಮೇಲೆ ತೆರಿಗೆ ವಿಧಿಸಿ ಸಂಗ್ರಹಿಸಿದ ಹಣ ಎಂದು ಸುರ್ಜೇವಾಲಾ ಪ್ರತಿಪಾದಿಸಿದರು.
ಕೇವಲ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಅಬಕಾರಿ ಮತ್ತು ಕಸ್ಟಮ್ಸ್ ಸುಂಕಗಳನ್ನು ವಿಧಿಸುವ ಮೂಲಕ ಪ್ರತಿನಿತ್ಯ 1,000 ಕೋಟಿ ರೂ. ಸಂಗ್ರಹಿಸುತ್ತಿದ್ದ ಮೋದಿ ಸರ್ಕಾರ ಕಳೆದ 11 ವರ್ಷಗಳಿಂದ ಎಷ್ಟು ಸಂಗ್ರಹಿಸಿದೆ ಎಂದು ಪ್ರಶ್ನಿಸಿದರು.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುರ್ಜೇವಾಲ, ಪಶ್ಚಿಮ ಏಷ್ಯಾದಲ್ಲಿ ಉದ್ಬವಿಸಿರುವ ಬಿಕ್ಕಟ್ಟಿನ ಪರಿಣಾಮ ನಯಾರ ತೈಲ ಕಂಪನಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆಯನ್ನು 5.30 ರೂ ಹಾಗೂ ಡೀಸೆಲ್ ಬೆಲೆಯನ್ನು 3 ರೂ. ಏರಿಕೆ ಮಾಡಿದೆ. ಏಪ್ರಿಲ್ 9 ಮತ್ತು 23 ರಂದು ಪಂಚ ರಾಜ್ಯಗಳ ಚುನಾವಣೆ ನಡೆಯಲಿದ್ದು, ಇದಾದ ಬಳಿಕ ಕೇಂದ್ರ ಸರ್ಕಾರ ಇಂಧನ ಬೆಲೆ ಏರಿಕೆ ಮಾಡುವುದು ಬಹುತೇಕ ಖಚಿತವಾಗಿದೆ ಎಂದು ತಿಳಿಸಿದರು.
ಜನರನ್ನು ದಾರಿ ತಪ್ಪಿಸಿ, ವಂಚಿಸುವ ಮೋದಿ ಸರ್ಕಾರದ ಕಾರ್ಯವೈಖರಿ ಮತ್ತೆ ಆರಂಭವಾಗಿದೆ. ಇದರ ಭಾಗವಾಗಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಸುಂಕ ಕಡಿತದ ತೀರ್ಮಾನ ಮಾಡಿದೆ. ಇದರಿಂದ ತೈಲ ಕಂಪನಿಗಳಿಗೆ ನೆರವಾಗಲಿದೆ ಹೊರತು ಜನಸಾಮಾನ್ಯರಿಗೆ ಯಾವುದೇ ಪ್ರಯೋಜನವಿಲ್ಲ. ಬಿಜೆಪಿಗೆ ಮತ ಹಾಕುವುದರಿಂದ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಬೆಲೆಗಳು ಹೆಚ್ಚಾಗುತ್ತವೆ. ಈ ಬಾರಿ ಮೋದಿ ಸರ್ಕಾರಕ್ಕೆ ಬುದ್ಧಿ ಕಲಿಸಿ, ಅವರನ್ನು ಅಧಿಕಾರದಿಂದ ದೂರವಿಟ್ಟರೆ ಹಣದುಬ್ಬರವನ್ನು ನಿಯಂತ್ರಿಸಬಹುದು ಎಂದರು.
ಚುನಾವಣೆ ನಂತರ ಇಂಧನ ಬೆಲೆಗಳು ಸ್ಥಿರವಾಗಿರುತ್ತವೆ ಎಂದು ಬಿಜೆಪಿ ಮತ್ತು ಪ್ರಧಾನಿ ಭರವಸೆ ನೀಡದಿದ್ದರೆ, ಕರ್ನಾಟಕ ಉಪಚುನಾವಣೆ ಸೇರಿದಂತೆ ಎಲ್ಲಾ ಐದು ರಾಜ್ಯಗಳಿಂದ ತಮ್ಮ ಅಭ್ಯರ್ಥಿಗಳನ್ನು ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದರು.