ಬೆಂಗಳೂರು: ತುಮಕೂರು ಜಿಲ್ಲೆಯಲ್ಲಿ ನವಿಲುಗಳಲ್ಲಿ ಹಕ್ಕಿಜ್ವರ (H5N1) ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ, ರಾಜ್ಯ ಆರೋಗ್ಯ ಇಲಾಖೆ ಇನ್ಫ್ಲುಯೆನ್ಸಾ ರೀತಿಯ ಕಾಯಿಲೆಗಳ (ILI) ಉಲ್ಬಣ ಸಾಧ್ಯತೆ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.
ತುಮಕೂರು ಜಿಲ್ಲೆಯ ಕೋಳಿಹಳ್ಳಿ, ಬೈರಸಂದ್ರ, ಹುಲ್ಲೇನಹಳ್ಳಿ ಮತ್ತು ತಿಮ್ಮೇಗೌಡನಪಾಳ್ಯ ಗ್ರಾಮಗಳಲ್ಲಿ ಸಂಗ್ರಹಿಸಲಾಗಿದ್ದ ಸತ್ತ ನವಿಲುಗಳ ಮಾದರಿಗಳನ್ನು ಪರೀಕ್ಷಿಸಿದಾಗ ಈ ಸೋಂಕು ದೃಢಪಟ್ಟಿದೆ.
ಹಕ್ಕಿಜ್ವರವು ಪಕ್ಷಿಗಳಿಗೆ ತಗುಲುವ ವೈರಲ್ ರೋಗವಾಗಿದ್ದು, ಕೆಲ ಸಂದರ್ಭಗಳಲ್ಲಿ ಮಾನವರು ಸೇರಿದಂತೆ ಇತರ ಪ್ರಾಣಿಗಳಿಗೆ ಹರಡುವ ಸಾಧ್ಯತೆಯೂ ಇದೆ.
ವಿಶೇಷವಾಗಿ H5N1 ರೂಪಾಂತರವು ಮಾನವರಲ್ಲಿ ಗಂಭೀರ ಉಸಿರಾಟ ಸಂಬಂಧಿತ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಸೋಂಕು ದೃಢಪಟ್ಟ ನಂತರ ರಾಜ್ಯ ಹಾಗೂ ಜಿಲ್ಲಾ ಕ್ಷಿಪ್ರ ಪ್ರತಿಕ್ರಿಯಾ ತಂಡಗಳು ಸಭೆ ನಡೆಸಿ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಿವೆ.
0–3 ಕಿಮೀ ವ್ಯಾಪ್ತಿಯನ್ನು ಸೋಂಕಿತ ವಲಯವಾಗಿ ಹಾಗೂ 3–10 ಕಿಮೀ ವ್ಯಾಪ್ತಿಯನ್ನು ಕಣ್ಗಾವಲು ವಲಯವಾಗಿ ಗುರುತಿಸಲಾಗಿದೆ. ಒಟ್ಟು 38 ಗ್ರಾಮಗಳಲ್ಲಿ ಸುಮಾರು 20,432 ಜನರನ್ನು ಒಳಗೊಂಡಂತೆ ಮುಂದಿನ 10 ದಿನಗಳ ಕಾಲ ಜ್ವರ, ಇನ್ಫ್ಲುಯೆನ್ಸ ತರಹದ ಕಾಯಿಲೆ (ILI) ಮತ್ತು ತೀವ್ರ ಉಸಿರಾಟದ ಸೋಂಕು (SARI) ಗಾಗಿ ಮೇಲ್ವಿಚಾರಣೆ ನಡೆಯಲಿದೆ. ಇದೇ ವೇಳೆ ಸಾರ್ವಜನಿಕರಿಗೆ ಕೆಲವು ಪ್ರಮುಖ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಲು ಸೂಚಿಸಲಾಗಿದೆ.
ಅಸ್ವಸ್ಥ ಅಥವಾ ಸತ್ತ ಪಕ್ಷಿಗಳ ಸಂಪರ್ಕದಿಂದ ದೂರವಿರಬೇಕು, ಕೈಗಳನ್ನು ಸಾಬೂನು ಬಳಸಿ ನಿಯಮಿತವಾಗಿ ತೊಳೆಯಬೇಕು, ಪಕ್ಷಿಗಳು ಅಥವಾ ಹಿಕ್ಕೆಗಳನ್ನು ನಿರ್ವಹಿಸುವಾಗ ಸುರಕ್ಷತಾ ಸಾಧನಗಳನ್ನು ಬಳಸಬೇಕು, ಕೋಳಿ ಮಾಂಸ ಮತ್ತು ಮೊಟ್ಟೆಗಳನ್ನು ಚೆನ್ನಾಗಿ ಬೇಯಿಸಿ ಸೇವಿಸಬೇಕು ಮತ್ತು ಉಸಿರಾಟ ಸಮಸ್ಯೆ ಹೊಂದಿರುವವರೊಂದಿಗೆ ಹತ್ತಿರದ ಸಂಪರ್ಕ ತಪ್ಪಿಸಬೇಕು ಎಂದು ಸಲಹೆ ನೀಡಿದೆ.
ಈ ನಡುವೆ ಅರಣ್ಯ ಸಚಿವ ಈಶ್ವರ್ ಖಂಡ್ರೆಯವರು ಎಲ್ಲಾ ಮೃಗಾಲಯಗಳು ಹಾಗೂ ಪಕ್ಷಿಧಾಮಗಳಿಗೆ ಎಚ್ಚರಿಕೆ ವಹಿಸಲು ಸೂಚಿಸಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ಸಾವನ್ನಪ್ಪಿದ ನವಿಲುಗಳ ಮಾದರಿಗಳನ್ನು ಮಧ್ಯಪ್ರದೇಶದ ಭೋಪಾಲ್ನಲ್ಲಿರುವ ಪ್ರಯೋಗಾಲಯಗಳಿಗೆ ಕಳುಹಿಸಲಾಗಿತ್ತು. ವರದಿಯಲ್ಲಿ H5N1 ಸೋಂಕನ್ನು ದೃಢಪಡಿಸಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರದ ಮಾರ್ಗಸೂಚಿಗಳಂತೆ ರಾಜ್ಯದ ಎಲ್ಲಾ ಮೃಗಾಲಯಗಳು, ಪಕ್ಷಿಧಾಮಗಳು ಮತ್ತು ಅರಣ್ಯ ಪ್ರದೇಶಗಳಲ್ಲಿ ವಿಶೇಷ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ವಿಶೇಷವಾಗಿ ಮಾಗಡಿ ಕೆರೆ ಮತ್ತು ಕೊಕ್ಕರೆಬೆಳ್ಳೂರು ಸಮುದಾಯ ಮೀಸಲು ಪ್ರದೇಶದ ಮೇಲೆ ವಿಶೇಷ ಗಮನ ಹರಿಸಲಾಗಿದೆ.
ಅಧಿಕಾರಿಗಳಿಗೆ ಸತ್ತ ಅಥವಾ ಅಸ್ವಸ್ಥ ಪಕ್ಷಿಗಳ ಮಾದರಿಗಳನ್ನು ತಕ್ಷಣ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲು ಸೂಚಿಸಲಾಗಿದೆ. ಸ್ಥಳೀಯ ಹಾಗೂ ವಲಸೆ ಪಕ್ಷಿಗಳ ಸಾವುಗಳ ಬಗ್ಗೆ ತಕ್ಷಣ ವರದಿ ನೀಡುವಂತೆ ಸೂಚಿಸಲಾಗಿದ್ದು, ಅಗತ್ಯವಿದ್ದಲ್ಲಿ ವಿಶೇಷ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.