ಸಾಂದರ್ಭಿಕ ಚಿತ್ರ  
ರಾಜ್ಯ

ಕರ್ನಾಟಕದಲ್ಲಿ ಮೋಡ ಬಿತ್ತನೆಗೆ ಪರಿಸ್ಥಿತಿ ಪೂರಕವಾಗಿಲ್ಲ: ಹವಾಮಾನ ತಜ್ಞರು

ಸೋಮವಾರ ನಡೆದ ಸಭೆ ಸೇರಿದಂತೆ ಕಳೆದ ಕೆಲವು ಸಭೆಗಳಲ್ಲಿ ಹವಾಮಾನ ತಜ್ಞರು ರಾಜ್ಯ ಸರ್ಕಾರಕ್ಕೆ ಮೋಡ ಬಿತ್ತನೆಗೆ ಸದ್ಯದ ಪರಿಸ್ಥಿತಿಗಳು ಅನುಕೂಲಕರವಾಗಿಲ್ಲ ಎಂದು ಎಚ್ಚರಿಸಿದ್ದಾರೆ.

ಬೆಂಗಳೂರು: ರಾಜ್ಯದ ಕೆಲವು ಭಾಗಗಳಲ್ಲಿ ಬರ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ಮೋಡ ಬಿತ್ತನೆ (Cloud Seeding) ನಡೆಸಲು ಸರ್ಕಾರ ಎರಡು ಸಮಿತಿಗಳನ್ನು ರಚಿಸಿರುವ ನಡುವೆಯೇ, ಸದ್ಯದ ಹವಾಮಾನ ಪರಿಸ್ಥಿತಿಗಳು ಅನುಕೂಲಕರವಾಗಿಲ್ಲದ ಕಾರಣ ಈ ಪ್ರಯತ್ನ ವ್ಯರ್ಥವಾಗಬಹುದು ಎಂದು ಹವಾಮಾನ ತಜ್ಞರು ಹೇಳಿದ್ದಾರೆ.

ಸೋಮವಾರ ನಡೆದ ಸಭೆ ಸೇರಿದಂತೆ ಕಳೆದ ಕೆಲವು ಸಭೆಗಳಲ್ಲಿ ಹವಾಮಾನ ತಜ್ಞರು ರಾಜ್ಯ ಸರ್ಕಾರಕ್ಕೆ ಮೋಡ ಬಿತ್ತನೆಗೆ ಸದ್ಯದ ಪರಿಸ್ಥಿತಿಗಳು ಅನುಕೂಲಕರವಾಗಿಲ್ಲ ಎಂದು ಎಚ್ಚರಿಸಿದ್ದಾರೆ. ಸೆಪ್ಟೆಂಬರ್ 20ರಿಂದ ಮೋಡ ಬಿತ್ತನೆ ನಡೆಸುವ ಯೋಜನೆಯನ್ನು ಅಕ್ಟೋಬರ್‌ವರೆಗೆ ಮುಂದೂಡುವಂತೆ ಅವರು ಸಲಹೆ ನೀಡಿದ್ದಾರೆ. ಆಗ ಪರಿಸ್ಥಿತಿಗಳು ಅನುಕೂಲಕರವಾಗುವ ಸಾಧ್ಯತೆಯಿದೆ. ನೈಋತ್ಯ ಮುಂಗಾರು ಅಕ್ಟೋಬರ್ 10ರವರೆಗೆ ಮುಂದುವರಿಯಲಿರುವುದರಿಂದ ಮೋಡ ಬಿತ್ತನೆಗೆ ಹೆಚ್ಚಿನ ಕಾಲಾವಕಾಶವಿದೆ. ಹೀಗಾಗಿ ಸರ್ಕಾರ ತರಾತುರಿಯಲ್ಲಿ ಈ ಪ್ರಯೋಗ ನಡೆಸಬಾರದು ಎಂದು ಅವರು ಹೇಳಿದ್ದಾರೆ.

ಸಭೆಯಲ್ಲಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ (KSNDMC) ಹಿರಿಯ ಅಧಿಕಾರಿಯೊಬ್ಬರು, ಸೂಕ್ತವಾದ ಮೋಡಗಳು ಕಂಡುಬಂದಾಗ ಮಾತ್ರ ಮೋಡ ಬಿತ್ತನೆ ನಡೆಸಲು ಸಾಧ್ಯ ಎಂದು ತಿಳಿಸಿದ್ದಾರೆ.

ಆದರೆ ಸದ್ಯ ಆಕಾಶದಲ್ಲಿ ತೇಲಾಡುವಂತಹ ಮೋಡಗಳೇ ಇಲ್ಲ. ಮುಂದಿನ ಕೆಲವು ವಾರಗಳಲ್ಲೂ ಅನುಕೂಲಕರ ಹವಾಮಾನ ಮುನ್ಸೂಚನೆ ಇಲ್ಲ. ಮೋಡಗಳ ರಚನೆಗೆ ನೆರವಾಗುವಂತಹ ಯಾವುದೇ ವ್ಯವಸ್ಥೆಗಳು ಸಾಗರದಲ್ಲಿ ರೂಪುಗೊಳ್ಳದಿರುವುದರಿಂದ ಮೋಡಗಳನ್ನು ಪತ್ತೆಹಚ್ಚುವ ಕಾರ್ಯವೂ ವ್ಯರ್ಥವಾಗಬಹುದು ಎಂದು ಅವರು ಹೇಳಿದ್ದಾರೆ.

ಕರ್ನಾಟಕ ನೀರಾವರಿ ನಿಗಮ ನಿಯಮಿತ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಭಾರತೀಯ ಹವಾಮಾನ ಇಲಾಖೆ (IMD), KSNDMC, ಭಾರತೀಯ ವಿಜ್ಞಾನ ಸಂಸ್ಥೆ (IISc), ಭಾರತೀಯ ಉಷ್ಣವಲಯ ಹವಾಮಾನಶಾಸ್ತ್ರ ಸಂಸ್ಥೆ (IITM), ಜಲಸಂಪನ್ಮೂಲ ಇಲಾಖೆ, ನಿವೃತ್ತ ತಜ್ಞರು ಹಾಗೂ ಹವಾಮಾನ ಪರಿಣಿತರು ಸೋಮವಾರದ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಮುಂಗಾರು ಮಳೆಯ ಸ್ವರೂಪ ಮತ್ತು ಬರ ಪರಿಸ್ಥಿತಿ ಕುರಿತು ಚರ್ಚಿಸಲಾಯಿತು.

ಏಕೆ ಪರಿಸ್ಥಿತಿ ಅನುಕೂಲವಾಗಿಲ್ಲ?

ಮೋಡ ಬಿತ್ತನೆಗೆ ಸೂಕ್ತ ಸಾಂದ್ರತೆಯ ಕ್ಯುಮುಲೋನಿಂಬಸ್ ಮತ್ತು ಕ್ಯುಮುಲಸ್ ಮೋಡಗಳು ಇರಬೇಕು. ಆದರೆ ಸದ್ಯ ಇವುಗಳ ಕೊರತೆಯಿದೆ ಎಂದು ಐಎಂಡಿಯ ಹಿರಿಯ ಅಧಿಕಾರಿಯೊಬ್ಬರು ವಿವರಿಸಿದ್ದಾರೆ. ಇದರ ಜೊತೆಗೆ ಸಮುದ್ರದ ಮೇಲಿನ ಕಡಿಮೆ ಒತ್ತಡದ ತಗ್ಗು ಪ್ರದೇಶ (ಆಫ್‌ಶೋರ್ ಟ್ರಫ್) ಮತ್ತು ಅನುಕೂಲಕರ ಗಾಳಿಯ ಚಲನೆ ಇರಬೇಕು. ನೆಲದ ಮೇಲ್ಮೈಯಿಂದ ಮೋಡಗಳವರೆಗೆ ವಾತಾವರಣದಲ್ಲಿ ಕನಿಷ್ಠ 55–60 ಮಿ.ಮೀ. ತೇವಾಂಶವೂ ಇರಬೇಕು. ಆಗ ಮಾತ್ರ ಮೋಡ ಬಿತ್ತನೆ ನಡೆಸಲು ಸಾಧ್ಯ ಎಂದು ಅವರು ತಿಳಿಸಿದ್ದಾರೆ.

ಸದ್ಯ ಗುಡುಗು ಸಹಿತ ಮೋಡಗಳು ಅಥವಾ ಕ್ಯುಮುಲೋನಿಂಬಸ್ ಮೋಡಗಳಿಲ್ಲ. ಇವು ಸಾಮಾನ್ಯವಾಗಿ ಈಶಾನ್ಯ ಮುಂಗಾರು ಅವಧಿಯಲ್ಲಿ ಕಂಡುಬರುತ್ತವೆ ಮತ್ತು ಮೋಡ ಬಿತ್ತನೆಗೆ ಸೂಕ್ತವಾಗಿರುತ್ತವೆ. ಆದರೆ ಸಾಕಷ್ಟು ದಟ್ಟವಾದ ಮೋಡಗಳಿದ್ದರೆ ಮೋಡ ಬಿತ್ತನೆಯ ಅಗತ್ಯವೇ ಇರುವುದಿಲ್ಲ.

ಈ ವರ್ಷ ಬಂಗಾಳ ಕೊಲ್ಲಿಗೆ ಹೋಲಿಸಿದರೆ ಅರಬ್ಬಿ ಸಮುದ್ರದ ಮೇಲಿನ ಹವಾಮಾನ ವ್ಯವಸ್ಥೆಗಳು ದುರ್ಬಲವಾಗಿವೆ. ಇದರಿಂದಾಗಿ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿನ ಮುಂಗಾರು ತಗ್ಗು ಪ್ರದೇಶವು ಕರಾವಳಿ ಮತ್ತು ಉತ್ತರ ಕರ್ನಾಟಕದಲ್ಲಿ ಮಳೆಯಾಗಲು ನೆರವಾಗುತ್ತಿದೆ. ಆದರೆ ಕರ್ನಾಟಕದ ಒಳನಾಡು ಮತ್ತು ದಕ್ಷಿಣ ಒಳನಾಡು ಕರ್ನಾಟಕದಲ್ಲಿ ಮಳೆ ಕೊರತೆಯಾಗಿದೆ” ಎಂದು ಐಎಂಡಿ ಅಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಧ್ಯಪ್ರಾಚ್ಯ ಸಂಘರ್ಷ-ಕಚ್ಚಾ ತೈಲ ಬೆಲೆ ಏರಿಕೆ: ಭಾರತೀಯ ಷೇರು ಮಾರುಕಟ್ಟೆಯಲ್ಲಿ ರಕ್ತಪಾತ; ಸೆನ್ಸೆಕ್ಸ್ 789 ಅಂಕ ಇಳಿಕೆ, 24 ಸಾವಿರಕ್ಕಿಂತ ಕೆಳಗೆ ಕುಸಿದ Nifty

ಇರಾನ್ ವಿರುದ್ಧ ಇತ್ತೀಚಿನ ದಾಳಿ ಪೂರ್ಣಗೊಳಿಸಿದ್ದೇವೆ; ಪ್ರತೀಕಾರಕ್ಕೆ ಮುಂದಾದರೆ ಮತ್ತಷ್ಟು ದಾಳಿ: ಡೊನಾಲ್ಡ್ ಟ್ರಂಪ್ ಎಚ್ಚರಿಕೆ

ನೇಪಾಳ ಪ್ರವಾಹ ಮಹಾ ದುರಂತ: ಸಾವಿನ ಸಂಖ್ಯೆ 1,127ಕ್ಕೆ ಏರಿಕೆ, ನಾಪತ್ತೆಯಾಗಿರುವ 4,858 ಮಂದಿಗಾಗಿ ಮುಂದುವರೆದ ಕಾರ್ಯಾಚರಣೆ..!

ಗೃಹಲಕ್ಷ್ಮಿ ನಕಲಿ ಖಾತೆಗಳಿಗೆ ಕಡಿವಾಣ: ಮನೆ-ಮನೆ ಸಮೀಕ್ಷೆಗೆ ಸರ್ಕಾರ ಮುಂದು, ಸಮೀಕ್ಷೆ ತಪ್ಪಿಸಿದ್ರೆ ನಿಲ್ಲಲಿದೆ 2,000 ರೂ. ಹಣ..!

ನೇಪಾಳ ಮಹಾ ಪ್ರವಾಹ: ಸಾವಿನ ದವಡೆಯಿಂದ ಜಸ್ಟ್ ಮಿಸ್; ಸುರಕ್ಷಿತವಾಗಿ ಬೆಂಗಳೂರಿಗೆ ಮರಳಿದ 17 ಮಂದಿ ಕನ್ನಡಿಗರು!