ಬೆಂಗಳೂರು: ಇತ್ತೀಚಿಗೆ ಬೆಂಗಳೂರಿಗೆ ಬಂದಿದ್ದ ಸೂಪರ್ ಸ್ಟಾರ್ ರಜನಿಕಾಂತ್, ಕನ್ನಡ ಭಾಷೆ ಕುರಿತು ಮಾತನಾಡಿದ್ದಾರೆ. ಪುರಂದರ ದಾಸರ ಪ್ರಸಿದ್ಧ ಕೀರ್ತನೆ ಮಾನವ ಜನ್ಮ ದೊಡ್ಡದು, ಅದನ್ನು ಹಾನಿ ಮಾಡಿಕೊಳ್ಳಬೇಡಿ,ಹುಚ್ಚಪ್ಪಗಳಿರಾ ಎಂದು ಹಾಡಿದ್ದಾರೆ.
ಹೌದು. ನಗರದ ಆರ್ಟ್ ಆಫ್ ಲಿವಿಂಗ್ ನಲ್ಲಿ ಆಯೋಜಿಸಿದ್ದ ಸತ್ಸಂಗದಲ್ಲಿ ಪಾಲ್ಗೊಂಡು ಮಾತನಾಡಿದ ರಜನಿಕಾಂತ್, ಬೆಂಗಳೂರಿನ ನಂಟು, ಕನ್ನಡ ಮೇಲಿನ ಪ್ರೀತಿಯನ್ನು ಹೇಳಿಕೊಂಡಿದ್ದಾರೆ. ಕನ್ನಡ ಭಾಷೆಯನ್ನು ಮರೆತಿಲ್ಲ. ಆದರೆ, ಈಗ ಟಚ್ ಬಿಟ್ಟು ಹೋಗಿದೆ. ಅದಕ್ಕೆ ಕಾರಣ ಏನು ಅನ್ನೋದನ್ನು ಅವರೇ ಜನರ ಮುಂದೆ ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ರಜನಿಕಾಂತ್ ಕನ್ನಡ ಪ್ರೀತಿ ಕಡಿಮೆ ಆಗಿಲ್ಲ. ಆದರೆ, ಟಚ್ ಬಿಟ್ಟು ಹೋಗಿದೆ. ಇದೇ ಮಾತನ್ನು ರಜನಿಕಾಂತ್ ಹೇಳಿಕೊಂಡಿದ್ದಾರೆ. ಕನ್ನಡ ನನಗೆ ಬರುತ್ತದೆ. ಅದನ್ನ ನಾನು ಮರೆತಿಲ್ಲ. ಎಲ್ಲರಿಗೂ ಗೊತ್ತಿರೋ ಹಾಗೆ ನಾನು ಸಿನಿಮಾ ರಂಗಕ್ಕೆ ಬರುವ ಮುನ್ನಾ ಬಸ್ ಕಂಡೆಕ್ಟರ್ ಆಗಿ ಬೆಂಗಳೂರಿನಲ್ಲಿ 25 ವರ್ಷ ಕೆಲಸ ಮಾಡಿದ್ದೇನೆ. ಬಳಿಕ ತಮಿಳಿನಾಡಿಗೆ ಹೋಗಿ 52 ವರ್ಷ ಅಲ್ಲಿದ್ದೇನೆ. ಅಲ್ಲಿ ಕನ್ನಡ ಮಾತನಾಡೋರು ಯಾರೂ ಇಲ್ಲ. ಅದಕ್ಕೇನೆ ಕನ್ನಡ ಟಚ್ ಬಿಟ್ಟು ಹೋಗಿದೆ.ನನ್ನ ಮದರ್ ಟಂಗ್ ಮರಾಠಿ ಆಗಿದೆ. ಆದರೆ, ಮನೆಯಲ್ಲಿ ಮರಾಠಿ ಹಾಗೂ ಕನ್ನಡ ಎರಡೂ ಭಾಷೆಯಲ್ಲಿ ಮಾತನಾಡುತ್ತೇವೆ ಅಂತಲೂ ರಜನಿಕಾಂತ್ ಹೇಳಿದ್ದಾರೆ.
ರವಿಶಂಕರ್ ಗುರೂಜಿ ಒಮ್ಮೆ ಕಾಲ್ ಮಾಡಿ, ನೀವು ಫ್ರೀ ಇದ್ದರೆ, ಶೂಟಿಂಗ್ ಏನೂ ಇಲ್ಲ ಅಂದ್ರೆ, ಒಂದೆರಡು ದಿನ ಆಶ್ರಮಕ್ಕೆ ಬಂದು ಹೋಗಿ ಅಂತ ಹೇಳಿದರು. ಸತ್ಸಂಗ ಇರುತ್ತದೆ. ಬನ್ನಿ ಅಂದ್ರು..ಈ ಸತ್ಸಂಗದಲ್ಲಿ ಅದೆಷ್ಟು ಜನ ಬರ್ತಾರೆ ಅಂತ ಕೇಳಿದೆ. ಕೆಲವೊಮ್ಮೆ ಸಾವಿರ ಜನ ಇರ್ತಾರೆ. ಇನ್ನು ಕೆಲವೊಮ್ಮೆ ಇದು ಇನ್ನೂ ಜಾಸ್ತಿ ಇರುತ್ತದೆ ಅಂತ ಗೊತ್ತಾಯಿತು. ಇಷ್ಟು ಜನಕ್ಕೆ ನಾನು ಯಾವ ಭಾಷೆಯಲ್ಲಿ ಮಾತನಾಡ್ಬೇಕು ಅಂತಲೂ ಕೇಳಿದೆ ಎಂದು ಹಿಂದಿ ಹಾಗೂ ಇಂಗ್ಲೀಷ್ ನಲ್ಲಿ ಮಾತು ಮುಂದುವರೆಸಿದ್ದಾರೆ.
ಬೆಂಗಳೂರಿನ ನಂಟನ್ನು, ಇಲ್ಲಿನ ಬದುಕನ್ನು ಮತ್ತು ಕನ್ನಡ ಭಾಷೆಯನ್ನು ಸಾರ್ವಜನಿಕ ವೇದಿಕೆಯಲ್ಲಿ ಆಗಾಗ್ಗೆ ಹೇಳಿಕೊಳ್ಳುವ ಅವರ ಗುಣಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸಖತ್ ಸದ್ದು ಮಾಡುತ್ತಿದ್ದು, "ತಲೈವಾ ಇಸ್ ಆಲ್ವೇಸ್ ಎ ಲೆಜೆಂಡ್" ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ, ಎಷ್ಟೇ ಎತ್ತರಕ್ಕೆ ಬೆಳೆದರೂ ತನ್ನ ಮೂಲವನ್ನು ಮರೆಯಬಾರದು ಎಂಬುದಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಅವರ ಈ ಮಾತುಗಳೇ ದೊಡ್ಡ ಉದಾಹರಣೆಯಾಗಿದೆ.