ಹನೂರು (ಚಾಮರಾಜನಗರ): ಇತ್ತೀಚೆಗೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೋಕಿನ ಅರಣ್ಯ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟ ಪ್ರಕರಣ ಮಾಸುವ ಮುನ್ನವೇ, ಇದೇ ಅರಣ್ಯ ವ್ಯಾಪ್ತಿಯಲ್ಲಿ ಮತ್ತೊಂದು ಅಮಾನವೀಯ ಕಳ್ಳಬೇಟೆ ಪ್ರಕರಣ ಬೆಳಕಿಗೆ ಬಂದಿದ್ದು, ನೀರು ಕುಡಿಯಲು ಬಂದಿದ್ದ ಕಡವೆಯನ್ನು ನಾಡಬಂದೂಕಿನಿಂದ ಶೂಟ್ ಮಾಡಿ, ಮೂರು ತುಂಡು ಮಾಡಿ ಸಾಗಿಸಲು ಯತ್ನಿಸುತ್ತಿದ್ದ ಘಟನೆ ವರದಿಯಾಗಿದೆ. ಆ ಕುರಿತ ಮಾಹಿತಿ ಇಲ್ಲಿದೆ:
ಏನಿದು ಘಟನೆ?
ಮಲೆ ಮಹದೇಶ್ವರ ವನ್ಯಜೀವಿಧಾಮದ ಹನೂರು ವಲಯದ ಉಡುತೊರೆಹಳ್ಳ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ನೀರು ಕುಡಿಯಲು ಬಂದಿದ್ದ ಕಡವೆಯನ್ನು ನಾಡಬಂದೂಕಿನಿಂದ ಶೂಟ್ ಮಾಡಿ, ಮೂರು ತುಂಡು ಮಾಡಿ ಸಾಗಿಸಲು ಯತ್ನಿಸುತ್ತಿದ್ದ ಘಟನೆ ನಡೆದಿದೆ. ಸೆಪ್ಟೆಂಬರ್ 1 ರಂದು ರಾತ್ರಿ ಗಸ್ತಿನಲ್ಲಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ, ತಲೆಯ ಮೇಲೆ ಚೀಲ ಹೊತ್ತು ನಾಡಬಂದೂಕು ಹಿಡಿದು ಸಾಗುತ್ತಿದ್ದ ನಾಲ್ವರು ಶಂಕಿತರನ್ನು ಗುರುತಿಸಿದ್ದಾರೆ. ಇನ್ನು, ಅರಣ್ಯ ಸಿಬ್ಬಂದಿಯನ್ನು ನೋಡುತ್ತಿದ್ದಂತೆಯೇ ಬೇಟೆಗಾರರು ಕಡವೆ ಮಾಂಸವಿದ್ದ ಚೀಲ ಹಾಗೂ ನಾಡಬಂದೂಕುಗಳನ್ನು ಸ್ಥಳದಲ್ಲೇ ಬಿಟ್ಟು ದಟ್ಟ ಅರಣ್ಯದೊಳಗೆ ಓಡಿ ಹೋಗಿದ್ದಾರೆ. ಎತನ್ಮಧ್ಯೆ, ಸ್ಥಳ ಪರಿಶೀಲನೆ ನಡೆಸಿದಾಗ ಚೀಲದಲ್ಲಿ ಮೂರು ತುಂಡುಗಳಾಗಿ ಕತ್ತರಿಸಲಾಗಿದ್ದ ಕಡವೆಯ ಮಾಂಸ ಪತ್ತೆಯಾಗಿದ್ದು, ಅದನ್ನು ಅರಣ್ಯ ಸಿಬ್ಬಂದಿ ಜಪ್ತಿ ಮಾಡಿದ್ದಾರೆ.
ಮುಂದುವರೆದು, ಆರೋಪಿಗಳ ಪತ್ತೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಅದರಲ್ಲೂ, ಕಾಡುಪ್ರಾಣಿಗಳ ಬೇಟೆ ತಡೆಯಲು ಅರಣ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದರೂ, ಬೇಟೆಗಾರರು ಮತ್ತೆ ಸಕ್ರಿಯರಾಗಿರುವುದು ಆತಂಕಕ್ಕೆ ಕಾರಣವಾಗಿದೆ.