ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ 
ರಾಜ್ಯ

ಅಲ್ಪಸಂಖ್ಯಾತ ಕಾಲೊನಿಗಳ ಅಭಿವೃದ್ಧಿಗೆ 600 ಕೋಟಿ ರೂ. ಅನುಮೋದನೆ: ಸಚಿವ ಸಂಪುಟ ತೀರ್ಮಾನ-Video

ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯಡಿ ರಾಜ್ಯದ 11 ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿರುವ ಅಲ್ಪಸಂಖ್ಯಾತರ ಅತಿಹಿಂದುಳಿದ ಕಾಲೊನಿಗಳು, ಸ್ಲಂ ಪ್ರದೇಶಗಳನ್ನು ಸೇರಿಸಿ, ಮುಖ್ಯಮಂತ್ರಿ ವಿಶೇಷ ಅಭಿವೃದ್ಧಿ ಪ್ಯಾಕೇಜ್ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ.

ಬೆಂಗಳೂರು: ರಾಜ್ಯ ಸಚಿವ ಸಂಪುಟವು ನಿನ್ನೆ ಗುರುವಾರ 2026-27 ಮತ್ತು 2027-28 ಹಣಕಾಸು ವರ್ಷಗಳಿಗೆ ಅಲ್ಪಸಂಖ್ಯಾತರು ವಾಸಿಸುವ ಕಾಲೊನಿಗಳ ಅಭಿವೃದ್ಧಿಗೆ 600 ಕೋಟಿ ರೂಪಾಯಿ ಮೊತ್ತದ ಕಾರ್ಯಯೋಜನೆಗೆ ಅನುಮೋದನೆ ನೀಡಿದ್ದು, ಅದರ ಅನುಷ್ಠಾನಕ್ಕೂ ಹಸಿರು ನಿಶಾನೆ ತೋರಿದೆ.

ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯಡಿ ರಾಜ್ಯದ 11 ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿರುವ ಅಲ್ಪಸಂಖ್ಯಾತರ ಅತಿಹಿಂದುಳಿದ ಕಾಲೊನಿಗಳು, ಸ್ಲಂ ಪ್ರದೇಶಗಳನ್ನು ಸೇರಿಸಿ, ಮುಖ್ಯಮಂತ್ರಿ ವಿಶೇಷ ಅಭಿವೃದ್ಧಿ ಪ್ಯಾಕೇಜ್ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. ಸಂಬಂಧಿತ ಸಚಿವರ ಪ್ರಸ್ತಾವನೆಯನ್ನು ಹಣಕಾಸು ಇಲಾಖೆ ಅನುಮೋದಿಸಿದ್ದು, ಅದಕ್ಕೆ ಸಚಿವ ಸಂಪುಟವು ಸಹ ಒಪ್ಪಿಗೆ ನೀಡಿದೆ.

ಒಂದೇ ಬಾರಿಗೆ ಎರಡು ಹಣಕಾಸು ವರ್ಷಗಳಿಗೆ ಅನುಮೋದನೆ ನೀಡಿದ ಬಗ್ಗೆ ಕೇಳಿದ ಪ್ರಶ್ನೆಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್, ಹಿಂದಿನ ವರ್ಷಗಳಲ್ಲಿ ಪೂರ್ಣಗೊಳ್ಳದ ಕೆಲಸಗಳು ಸ್ವಾಭಾವಿಕವಾಗಿ ಮುಂದಿನ ಹಣಕಾಸು ವರ್ಷಕ್ಕೆ ವರ್ಗಾವಣೆಯಾಗುತ್ತದೆ ಎಂದು ಸ್ಪಷ್ಟಪಡಿಸಿದರು.

600 ಕೋಟಿ ರೂಪಾಯಿ ಮೊತ್ತದ ಎಲ್ಲ ಪ್ರಸ್ತಾವನೆಗಳು ಬಂದಿರುವುದರಿಂದ ನಾವು ಕಾರ್ಯಯೋಜನೆಗೆ ಅನುಮೋದನೆ ನೀಡಿದ್ದೇವೆ. ದಾವಣಗೆರೆ ದಕ್ಷಿಣ ಚುನಾವಣೆಯ ನಂತರ ಕೇವಲ ರಾತ್ರಿ ಬೆಳಗಾಗುವುದರೊಳಗೆ ತಕ್ಷಣ ಕಾರ್ಯಯೋಜನೆ ತಯಾರಿಸಲು ಸಾಧ್ಯವೇ ಎಂದು ಸಚಿವ ಹೆಚ್ ಕೆ ಪಾಟೀಲ್ ಇದು ಮುಸ್ಲಿಮರನ್ನು ತೃಪ್ತಿಪಡಿಸಲು ತೆಗೆದುಕೊಂಡ ಕ್ರಮವೇ ಎಂದು ಕೇಳಲಾದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

ಕಾರ್ಯಯೋಜನೆ ರೂಪಿಸುವ ಪ್ರಕ್ರಿಯೆ ಆರಂಭದಿಂದಲೇ ನಡೆದಿದ್ದು, ಅಂತಿಮವಾಗಿ ಅದು ಸಚಿವ ಸಂಪುಟದ ಅನುಮೋದನೆಗೆ ಬಂದಿದೆಯೆಂದು ಅವರು ಹೇಳಿದರು.

ಧರ್ಮಸ್ಥಳದ ಸೌಜನ್ಯ ಹತ್ಯೆ ಪ್ರಕರಣವನ್ನು ಮರು ತನಿಖೆ ನಡೆಸುವ ಕುರಿತು ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲು ಸೂಚಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಸುಪ್ರೀಂ ಕೋರ್ಟ್ ಕೇಳಿದರೆ ನಾವು ವರದಿ ಸಲ್ಲಿಸುತ್ತೇವೆ ಎಂದು ಸಚಿವರು ಉತ್ತರಿಸಿದರು.

ಮುಂದಿನ ಸಭೆಯಲ್ಲಿ ಎಸ್‌ಇಪಿ ಚರ್ಚೆ

ರಾಜ್ಯ ಶಿಕ್ಷಣ ನೀತಿ (SEP) ಕುರಿತು ಹೆಚ್ಚಿನ ಮಾಹಿತಿಯನ್ನು ಅಧಿಕಾರಿಗಳಿಂದ ಕೇಳಲಾಗಿರುವುದರಿಂದ, ಮುಂದಿನ ಸಭೆಯಲ್ಲಿ ಸಮಗ್ರ ಚರ್ಚೆ ನಡೆಸಲು ಸಚಿವ ಸಂಪುಟ ತೀರ್ಮಾನಿಸಿದೆ. ಆರ್ಥಿಕ ತಜ್ಞ ಪ್ರೊ. ಸುಖದೇವ್ ಥೋರಾಟ್ ನೇತೃತ್ವದ ಸಮಿತಿಯು, ರಾಜ್ಯದ ಮೇಲೆ ಬರುವ ಆರ್ಥಿಕ ಪರಿಣಾಮಗಳನ್ನು ಒಳಗೊಂಡಂತೆ ಕೆಲವು ಶಿಫಾರಸುಗಳನ್ನು ನೀಡಿದೆ ಎಂದರು.

ಹೊಸ ಆಂತರಿಕ ಅಥವಾ ಒಳ ಮೀಸಲು ಆದೇಶ ಶೀಘ್ರದಲ್ಲೇ

ನಿನ್ನೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ, ಏಪ್ರಿಲ್ 27ರಂದು ಹೊರಡಿಸಿದ್ದ ಪರಿಶಿಷ್ಟ ಜಾತಿಗಳ (SC) ಒಳ ಮೀಸಲು ಆದೇಶವನ್ನು ಹಿಂಪಡೆದು, ನೇಮಕಾತಿ ಮತ್ತು ಶಿಕ್ಷಣದಲ್ಲಿ ರೋಸ್ಟರ್ ಕುರಿತು ಕೆಲವು ತಿದ್ದುಪಡಿ ಸಹಿತ ಹೊಸ ಆದೇಶ ಹೊರಡಿಸಲು ತೀರ್ಮಾನಿಸಲಾಯಿತು. ಒಳ ಮೀಸಲಾತಿಯನ್ನು ಅಳವಡಿಸದೆ ಹೊರಡಿಸಿದ ಎಲ್ಲಾ ಅಧಿಸೂಚನೆಗಳನ್ನು ಹಿಂಪಡೆಯಲಾಗುವುದು.

ರೋಸ್ಟರ್ ಪಾಯಿಂಟ್‌ಗಳನ್ನು 400ಕ್ಕೆ ನಿಗದಿಪಡಿಸಲಾಗುವುದು. ಎ ವರ್ಗ (SC-ಎಡ), ಬಿ ವರ್ಗ (SC-ಬಲ) ಮತ್ತು ಸಿ ವರ್ಗ (ಭೋವಿ, ಲಂಬಾಣಿ, ಕೊರಚ, ಕೊರಮ ಮತ್ತು ಇತರ 59 ಜಂಗಮ ಜಾತಿಗಳು) ಎಂದು ವಿಭಾಗಿಸಲಾಗುತ್ತದೆ ಎಂದು ಹೆಚ್.ಕೆ. ಪಾಟೀಲ್ ತಿಳಿಸಿದ್ದಾರೆ. ಸಿ ವರ್ಗಕ್ಕೆ 20 ಶೇಕಡಾ ಮೀಸಲು ನೀಡಲಾಗುತ್ತದೆ. ಈ ಜಾತಿಗಳಿಂದ ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದರೆ, ಇತರರು ಆ ಹುದ್ದೆಗಳನ್ನು ಪಡೆಯಬಹುದು.

ನೇಮಕಾತಿಯಲ್ಲಿ ಮೂರು ಹುದ್ದೆಗಳಿಗಿಂತ ಕಡಿಮೆ ಇದ್ದರೆ, ಮೂರು ವರ್ಗಗಳೂ ಎಸ್‌ಸಿ ಸಾಮಾನ್ಯ ವರ್ಗದಡಿ ಸ್ಪರ್ಧಿಸಬೇಕು. ಸಚಿವ ಡಿ. ಸುಧಾಕರ್ ಅವರ ಆರೋಗ್ಯದ ಕುರಿತು ಹರಿದಾಡುತ್ತಿರುವ ವದಂತಿಗಳ ಬಗ್ಗೆ ಕೂಡ ಸಚಿವ ಸಂಪುಟ ಚರ್ಚೆ ನಡೆಸಿದ್ದು, ಅವರ ಆರೋಗ್ಯದ ಕುರಿತು ಪ್ರಕಟಣೆ ನೀಡುವುದನ್ನು ಕುಟುಂಬದ ನಿರ್ಧಾರಕ್ಕೆ ಬಿಟ್ಟಿದೆ ಎಂದು ಮೂಲಗಳು ತಿಳಿಸಿವೆ.

ಸಚಿವ ಸಂಪುಟ ಕೈಗೊಂಡ ಇತರೆ ತೀರ್ಮಾನಗಳು

  • ಹೈದರಾಬಾದ್-ಬೆಂಗಳೂರು ನಡುವೆ 607.03 ಕಿಮೀ ಉದ್ದದ ಹೈ ಸ್ಪೀಡ್ ರೈಲು ಕಾರಿಡಾರ್‌ಗೆ ಅನುಮೋದನೆ. 15 ನಿಲ್ದಾಣಗಳಿದ್ದು, ಕರ್ನಾಟಕದ ಒಳಗೆ 101.03 ಕಿಮೀ (ತುಮಕೂರು-ಚಿಕ್ಕಬಳ್ಳಾಪುರ-ಬೆಂಗಳೂರು ಗ್ರಾಮಾಂತರ) ಭಾಗವಿದೆ. ಅಳಿಪುರ, ದೇವನಹಳ್ಳಿ ಮತ್ತು ಕೊಡಿಹಳ್ಳಿ ನಿಲ್ದಾಣಗಳು ಇರಲಿವೆ. ಬೆಂಗಳೂರು-ಚೆನ್ನೈ ಕಾರಿಡಾರ್‌ಗೂ ಅನುಮೋದನೆ.

  • ಬೆಂಗಳೂರು ಸಿಗ್ನೇಚರ್ ಬಿಸಿನೆಸ್ ಪಾರ್ಕ್‌ನಲ್ಲಿ 140 ಎಕರೆ ಜಮೀನನ್ನು ಲೀಸ್-ಅಂಡ್-ಸೇಲ್ ಆಧಾರದ ಮೇಲೆ ಕ್ಯಾಲಿಫೋರ್ನಿಯಾದ Apride Materials Incorporated ಗೆ ಹಂಚಿಕೆ ಮಾಡಿ, ಅತ್ಯಾಧುನಿಕ ಸೆಮಿಕಂಡಕ್ಟರ್ ಮತ್ತು ಆರ್ & ಡಿ ಕೇಂದ್ರ ಸ್ಥಾಪನೆಗೆ ಅನುಮೋದನೆ; ಒಟ್ಟು ವೆಚ್ಚ 780 ಕೋಟಿ ರೂಪಾಯಿ

  • ಬೆಂಗಳೂರು-ಬೀದರ್-ಬೆಂಗಳೂರು ಮತ್ತು ಬೆಂಗಳೂರು-ಕಲಬುರಗಿ-ಬೆಂಗಳೂರು ಮಾರ್ಗಗಳಲ್ಲಿ ವಿಮಾನ ಸೇವೆ ನಿರ್ವಹಣೆಗೆ ಘೋದಾವತ್ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್ (ಸ್ಟಾರ್ ಏರ್‌ಲೈನ್ಸ್) ಗೆ ವರ್ಷಕ್ಕೆ 28.47 ಕೋಟಿ ರೂರಾಯಿ ಹಣಕಾಸು ಪ್ರೋತ್ಸಾಹ (VGF) ಅನುಮೋದನೆ.

  • ಕಟ್ಟಡ ಕಾರ್ಮಿಕರ ಮಕ್ಕಳಿಗೆ (1ರಿಂದ 12ನೇ ತರಗತಿ) ಪುಸ್ತಕ ಮತ್ತು ಸ್ಟೇಷನರಿ ಹೊಂದಿರುವ ಶಾಲಾ ಕಿಟ್‌ಗಳ ವಿತರಣೆ; ಒಟ್ಟು ವೆಚ್ಚ 115.84 ಕೋಟಿ ರೂಪಾಯಿ; ಪ್ರತಿ ಕಿಟ್‌ದ ಬೆಲೆ 8,625 ರೂಪಾಯಿ

  • ಭಾರತ ಸರ್ಕಾರದ ಅರ್ಬನ್ ಚಾಲೆಂಜ್ ಫಂಡ್ ಮೂಲಕ ಜಾರಿಗೆ ಬರುವ ಯೋಜನೆಗಳ ನಿರ್ವಹಣೆ ಮತ್ತು ಮೇಲ್ವಿಚಾರಣೆಗೆ ರಾಜ್ಯ ಮಟ್ಟದ ಉನ್ನತಾಧಿಕಾರ ಸಮಿತಿ ಮತ್ತು ತಾಂತ್ರಿಕ ಸಮಿತಿ ರಚನೆ.

  • ರಾಜ್ಯ ಹೆದ್ದಾರಿ-22 ರಿಂದ ಚಿನಮಳ್ಳಿ ರಾಜ್ಯ ಹೆದ್ದಾರಿ-171 (ಆಯ್ದ ಭಾಗಗಳಲ್ಲಿ) ಮರು ಅಸ್ಫಾಲ್ಟಿಂಗ್ ಕಾಮಗಾರಿಗೆ 28.97 ಕೋಟಿ ರೂ ಅನುಮೋದನೆ.

  • ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ನಿರ್ಮಾಣಕ್ಕೆ ಪರಿಷ್ಕೃತ ಅಂದಾಜು 75 ಕೋಟಿ ರೂ; ಹೆಚ್ಚುವರಿ 20 ಕೋಟಿ ರೂ ಮಂಜೂರು.

  • ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಆಡಳಿತ ವೈದ್ಯಾಧಿಕಾರಿ ಡಾ. ಅಶೋಕ್ ಕುಮಾರ್ ರೈ ವಿರುದ್ಧ ತನಿಖೆ ನಡೆಸುವ ಕುರಿತು ಕರ್ನಾಟಕ ಲೋಕಾಯುಕ್ತರ ಶಿಫಾರಸನ್ನು ತಿರಸ್ಕರಿಸಿ, ಇಲಾಖಾ ಮಟ್ಟದ ತನಿಖೆಗೆ ಮಾತ್ರ ಅನುಮತಿ.

  • ದಾಸನಪುರ ಹೋಬಳಿಯಲ್ಲಿ 12.04 ಏಕರೆ ಭೂಮಿಯನ್ನು ಉಪಗ್ರಹ ಮಾರುಕಟ್ಟೆ ಸ್ಥಾಪನೆಗೆ ಹಸ್ತಾಂತರ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನಾಯಕತ್ವ ಹಗ್ಗಜಗ್ಗಾಟ ನಡುವೆ ಗುಪ್ತಚರ ಮುಖ್ಯಸ್ಥರ ಬದಲಾವಣೆ: ಅಧಿಕಾರ ಇನ್ನೂ ನನ್ನ ಕೈಯಲ್ಲೇ ಇದೆ, ಕಠಿಣ ಸಂದೇಶ ರವಾನಿಸಿದ ಸಿದ್ದರಾಮಯ್ಯ..?

ಗಾಯದ ಮೇಲೆ ಬರೆ: ವಾಣಿಜ್ಯ LPG ಸಿಲಿಂಡರ್ ದರ ರೂ.993 ಏರಿಕೆ, ಹೊಸ ದರ ಇಂದಿನಿಂದ ಜಾರಿ..!

ಬಿಜೆಪಿಯಿಂದ ಹಣ ಪಡೆದು Exit polls ಪ್ರಕಟ: 226 ಕ್ಕೂ ಹೆಚ್ಚು ಸ್ಥಾನಗಳಲ್ಲಿ TMC ಗೆಲುತ್ತೆ- ಮಮತಾ ಬ್ಯಾನರ್ಜಿ!

IPL 2026: RCB ಬ್ಯಾಟಿಂಗ್ ವೈಫಲ್ಯ, 4 ವಿಕೆಟ್ ಗಳಿಂದ ಗೆದ್ದ ಗುಜರಾತ್ ಟೈಟನ್ಸ್!

ಭಬಾನಿಪುರದ ಸ್ಟ್ರಾಂಗ್ ರೂಮ್‌ಗೆ ದೌಡಾಯಿಸಿದ ಮಮತಾ ಬ್ಯಾನರ್ಜಿ! EVM ಟ್ಯಾಂಪರಿಂಗ್ ಆರೋಪ

SCROLL FOR NEXT