ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಶಾಸಕ ಅಶೋಕ್ ಕುಮಾರ್ ರೈ  
ರಾಜ್ಯ

KRIDL ಕಾಮಗಾರಿಗಳಲ್ಲಿ ಶೇ.7ರಷ್ಟು ಕಮಿಷನ್: ಡಿ ಕೆ ಶಿವಕುಮಾರ್ ಗೆ ಪತ್ರ ಬರೆದ ಸ್ವಪಕ್ಷ ಶಾಸಕ ಅಶೋಕ್ ಕುಮಾರ್ ರೈ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಈಶ್ವರ ಬಿ. ಖಂಡ್ರೆ ಅವರು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದು, ಕೆಆರ್‌ಐಡಿಎಲ್ ಮಾತ್ರ ಯಾವುದೇ ಅಕ್ರಮ ನಡೆದಿಲ್ಲ ಎಂದು ಸ್ಪಷ್ಟಪಡಿಸಿದೆ.

ಮಂಗಳೂರು: ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (KRIDL)ನಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಸರ್ಕಾರ ತನಿಖೆಗೆ ಆದೇಶಿಸಿದೆ. ಪುತ್ತೂರು ಕಾಂಗ್ರೆಸ್ ಶಾಸಕ ಕೆ. ಅಶೋಕ್ ಕುಮಾರ್ ರೈ, ಸಚಿವರ ಹೆಸರಿನಲ್ಲಿ ಗುತ್ತಿಗೆದಾರರಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಇಬ್ಬರು ಎಂಜಿನಿಯರ್‌ಗಳ ವಿರುದ್ಧ ಆರೋಪಿಸಿದ್ದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಈಶ್ವರ ಬಿ. ಖಂಡ್ರೆ ಅವರು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದು, ಕೆಆರ್‌ಐಡಿಎಲ್ ಮಾತ್ರ ಯಾವುದೇ ಅಕ್ರಮ ನಡೆದಿಲ್ಲ ಎಂದು ಸ್ಪಷ್ಟಪಡಿಸಿದೆ. ವಿವಾದಕ್ಕೆ ಕಾರಣವಾಗಿರುವ ಶೇ.7ರಷ್ಟು ಕಡಿತವು ಅಕ್ರಮ ಶುಲ್ಕವಲ್ಲ, ಬದಲಿಗೆ ಅಧಿಕೃತ ಆಡಳಿತಾತ್ಮಕ ಶುಲ್ಕವಾಗಿದೆ ಎಂದು ಸಂಸ್ಥೆ ಹೇಳಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬರೆದ ಪತ್ರದಲ್ಲಿ ಅಶೋಕ್ ಕುಮಾರ್ ರೈ, ಕೆಆರ್‌ಐಡಿಎಲ್‌ನ ಮಂಗಳೂರು ವಿಭಾಗದ ಕಾರ್ಯಪಾಲಕ ಎಂಜಿನಿಯರ್ ವಿಜಯ್ ಹಾಗೂ ಕಿರಿಯ ಎಂಜಿನಿಯರ್ ಪ್ರಜ್ವಲ್ ಅವರ ಕಾರ್ಯವೈಖರಿ ಕುರಿತು ಇಲಾಖಾ ತನಿಖೆ ನಡೆಸುವಂತೆ ಕೋರಿದ್ದಾರೆ. ಸರ್ಕಾರಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿರುವ ಗುತ್ತಿಗೆದಾರರು ಈ ಇಬ್ಬರು ಅಧಿಕಾರಿಗಳಿಂದ ಕಿರುಕುಳ, ಬೆದರಿಕೆ ಹಾಗೂ ಅಕ್ರಮ ಹಣದ ಬೇಡಿಕೆ ಎದುರಿಸುತ್ತಿರುವ ಬಗ್ಗೆ ದೂರು ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಅಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆರ್‌ಡಿಪಿಆರ್ ಸಚಿವರ ಹೆಸರಿನಲ್ಲಿ ಪ್ರತಿ ತಿಂಗಳು ಹಣ ಪಾವತಿಸಬೇಕು ಎಂದು ಹೇಳುತ್ತಿದ್ದರು ಎಂದು ಗುತ್ತಿಗೆದಾರರು ಆರೋಪಿಸಿರುವುದಾಗಿ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ. ಹೆಚ್ಚುವರಿಯಾಗಿ ಶೇ.7ರಷ್ಟು “ಕೆಆರ್‌ಐಡಿಎಲ್ ಚಾರ್ಜ್” ಪಾವತಿಸುವಂತೆ ಗುತ್ತಿಗೆದಾರರನ್ನು ಒತ್ತಾಯಿಸಲಾಗುತ್ತಿತ್ತು. ಪ್ರಶ್ನಿಸಿದವರಿಗೆ ಬೆದರಿಕೆ ಹಾಕಲಾಗುತ್ತಿತ್ತು ಎಂದು ಆರೋಪಿಸಿದ್ದಾರೆ.

ಈ ಆರೋಪಗಳು ಗಂಭೀರವಾಗಿದ್ದು, ಸಾರ್ವಜನಿಕ ಹಣದಿಂದ ಕೈಗೊಳ್ಳುವ ಅಭಿವೃದ್ಧಿ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆದರೆ ಪಾರದರ್ಶಕತೆಗೆ ಧಕ್ಕೆಯಾಗುತ್ತದೆ, ಮೂಲಸೌಕರ್ಯದ ಗುಣಮಟ್ಟ ಕುಸಿಯುತ್ತದೆ ಹಾಗೂ ಸರ್ಕಾರಿ ಸಂಸ್ಥೆಗಳ ಮೇಲಿನ ಜನರ ವಿಶ್ವಾಸಕ್ಕೆ ಧಕ್ಕೆ ಉಂಟಾಗುತ್ತದೆ ಎಂದು ಪತ್ರದಲ್ಲಿ ಅಶೋಕ್ ಕುಮಾರ್ ರೈ ಹೇಳಿದ್ದಾರೆ.

ಆರೋಪಗಳ ಕುರಿತು ನ್ಯಾಯಸಮ್ಮತ ಹಾಗೂ ಸಮಗ್ರ ಇಲಾಖಾ ತನಿಖೆಗೆ ಆದೇಶಿಸಬೇಕು, ತನಿಖೆ ಪೂರ್ಣಗೊಳ್ಳುವವರೆಗೆ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಅಥವಾ ವರ್ಗಾವಣೆ ಮಾಡಬೇಕು ಹಾಗೂ ಆರೋಪಗಳು ಸಾಬೀತಾದರೆ ಶಿಸ್ತು ಮತ್ತು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದಾರೆ. ಅಕ್ರಮವಾಗಿ ಹಣ ಸಂಗ್ರಹಿಸಿರುವುದು ಸಾಬೀತಾದರೆ ಆ ಹಣವನ್ನು ವಾಪಸ್ ಪಡೆಯುವಂತೆಯೂ ಮನವಿ ಮಾಡಿದ್ದಾರೆ.

ಆರೋಪಗಳಿಗೆ ಪ್ರತಿಕ್ರಿಯಿಸಿರುವ ಸಚಿವ ಈಶ್ವರ್ ಖಂಡ್ರೆ, ಅಶೋಕ್ ಕುಮಾರ್ ರೈ ಅವರ ದೂರನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದ್ದಾರೆ. ಕೆಆರ್‌ಐಡಿಎಲ್ ಎಂಜಿನಿಯರ್‌ಗಳು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆಯೇ ಹಾಗೂ ಶಾಸಕರು ಮಾಡಿರುವ ಆರೋಪಗಳಲ್ಲಿ ಹುರುಳಿದೆಯೇ ಎಂಬುದನ್ನು ತನಿಖೆ ನಡೆಸಲು ಅಧೀಕ್ಷಕ ಎಂಜಿನಿಯರ್‌ ಹುದ್ದೆಯ ಅಧಿಕಾರಿಯ ನೇತೃತ್ವದಲ್ಲಿ ಮೂವರು ಸದಸ್ಯರ ಸಮಿತಿ ರಚಿಸುವಂತೆ ಸಚಿವರು ಸೂಚಿಸಿದ್ದಾರೆ.

ಅಗತ್ಯವಿದ್ದರೆ ಶಿಸ್ತು ಕ್ರಮಕ್ಕೆ ಶಿಫಾರಸುಗಳನ್ನೂ ಒಳಗೊಂಡ ತನಿಖಾ ವರದಿಯನ್ನು ಏಳು ದಿನಗಳೊಳಗೆ ಸಲ್ಲಿಸುವಂತೆ ಈಶ್ವರ್ ಖಂಡ್ರೆ ಸಮಿತಿಗೆ ಸೂಚಿಸಿದ್ದಾರೆ.

ಇದೇ ವೇಳೆ, ಕೆಆರ್‌ಐಡಿಎಲ್ ವ್ಯವಸ್ಥಾಪಕ ನಿರ್ದೇಶಕರು ಸ್ಪಷ್ಟನೆ ನೀಡಿದ್ದು, ಗುತ್ತಿಗೆದಾರರ ಗುಂಪಿನ ನಾಯಕರಿಗೆ ನೀಡಬೇಕಾದ ಪಾವತಿಗಳಿಂದ ಶೇ.7ರಷ್ಟು ಕಡಿತ ಮಾಡುತ್ತಿರುವುದು ಅಕ್ರಮ ಎಂಬ ಆರೋಪವನ್ನು ತಳ್ಳಿಹಾಕಿದ್ದಾರೆ.

ಗುಂಪಿನ ನಾಯಕರ ಮೂಲಕ ಕಾಮಗಾರಿಗಳನ್ನು ನಿರ್ವಹಿಸಿದಾಗ ಕರ್ನಾಟಕ ಲೋಕೋಪಯೋಗಿ ಇಲಾಖೆಯ ದರಪಟ್ಟಿ (Schedule of Rates) ಅಡಿಯಲ್ಲಿ ಅನುಮತಿಸಲಾದ ಜಾಬ್ ಸೇವಿಂಗ್ಸ್ ಮೊತ್ತವೇ ಶೇ.7ರಷ್ಟು ಕಡಿತವಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಇಲಾಖೆಗಳಿಂದ ಸಂಗ್ರಹಿಸುವ ಶೇ.3ರಷ್ಟು ಸೇವಾ ಶುಲ್ಕದೊಂದಿಗೆ ಒಟ್ಟು ಶೇ.10ರಷ್ಟು ಮೊತ್ತವನ್ನು ಕೆಆರ್‌ಐಡಿಎಲ್ ಖಾತೆಗೆ ಜಮೆ ಮಾಡಲಾಗುತ್ತದೆ. ಈ ಹಣವನ್ನು ಸಿಬ್ಬಂದಿ ವೇತನ, ಆಡಳಿತಾತ್ಮಕ ವೆಚ್ಚಗಳು ಹಾಗೂ ಕಾನೂನುಬದ್ಧ ಬಾಧ್ಯತೆಗಳನ್ನು ಪೂರೈಸಲು ಬಳಸಲಾಗುತ್ತದೆ ಎಂದು ಸಂಸ್ಥೆ ಹೇಳಿದೆ.

ಈ ಕಡಿತಗಳು ಅಧಿಕೃತವಾಗಿದ್ದು, ಸರಿಯಾಗಿ ಲೆಕ್ಕಪತ್ರದಲ್ಲಿ ದಾಖಲಿಸಲಾಗುತ್ತವೆ, ಆಂತರಿಕ ಮತ್ತು ಕಾನೂನುಬದ್ಧ ಲೆಕ್ಕಪರಿಶೋಧನೆಗೆ ಒಳಪಡುತ್ತವೆ ಎಂದು ಕೆಆರ್‌ಐಡಿಎಲ್ ಸ್ಪಷ್ಟಪಡಿಸಿದೆ. ತನ್ನ ಅಧಿಕಾರಿಗಳು ಸರ್ಕಾರದ ನಿಗದಿತ ನಿಯಮಾವಳಿಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇರಾನ್ ವಿರುದ್ಧ ಇತ್ತೀಚಿನ ದಾಳಿ ಪೂರ್ಣಗೊಳಿಸಿದ್ದೇವೆ; ಪ್ರತೀಕಾರಕ್ಕೆ ಮುಂದಾದರೆ ಮತ್ತಷ್ಟು ದಾಳಿ: ಡೊನಾಲ್ಡ್ ಟ್ರಂಪ್ ಎಚ್ಚರಿಕೆ

ನೇಪಾಳ ಪ್ರವಾಹ ಮಹಾ ದುರಂತ: ಸಾವಿನ ಸಂಖ್ಯೆ 1,127ಕ್ಕೆ ಏರಿಕೆ, ನಾಪತ್ತೆಯಾಗಿರುವ 4,858 ಮಂದಿಗಾಗಿ ಮುಂದುವರೆದ ಕಾರ್ಯಾಚರಣೆ..!

ಗೃಹಲಕ್ಷ್ಮಿ ನಕಲಿ ಖಾತೆಗಳಿಗೆ ಕಡಿವಾಣ: ಮನೆ-ಮನೆ ಸಮೀಕ್ಷೆಗೆ ಸರ್ಕಾರ ಮುಂದು, ಸಮೀಕ್ಷೆ ತಪ್ಪಿಸಿದ್ರೆ ನಿಲ್ಲಲಿದೆ 2,000 ರೂ. ಹಣ..!

ನೇಪಾಳ ಮಹಾ ಪ್ರವಾಹ: ಸಾವಿನ ದವಡೆಯಿಂದ ಜಸ್ಟ್ ಮಿಸ್; ಸುರಕ್ಷಿತವಾಗಿ ಬೆಂಗಳೂರಿಗೆ ಮರಳಿದ 17 ಮಂದಿ ಕನ್ನಡಿಗರು!

ಏನಾದರೂ ಮಾಡುತ್ತಿದ್ದೇವೆ ಎಂದು ತೋರಿಸಿಕೊಳ್ಳಲು ಅಶೋಕ-ವಿಜಯೇಂದ್ರ ಪಾದಯಾತ್ರೆ ನಡೆಸುತ್ತಿದ್ದಾರೆ: ಬಿ.ಕೆ.ಹರಿಪ್ರಸಾದ್ ವ್ಯಂಗ್ಯ