ಬೆಂಗಳೂರು: ಕರ್ನಾಟಕ ಸಾರ್ವಜನಿಕ ಸೇವಾ ಆಯೋಗ (KPSC)ದಲ್ಲಿ ನಡೆದಿರುವ ಅಕ್ರಮಗಳ ಕುರಿತು ಪರಿಶೀಲನೆ ನಡೆಸಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ವಿಧಾನಸಭೆಯ ಎಲ್ಲಾ ಪಕ್ಷಗಳ ಸದಸ್ಯರನ್ನು ಒಳಗೊಂಡ ಸದನ ಸಮಿತಿಯನ್ನು ರಚಿಸಲಾಗಿದ್ದು, ಈ ಸಮಿತಿಗೆ ಹಿರಿಯ ಕಾಂಗ್ರೆಸ್ ಶಾಸಕ ಆರ್.ವಿ.ದೇಶಪಾಂಡೆ ನೇತೃತ್ವ ವಹಿಸಿದ್ದಾರೆ.
ಈ ಸಮಿತಿಯ ಮುಖ್ಯ ಉದ್ದೇಶ ಕೆಪಿಎಸ್ಸಿಯಲ್ಲಿನ ಅಕ್ರಮಗಳನ್ನು ಸಂಪೂರ್ಣವಾಗಿ ಪರಿಶೀಲಿಸುವುದು, ಮುಂದಿನ ದಿನಗಳಲ್ಲಿ ಅಕ್ರಮಗಳು ಮರುಕಳಿಸದಂತೆ ಅಗತ್ಯ ಸುಧಾರಣೆಗಳ ಬಗ್ಗೆ ಶಿಫಾರಸು ಸಲ್ಲಿಸುವುದು ಹಾಗೂ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸುವುದಾಗಿದೆ.
ಸಮಿತಿಯಲ್ಲಿ ಶಾಸಕರಾದ ಹಂಪನಗೌಡ ಬಾದರ್ಲಿ, ಎಚ್ಸಿ ಬಾಲಕೃಷ್ಣ, ಪೊನ್ನಣ್ಣ ಎಎಸ್, ಕೆಎಂ ಶಿವಲಿಂಗೇಗೌಡ, ರಾಘವೇಂದ್ರ ಬಸವರಾಜ ಹಿಟ್ನಾಳ್ ಕೆ, ರೂಪಕಲಾ ಎಂ, ಅರಗ ಜ್ಞಾನೇಂದ್ರ, ಎಸ್ ಸುರೇಶ್ ಕುಮಾರ್, ಮಹೇಶ್ ಟೆಂಗಿನಕಾಯಿ ಮತ್ತು ಎಂಟಿ ಕೃಷ್ಣಪ್ಪ ಸೇರಿದಂತೆ ಹಲವು ಪ್ರಮುಖ ಸದಸ್ಯರು ಸೇರಿದ್ದಾರೆ.
ಈ ಸದನ ಸಮಿತಿಗೆ ಮೂರು ತಿಂಗಳ ಅವಧಿಯನ್ನು ನೀಡಲಾಗಿದ್ದು, ಈ ಅವಧಿಯೊಳಗೆ ಸಮಗ್ರ ವರದಿ ಸಲ್ಲಿಸಬೇಕಾಗಿದೆ. ವರದಿಯಲ್ಲಿ ಅಕ್ರಮಗಳನ್ನು ತಡೆಗಟ್ಟಲು ಸೂಕ್ತ ಕ್ರಮಗಳು, ನಿಯಮಾವಳಿ ಬದಲಾವಣೆಗಳು ಮತ್ತು ವ್ಯವಸ್ಥಾತ್ಮಕ ಸುಧಾರಣೆಗಳ ಬಗ್ಗೆ ಶಿಫಾರಸುಗಳನ್ನು ನೀಡುವ ನಿರೀಕ್ಷೆ ಇದೆ.
KPSC ನೇಮಕಾತಿಗಳ ಬಗ್ಗೆ ಇತ್ತೀಚೆಗೆ ಕೇಳಿಬಂದಿರುವ ಆರೋಪಗಳು ಹಾಗೂ ಪಾರದರ್ಶಕತೆ ಕುರಿತ ಪ್ರಶ್ನೆಗಳು ಹಿನ್ನೆಲೆಯಾಗಿ ಸರ್ಕಾರ ಈ ಕ್ರಮ ಕೈಗೊಂಡಿದ್ದು, ಯುವ ಅಭ್ಯರ್ಥಿಗಳ ವಿಶ್ವಾಸವನ್ನು ಪುನಃಸ್ಥಾಪಿಸಲು ಇದು ಪ್ರಮುಖ ಹೆಜ್ಜೆಯಾಗಿ ಪರಿಗಣಿಸಲಾಗುತ್ತಿದೆ.