ಬೆಂಗಳೂರು: ಡಿಜಿಪಿ ಕೆ. ರಾಮಚಂದ್ರ ರಾವ್ ಅವರ ಅಮಾನತು ಆದೇಶವನ್ನು ರಾಜ್ಯಸರ್ಕಾರ ಬುಧವಾರ ವಾಪಸ್ ಪಡೆದಿದಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಅವರನ್ನು ಸೇವೆಗೆ ಮರುಸೇರ್ಪಡೆಗೊಳಿಸಿದೆ.
ಅಧಿಕೃತ ಆದೇಶದ ಪ್ರಕಾರ, 1993 ರ ಬ್ಯಾಚ್ನ ಐಪಿಎಸ್ ಅಧಿಕಾರಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಡೈರಕ್ಟರ್ ಜನರಲ್ ಆಫ್ ಪೋಲಿಸ್ (ಪೊಲೀಸ್ ಮ್ಯಾನುಯಲ್) ಆಗಿ ನೇಮಿಸಲಾಗಿದೆ.
ಈ ಹುದ್ದೆಯನ್ನು ಸಿಐಡಿ ಡಿಜಿಪಿ ಹುದ್ದೆಗೆ ಸಮಾನವೆಂದು ಪರಗಣಿಸಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಬಿ.ಎಸ್. ಸಂಜಯ್ ಆದೇಶಿಸಿದ್ದಾರೆ. ರಾಮಚಂದ್ರರಾವ್ ಇದೇ 31 ರಂದು ಸೇವೆಯಿಂದ ನಿವೃತ್ತಿ ಆಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿಯಾಗಿದ್ದ ರಾಮಚಂದ್ರರಾವ್ , ತಮ್ಮ ಕಚೇರಿಯಲ್ಲಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು ಎಂಬ ಆರೋಪದ ಮೇಲೆ ಜ.19 ರಂದು ಅಮಾನತು ಮಾಡಿ ಪ್ರಕರಣದ ತನಿಖೆಗೆ ಆದೇಶಿಸಲಾಗಿತ್ತು. ಅಮಾನತು ಆದೇಶವನ್ನು ಇದೀಗ ವಾಪಸ್ ಪಡೆದಿರುವ ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ಅವರನ್ನು ಸೇವೆಗೆ ಮರು ಸೇರ್ಪಡೆಗೊಳಿಸಿದೆ.
ರಾವ್ ಮಹಿಳೆಯೊಂದಿಗೆ ಆಕ್ಷೇಪಾರ್ಹ ರೀತಿಯಲ್ಲಿ ಇರುವ ವಿಡಿಯೋಗಳು ನ್ಯೂಸ್ ಚಾನೆಲ್ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿಯೂ ವೈರಲ್ ಆಗಿದ್ದವು.