ಮೈಸೂರು: ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದ ಬಳಿಯ ನಾಗಮಲೆಯಲ್ಲಿ ಭಾನುವಾರ ಮುಂಜಾನೆ ಬೆಂಗಳೂರಿನ 10 ವರ್ಷದ ಬಾಲಕನ ಮೇಲೆ ಚಿರತೆ ದಾಳಿ ಮಾಡಿ ಬಲಿಪಡೆದಿದೆ.
ಇತ್ತೀಚಿನ ದಿನಗಳಲ್ಲಿ ಚಾಮರಾಜನಗರದಲ್ಲಿ ನಡೆದ ಎರಡನೇ ಘಟನೆ ಇದಾಗಿದ್ದು, ಭಕ್ತರು ಮತ್ತು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಬಾಲಕ ಹರ್ಷಿತ್ ಮತ್ತು ಅವನ ಕುಟುಂಬ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ್ದಾಗ ಈ ಘಟನೆ ನಡೆದಿದೆ. ನಾಗಮಲೆ ಕ್ಷೇತ್ರಕ್ಕೆ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದಾಗ ಚಿರತೆ ಬಾಲಕನ ಮೇಲೆ ಎರಗಿದ್ದು, ಪೋಷಕರ ಮುಂದೆಯೇ ಬಾಲಕನ್ನು ಹೊತ್ತೊಯ್ದು ಕೊಂದು ಹಾಕಿದೆ.
ಸುಮಾರು ಅರ್ಧ ಗಂಟೆಯ ನಂತರ ಕುತ್ತಿಗೆ ಮತ್ತು ಇತರ ಭಾಗಗಳು ರಕ್ತಸಿಕ್ತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.
ಮಾಹಿತಿ ಪಡೆದ ಕೂಡಲೇ ಅರಣ್ಯ ವೀಕ್ಷಕರು ಸ್ಥಳಕ್ಕೆ ತಲುಪಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಈ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಇರುವಿಕೆ ಬಗ್ಗೆ ಮುಂಚಿತವಾಗಿ ಯಾವುದೇ ಮಾಹಿತಿ ನೀಡಿರಲಿಲ್ಲ. ಹೆಚ್ಚಿನ ಸಂಖ್ಯೆಯ ಜನರಿದ್ದರೂ ಚಿರತೆ ದಾಳಿ ಮಾಡಿದೆ ಎಂದು ಹರ್ಷಿತ್ ಅವರ ಕುಟುಂಬ ಸದಸ್ಯರೊಬ್ಬರು ಗೋಳಾಡಿದರು.
ಚಿರತೆ ದಾಳಿ ಹೊಸದೇನಲ್ಲ: ಜ. 21 ರಂದು ಮಂಡ್ಯ ಜಿಲ್ಲೆಯ ಚೀರನಹಳ್ಳಿಯಿಂದ ಮಾದಪ್ಪನ ಬೆಟ್ಟಕ್ಕೆ ಪಾದಯಾತ್ರೆಯಲ್ಲಿ ಬರುತ್ತಿದ್ದ ಪ್ರವೀಣ್ ಚಿರತೆ ದಾಳಿಯಿಂದ ಮೃತಪಟ್ಟಿದ್ದರು. ಫೆ. 10 ರಂದು ಚನ್ನಪಟ್ಟಣ ತಾಲೂಕಿನ ಬಾಲಕಿ ಶ್ರೇಯಸ್ ಚಿರತೆ ದಾಳಿಯಿಂದ ಗಾಯಗೊಂಡಿದ್ದರು. ಇಷ್ಟಾದರೂ ಸಂಬಂಧಪಟ್ಟ ಇಲಾಖೆ ಹಾಗೂ ಪ್ರಾಧಿಕಾರ ಭಕ್ತರ ಸುರಕ್ಷತೆಗೆ ಒತ್ತು ನೀಡಿಲ್ಲ ಎಂದು ಸಾರ್ವಜನಿಕರು ಆಕ್ರಶ ವ್ಯಕ್ತಪಡಿಸಿದ್ದಾರೆ.