ದಾಂಡೇಲಿ: ನಗರದ ಪಿಡಬ್ಲುಡಿ ಪ್ರವಾಸಿಗೃಹದ ಮುಂದೆ ಇರುವ ಕಾಳಿ ನದಿಯ ದಡದ ಗಿಡಗಂಟಿಗಳಲ್ಲಿ ಮೊಸಳೆ ಮನೆ ಮಾಡಿ ಮರಿಗಳಿಗಾಗಿ ಕಾವಲು ಕುಳಿತ ವೀಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ದಾಂಡೇಲಿಯ ಸರ್ಕಾರಿ ಅತಿಥಿಗೃಹದ ಸಮೀಪದ ಕಾಳಿ ನದಿ ತೀರದಲ್ಲಿ ಮೊಸಳೆಯೊಂದು ದಟ್ಟವಾದ ಗಿಡಗಂಟಿಗಳ ನಡುವೆ ಸುಮಾರು 40 ಮೊಟ್ಟೆ ಇಟ್ಟಿದ್ದು, ಈಗ ಆ ಮೊಟ್ಟೆಗಳು ಒಡೆದು ಮರಿಗಳು ನದಿ ತೀರದ ಸುತ್ತಮುತ್ತ ಸಂಚರಿಸುತ್ತಿವೆ.
ಮೊಸಳೆ ಮರಿಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಪ್ರವಾಸಿಗರಲ್ಲಿ ಕುತೂಹಲ ಹೆಚ್ಚಾಗಿದ್ದು, ಸ್ಥಳಕ್ಕೆ ಬರುವ ಜನರ ಸಂಖ್ಯೆ ಹೆಚ್ಚಾಗಿದೆ.
ಹೀಗಾಗಿ ಪರಿಸ್ಥಿತಿ ನಿಯಂತ್ರಣಕ್ಕಾಗಿ ಅರಣ್ಯ ಇಲಾಖೆ ನಿರ್ಬಂಧ ಕ್ರಮಗಳನ್ನು ಕೈಗೊಂಡಿದೆ. ಮೊಸಳೆ ಮತ್ತು ಅದರ ಮರಿಗಳಿಗೆ ಯಾವುದೇ ತೊಂದರೆ ಆಗದಂತೆ ಹಾಗೂ ಜನರ ಸುರಕ್ಷತೆ ದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.
ಕೆಲ ಸ್ಥಳೀಯರು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬಳಿಕ ಜನರು ಮೊಸಳೆಯನ್ನು ನೋಡಲು ಅಪಾಯವನ್ನೂ ಲೆಕ್ಕಿಸದೆ ನದಿ ತೀರಕ್ಕೆ ಬರುತ್ತಿದ್ದಾರೆ.
ಕಾಳಿ ನದಿ ತೀರದಲ್ಲಿ ಮೊಸಳೆ ದಾಳಿಗಳ ಘಟನೆಗಳು ಹಿಂದೆಯೂ ನಡೆದಿವೆ. ಆದ್ದರಿಂದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಸಮಾಜಸೇವಕ ಅಕ್ರಮ್ ಅವರು ಹೇಳಿದ್ದಾರೆ.
ಇದೇನು ಹೊಸದಲ್ಲ. ಈ ಹಿಂದೆ ಕೂಡ ಕಾಳಿ ನದಿ ತೀರದಲ್ಲಿ ಅನೇಕ ಬಾರಿ ಮೊಸಳೆ ಮರಿಗಳು ಕಂಡುಬಂದಿವೆ. ಆದರೆ. ಜನರಿಗೆ ಅದರ ಬಗ್ಗೆ ಹೆಚ್ಚಿನ ಅರಿವು ಇರಲಿಲ್ಲ ಎಂದು ತಿಳಿಸಿದ್ದಾರೆ.
ಮೊಸಳೆ ಮರಿಗಳ ಅಪರೂಪದ ದೃಶ್ಯ ಸ್ಥಳೀಯರಲ್ಲಿ ಕುತೂಹಲ ಮೂಡಿಸಿದರೂ, ಅರಣ್ಯ ಇಲಾಖೆ ಜನರಿಗೆ ಸುರಕ್ಷತಾ ಸೂಚನೆಗಳನ್ನು ಪಾಲಿಸುವಂತೆ ಮನವಿ ಮಾಡಿದೆ.
ಈ ಕುರಿತು ಪ್ರತಿಕ್ರಿಯಿಸಿದ ಹಳಿಯಾಳ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಕುಮಾರ್ ಅವರು, ಮೊಸಳೆ ಮತ್ತು ಅದರ ಮರಿಗಳು ಇರುವ ಪ್ರದೇಶದ ಬಳಿ ಜನರಿಗೆ ಎಚ್ಚರಿಕೆ ನೀಡಲು ಅರಣ್ಯ ಇಲಾಖೆಯ ತಂಡವನ್ನು ದಾಂಡೇಲಿಗೆ ಕಳುಹಿಸಲಾಗಿದೆ. ಕಾಡುಪ್ರಾಣಿಗಳು ತಮ್ಮ ಮರಿಗಳ ರಕ್ಷಣೆ ವಿಚಾರದಲ್ಲಿ ಹೆಚ್ಚು ಆಕ್ರಮಣಕಾರಿ ಸ್ವಭಾವ ತೋರಿಸುತ್ತವೆ. ಹೀಗಾಗಿ ನಾವು ಅತ್ಯಂತ ಎಚ್ಚರಿಕೆಯಿಂದ ಪರಿಸ್ಥಿತಿಯನ್ನು ನಿಗಾವಹಿಸುತ್ತಿದ್ದೇವೆ ಎಂದು ಹೇಳಿದ್ದಾರೆ.