ಬೆಂಗಳೂರು: ಬೆಂಗಳೂರಿನ ಹೊರವಲಯದಲ್ಲಿ ಇಬ್ಬರು ಪುರುಷರು ಮಹಿಳೆಯ ಕಾರನ್ನು ತಡೆದಿದ್ದು, ಕಿರುಕುಳ ಕೊಟ್ಟಿರುವ ಘಟನೆ ವರದಿಯಾಗಿದೆ. ಆಕೆಯ ಪತಿಗೂ ಬೆದರಿಕೆ ಹಾಕಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹೌದು. ರಚನಾ ಎಂಬ ಮಹಿಳೆ ಹೆಸರಘಟ್ಟದಲ್ಲಿರುವ ತನ್ನ ತೋಟದ ಮನೆಯಲ್ಲಿದ್ದ ಪತಿ ಭರತ್ ಗೆ ಊಟ ಕೊಟ್ಟು, ಅಲ್ಲಿಂದ ರೇಂಜ್ ರೋವರ್ ಕಾರಿನಲ್ಲಿ ಹಿಂತಿರುಗುತ್ತಿದ್ದಾಗ ಶುಕ್ರವಾರ ಈ ಘಟನೆ ನಡೆದಿದೆ.
ದಾರಿಯಲ್ಲಿ ಹೋಗುವಾಗ ಬಾಗಿಲು ಹಾಕದ ಎರ್ಟಿಗಾ ಕಾರನ್ನು ಆಕೆ ನೋಡಿದ್ದು, ಹಾರ್ನ್ ಮಾಡಿದಾಗ ಆಕೆಯ ಬಳಿಗೆ ಬಂದ ವ್ಯಕ್ತಿಯೊಬ್ಬ ಕಿಟಕಿ ತೆಗೆಯುವಂತೆ ಹೇಳಿ ಆಕೆಯ ಫೋಟೋ ತೆಗೆದಿದ್ದಾನೆ. ಇದರಿಂದ ಗಾಬರಿಗೊಂಡ ರಚನಾ, ಭರತ್ ಗೆ ಕರೆ ಮಾಡಿದ್ದು, ಸ್ಥಳಕ್ಕೆ ಬರುವಂತೆ ಹೇಳಿದ್ದಾಳೆ.
ರಚನಾ ಕನ್ನಡದಲ್ಲಿ ಮಾತನಾಡುವುದನ್ನು ಕೇಳಿದ ಆರೋಪಿ, ನೀನು ಕನ್ನಡತಿನಾ, ಬಾ ನಾನು ನೋಡುವೆ ಎಂದಿದ್ದಾರೆ. ಆತ ಕಾರನ್ನು ತೆಗೆದ ನಂತರ ರಚನಾ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾರೆ. ಆದರೆ 500 ಮೀಟರ್ ದೂರ ತೆರಳಿದ ನಂತರ ಅದೇ ವ್ಯಕ್ತಿಗಳು ಮತ್ತೆ ಬಂದಿದ್ದು, ಕಾರನ್ನು ಅಡ್ಡಗಟ್ಟಿದ್ದಾರೆ. ಇಬ್ಬರು ಪುರುಷರು ಕಾರಿನಿಂದ ಇಳಿದು ರಚನಾ ಅವರ ಕಾರಿನ ಎರಡೂ ಬದಿಗಳಲ್ಲಿ ನಿಂತಿದ್ದಾರೆ. ಅವರಲ್ಲಿ ಒಬ್ಬ ಕಿಟಕಿ ತೆರೆಯದಿದ್ದರೆ ಕಿಟಕಿ ಒಡೆಯುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಭರತ್ ಸ್ಥಳಕ್ಕೆ ಬಂದು ಆರೋಪಿಗಳು ರಚನಾಳ ಫೋಟೋಗಳನ್ನು ಡಿಲೀಟ್ ಮಾಡುವಂತೆ ಹೇಳಿದಾಗ ಆತನನ್ನು ನೆಲಕ್ಕೆ ತಳ್ಳಿ ಹಲ್ಲೆ ನಡೆಸಲಾಗಿದೆ. ದಂಪತಿಗಳು ಸಲ್ಲಿಸಿದ ಪೊಲೀಸ್ ದೂರಿನಲ್ಲಿ ಆರೋಪಿಗಳಲ್ಲಿ ಒಬ್ಬರು ಕಲ್ಲು ಎತ್ತಿ ಭರತ್ ತಲೆಯ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದರು ಎಂದು ಹೇಳಲಾಗಿದೆ. ಅವರ ಸಂಬಂಧಿಕರಾದ ಪ್ರಕಾಶ್ ಮತ್ತು ಲಕ್ಷ್ಮಿಕಾಂತ್ ಎಂಬುವರು ಭರತ್ನನ್ನು ಆರೋಪಿಗಳಿಂದ ಕಾಪಾಡಿದ್ದಾರೆ. ಆರೋಪಿಗಳು ಮದ್ಯದ ಅಮಲಿನಲ್ಲಿದ್ದರಲ್ಲದೆ ಅಸಭ್ಯ ಭಾಷೆ ಬಳಸಿದ್ದಾರೆ ಎಂದು ರಚನಾ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ನಂತರ ಆರೋಪಿಗಳನ್ನು ಮಹೇಶ್ ಮತ್ತು ಗೋವಿಂದರಾಜು ಎಂದು ಗುರುತಿಸಲಾಯಿತು. ರಚನಾ ಬೆಂಗಳೂರಿನ ಮಾಜಿ ಉಪ ಮೇಯರ್ ಮತ್ತು ಬಿಜೆಪಿ ನಾಯಕ ಎಸ್. ಹರೀಶ್ ಅವರ ಸೊಸೆ ಎಂದು ತಿಳಿದುಬಂದಿದೆ.