ಬೆಂಗಳೂರು: ಸೋಮವಾರದ ಒಳಗೆ ಡಿ.ಕೆ. ಶಿವಕುಮಾರ್ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿದ್ದಾರೆ. ಮುಂದಿನ 8 ವರ್ಷಗಳ ಕಾಲ ಅವರ ಅಧಿಕಾರವನ್ನು ಯಾರಿಂದಲೂ ಅಲ್ಲಾಡಿಸಲು ಸಾಧ್ಯವಿಲ್ಲ ಎಂದು ಶಿವಕುಮಾರ್ ಅವರ ಪರಮಾಪ್ತ ಗುರುಗಳಾದ ರಾಜಗುರು ದ್ವಾರಕನಾಥ್ ಗುರೂಜಿ ಭರ್ಜರಿ ಭವಿಷ್ಯ ನುಡಿದಿದ್ದಾರೆ.
ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಅವರೊಂದಿಗಿನ ತಮ್ಮ 35 ವರ್ಷಗಳ ಸುದೀರ್ಘ ಒಡನಾಟವನ್ನು ನೆನಪಿಸಿಕೊಂಡಿದ್ದಾರೆ. 'ಅವನು (ಡಿಕೆಶಿ) ನನಗೆ ಕಳೆದ 35 ವರ್ಷಗಳಿಂದ ಪರಿಚಯ. ಹಿಂದೆ ಮಾಜಿ ಸಿಎಂ ಬಂಗಾರಪ್ಪ ಅವರ ಸಂಪುಟದಲ್ಲಿ ಅತ್ಯಂತ ಸಣ್ಣ ವಯಸ್ಸಿಗೆ ಜೈಲು ಮಂತ್ರಿಯಾಗಿದ್ದಾಗಲೇ, ನೀನು ಮುಂದೊಂದು ದಿನ ಈ ರಾಜ್ಯಕ್ಕೆ ಮುಖ್ಯಮಂತ್ರಿ ಆಗ್ತೀಯಾ' ಎಂದು ಭವಿಷ್ಯ ಹೇಳಿದ್ದೆ. ಅವನು ಸದಾ ನನ್ನ ಸಂಪರ್ಕದಲ್ಲೇ ಇದ್ದಾನೆ. ಅವನು ನಮ್ಮ ಮನೆಯ ಮಗನಿದ್ದಂತೆ' ಎಂದಿದ್ದಾರೆ.
ಸಿದ್ದರಾಮಯ್ಯಗೆ ರಾಜಯೋಗ ಮುಗಿದಿದೆ ಸಿದ್ದರಾಮಯ್ಯ ಅವರ ಜಾತಕದ ಬಗ್ಗೆ ವಿಶ್ಲೇಷಿಸಿದ ಗುರೂಜಿ, “ಸಿದ್ದರಾಮಯ್ಯ ವೃಶ್ಚಿಕ ರಾಶಿ. ಸದ್ಯ ಅವರಿಗೆ ಗುರು ಬಲ ಮತ್ತು ಶನಿ ಬಲ ಇಲ್ಲ. ರಾಜ್ಯಕ್ಕೆ ಅವರ ಮಾರ್ಗದರ್ಶನ ಇನ್ನೂ ಅಗತ್ಯ” ಎಂದರು. ಡಿ.ಕೆ. ಶಿವಕುಮಾರ್ ಅವರಿಗೆ ಈಗ ಸುವರ್ಣ ಸಮಯ ಆರಂಭವಾಗಿದೆ ಎಂದು ಹೇಳಿದ ಅವರು, ಗುರು ಮಿಥುನ ರಾಶಿಯಲ್ಲಿರುವುದು ಡಿ.ಕೆ.ಗೆ ಭಾರಿ ರಾಜಯೋಗ ತರುತ್ತದೆ ಎಂದು ಭವಿಷ್ಯ ನುಡಿದರು.
ಡಿ.ಕೆ. ಶಿವಕುಮಾರ್ ಒಂದು ಬ್ರ್ಯಾಂಡ್ “ಡಿ.ಕೆ. ಶಿವಕುಮಾರ್ ಕೇವಲ ಮುಖ್ಯಮಂತ್ರಿ ಮಾತ್ರವಲ್ಲ. ಅವರು ಬುದ್ಧಿವಂತ, ಜಾಣ ಮತ್ತು ಸಹನೆಯುಳ್ಳವರು. ಶಿವಕುಮಾರ್ ಅನ್ನೋದೇ ಒಂದು ಬ್ರ್ಯಾಂಡ್” ಎಂದು ಗುರೂಜಿ ಬಣ್ಣಿಸಿದರು. ಅವನಿಗೆ ಸಿಎಂ ಆಗೋದು ನ್ಯಾಯವಾಗಿ ಇನ್ನೂ ಬೇಗ, ಅಂದರೆ ಹೊಸ ವರ್ಷದ ಒಳಗೇ ಆಗಬೇಕಿತ್ತು. ಆದರೆ ನಿಧಾನವಾಗುತ್ತಿತ್ತು.
ಅದಕ್ಕಾಗಿಯೇ ನಾನು ಅವನ ಪರವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲು ಶೃಂಗೇರಿ ಶಾರದಾಂಬೆ ಸನ್ನಿಧಿಗೆ ಹೋಗಿದ್ದೆ. ನಿಧಾನವಾದ ಕಾರಣ ಆ ದೇವರಿಗೇ ಗೊತ್ತು. ಆದರೆ, ನಾನು ಶೃಂಗೇರಿಯಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದಾಗಲೇ ಖುದ್ದು ಡಿ.ಕೆ. ಶಿವಕುಮಾರ್ ನನಗೆ ಫೋನ್ ಕಾಲ್ ಮಾಡಿ 'ಗುರೂಜಿ, ಕೆಲಸ ಆಗಿದೆ' ಎಂದು ಸಿಹಿ ಸುದ್ದಿ ನೀಡಿದ. ನಾನು ಈಗ ಬೆಂಗಳೂರಿಗೆ ಹೋಗಿ ಆತನ ಜೊತೆ ಕುಳಿತು ಮಾತನಾಡುತ್ತೇನೆ. ಸೋಮವಾರದ ಒಳಗೆ ಆತ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾನೆ' ಎಂದರು.