ಬೆಂಗಳೂರು: ಏಳು ಜನರ ಸಾವಿಗೆ ಕಾರಣವಾಗಿದ್ದ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಕುಸಿತ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಎಂಬಿ.ನಾಗರಾಜ್ ಅವರ ಅಮಾನತು ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಈ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ನ ರಜೆ ಪೀಠದ ನ್ಯಾಯಮೂರ್ತಿಗಳಾದ ಸೂರಜ್ ಗೋವಿಂದರಾಜ್ ಮತ್ತು ನ್ಯಾಯಮೂರ್ತಿ ಕೆ. ಮನ್ಮಧ ರಾವ್ ಅವರು, ತನಿಖಾ ಸಮಿತಿಗಳ ವರದಿ ಬರುವ ಮುನ್ನವೇ ಅಧಿಕಾರಿಯನ್ನು ಅಮಾನತುಗೊಳಿಸಿರುವುದು ಸಮಂಜಸವಲ್ಲ ಎಂದು ಅಭಿಪ್ರಾಯಪಟ್ಟರು.
“ಈ ಪ್ರಕರಣದ ಕುರಿತು ಈಗಾಗಲೇ ಎರಡು ಸಮಿತಿಗಳನ್ನು ರಚಿಸಲಾಗಿದೆ. ಆ ಸಮಿತಿಗಳು ತಮ್ಮ ವರದಿಯಲ್ಲಿ ಅರ್ಜಿದಾರರ ಕರ್ತವ್ಯಲೋಪವಿದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು. ವರದಿಯಲ್ಲಿ ತಪ್ಪು ಸಾಬೀತಾದರೆ ಸರ್ಕಾರಕ್ಕೆ ಸಿಸಿಎ ನಿಯಮಗಳ ಅಡಿಯಲ್ಲಿ ಕ್ರಮ ಕೈಗೊಳ್ಳುವ ಅಧಿಕಾರ ಇದೆ” ಎಂದು ತಿಳಿಸಿದೆ.
ಅರ್ಜಿದಾರರ ಪರ ವಕೀಲರು, ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತ ಪ್ರಕರಣದ ತನಿಖೆಗೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪಿಡಬ್ಲ್ಯುಡಿ ಈಗಾಗಲೇ ತನಿಖಾ ತಂಡ ರಚಿಸಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಅಲ್ಲದೆ, ತಾಂತ್ರಿಕ ಪರಿಶೀಲನೆಗಾಗಿ ಪಿಡಬ್ಲ್ಯುಡಿ ಅಧಿಕಾರಿಗಳ ಮತ್ತೊಂದು ಸಮಿತಿಯನ್ನೂ ರಚಿಸಲಾಗಿದ್ದು, ಅದು ಒಂದು ವಾರದಲ್ಲಿ ವರದಿ ಸಲ್ಲಿಸಬೇಕಿದೆ ಎಂದರು.
ಸಮಿತಿಗಳಿಂದ ಯಾವುದೇ ಶಿಫಾರಸು ಬರುವ ಮುನ್ನವೇ ಅಮಾನತು ಆದೇಶ ಹೊರಡಿಸಲಾಗಿದ್ದು, ಅಮಾನತಿಗೆ ಅಗತ್ಯವಾದ ಪ್ರಾಥಮಿಕ ಸಾಕ್ಷ್ಯಾಧಾರಗಳೂ ಇಲ್ಲ ಎಂದು ವಾದಿಸಿದರು.
ಇದಕ್ಕೆ ಪ್ರತಿಯಾಗಿ ಸರ್ಕಾರದ ಪರ ವಕೀಲರು, ಘಟನಾ ಸ್ಥಳದ ಹೊಣೆಗಾರ ಅಧಿಕಾರಿಯಾಗಿದ್ದ ಕಾರಣ ಕಾರ್ಯನಿರ್ವಾಹಕ ಎಂಜಿನಿಯರ್ ವಿರುದ್ಧ ಪ್ರಾಥಮಿಕ ಹೊಣೆಗಾರಿಕೆ ಕಂಡುಬರುತ್ತದೆ. ಇದೇ ಕಾರಣಕ್ಕೆ ಸಿಸಿಎ ನಿಯಮಗಳಡಿ ಅಮಾನತು ಕ್ರಮ ಕೈಗೊಳ್ಳಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಆದರೆ, ನ್ಯಾಯಾಲಯವು ತನಿಖಾ ವರದಿ ಬರುವವರೆಗೆ ಅಮಾನತು ಆದೇಶ ಮುಂದುವರಿಸುವ ಅಗತ್ಯವಿಲ್ಲ ಎಂದು ಹೇಳಿ, ಮೇ 1ರಂದು ಹೊರಡಿಸಲಾಗಿದ್ದ ಅಮಾನತು ಆದೇಶವನ್ನು ರದ್ದುಪಡಿಸಿದೆ.