ಬೆಂಗಳೂರು: ನೋ-ಪಾರ್ಕಿಂಗ್ ಪ್ರದೇಶದಲ್ಲಿ ವಾಹನ ನಿಲ್ಲಿಸಿದ್ದಕ್ಕಾಗಿ ಸಾಮಾನ್ಯವಾಗಿ ದಂಡ ವಿಧಿಸುವ ಅಥವಾ ವಾಹನವನ್ನು ಟೋಯಿಂಗ್ ಮಾಡುವ ಪೊಲೀಸ್ ಇಲಾಖೆ, ಇದೀಗ ಮೊದಲ ಬಾರಿಗೆ ಕಠಿಣ ಕ್ರಮವಾಗಿ ಇಬ್ಬರು ಲಾರಿ ಚಾಲಕರ ವಿರುದ್ಧ ಎಫ್ಐಆರ್ ದಾಖಲಿಸಿರುವ ಅಪರೂಪದ ಘಟನೆ ರಾಮನಗರ ಜಿಲ್ಲೆಯ ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕರ್ನಾಟಕ ನೋಂದಣಿ ಹೊಂದಿದ್ದ ಕಂಟೈನರ್ ವಾಹನದ ಚಾಲಕ ಡಿ. ಶಿವಕುಮಾರ್ (35) ಹಾಗೂ ತಮಿಳುನಾಡು ನೋಂದಣಿ ಹೊಂದಿದ್ದ ಮತ್ತೊಂದು ಕಂಟೈನರ್ ವಾಹನದ ಚಾಲಕ ಎನ್. ಹರ್ಮನ್ (21) ವಿರುದ್ಧ ಬಿಡದಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸಾರ್ವಜನಿಕ ರಸ್ತೆಯಲ್ಲಿ ಅಪಾಯ ಅಥವಾ ಅಡ್ಡಿ ಉಂಟುಮಾಡಿದ ಆರೋಪದಡಿ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 285 ಅಡಿಯಲ್ಲಿ ಇಬ್ಬರ ಮೇಲೂ ಎಫ್ಐಆರ್ ದಾಖಲಿಸಿದ್ದಾರೆ.
ಸಾಮಾನ್ಯವಾಗಿ ನೋ-ಪಾರ್ಕಿಂಗ್ ಪ್ರದೇಶದಲ್ಲಿ ವಾಹನ ನಿಲ್ಲಿಸಿದರೆ ಪೊಲೀಸರು ಸ್ಥಳದಲ್ಲೇ ದಂಡ ವಸೂಲಿ ಮಾಡುತ್ತಾರೆ ಅಥವಾ ವಾಹನಗಳನ್ನು ಟೋಯಿಂಗ್ ಮಾಡಿ ಠಾಣೆಗೆ ಸಾಗಿಸುತ್ತಾರೆ.
ಕೆಲ ಸಂದರ್ಭಗಳಲ್ಲಿ ಚಾಲಕರು ಸ್ಥಳದಲ್ಲೇ ದಂಡ ಪಾವತಿಸಲು ನಿರಾಕರಿಸಿದರೆ, ನ್ಯಾಯಾಲಯದ ದಂಡ ಪಾವತಿಸಿ ರಸೀದಿ ತೋರಿಸಿದ ಬಳಿಕ ವಾಹನ ಬಿಡುಗಡೆ ಮಾಡಲಾಗುತ್ತದೆ.
ಆದರೆ, ಬಿಡದಿ ಪೊಲೀಸರು ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿ ನೇರವಾಗಿ ಎಫ್ಐಆರ್ ದಾಖಲಿಸುವ ಮೂಲಕ ಕಠಿಣ ಸಂದೇಶ ರವಾನಿಸಿದ್ದಾರೆ.
ಈ ಕುರಿತು ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, “ನೋ-ಪಾರ್ಕಿಂಗ್ ಪ್ರದೇಶದಲ್ಲಿ ವಾಹನ ನಿಲ್ಲಿಸಬಾರದು ಎಂದು ಹಲವು ಬಾರಿ ಜಾಗೃತಿ ಅಭಿಯಾನ ನಡೆಸಿದ್ದೇವೆ. ನಿಯಮ ಉಲ್ಲಂಘಿಸಿದವರಿಂದ ನಿರಂತರವಾಗಿ ದಂಡವೂ ವಸೂಲಿ ಮಾಡಲಾಗುತ್ತಿತ್ತು. ಆದರೂ ಚಾಲಕರು ಇದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಹೀಗಾಗಿ ಕಠಿಣ ಕ್ರಮ ಕೈಗೊಳ್ಳಬೇಕಾಯಿತು” ಎಂದು ಹೇಳಿದ್ದಾರೆ.
ಇದಲ್ಲದೆ, ವಾಹನಗಳನ್ನು ವಶಕ್ಕೆ ಪಡೆಯಲಾಗಿದ್ದು, ಇದೀಗ ಆರೋಪಿಗಳ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದ ಬಳಿಕವೇ ನ್ಯಾಯಾಲಯದ ಆದೇಶದ ಮೇರೆಗೆ ವಾಹನ ಬಿಡುಗಡೆ ಸಾಧ್ಯವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.