ಬೆಂಗಳೂರು: ಕೆಪಿಎಸ್ಸಿ ಪಶು ವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದ ಮುಖ್ಯ ದೂರುದಾರ ಹಾಸನ ಮೂಲದ ಡಾ. ಮಂಜುನಾಥ್ ಅವರಿಗೆ ಬಂದಿರುವ 7 ನಿಮಿಷಗಳ ಸುದೀರ್ಘ ಬೆದರಿಕೆ ಕರೆಯ ಆಡಿಯೋ ಇದೀಗ ಭಾರಿ ಸಂಚಲನ ಮೂಡಿಸಿದೆ. ಹಗರಣದ ವಿರುದ್ಧ ದೂರು ನೀಡಿ ಎಫ್ಐಆರ್ ದಾಖಲಿಸಿದ್ದಕ್ಕಾಗಿ ಆರೋಪಿಗಳ ಕಡೆಯವರು ಅವರಿಗೆ ನಿರಂತರವಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಆ ಕುರಿತ ವರದಿ ಇಲ್ಲಿದೆ:
ವರದಿಗಳ ಪ್ರಕಾರ, ಪರೀಕ್ಷಾ ಅಕ್ರಮದಲ್ಲಿ ತೇರ್ಗಡೆಯಾಗಿ ಎಫ್ಐಆರ್ನಲ್ಲಿ ಹೆಸರಿರುವ ಅಭ್ಯರ್ಥಿಯೊಬ್ಬರ ಸಂಬಂಧಿಕರು ಹಾಗೂ ಸ್ನೇಹಿತರು ಡಾ. ಮಂಜುನಾಥ್ ಅವರಿಗೆ ಕರೆ ಮಾಡಿ, ಒಂದು ವೇಳೆ ಆಕೆ (ಆರೋಪಿ ಅಭ್ಯರ್ಥಿ) ಸೂಸೈಡ್ ಮಾಡಿಕೊಂಡರೆ ಯಾರು ಹೊಣೆ? ಎಂದು ಪ್ರಶ್ನಿಸಿ ಮಾನಸಿಕವಾಗಿ ಒತ್ತಡ ಹೇರಲು ಯತ್ನಿಸಿದ್ದಾರೆ ಎನ್ನಲಾಗಿದೆ. ಜೊತೆಗೆ, ನೀವು ಏನು ದಾಖಲೆ ಇಟ್ಟುಕೊಂಡು ದೂರು ಕೊಟ್ಟಿದ್ದೀರಾ? ಯಾರು ಅಕ್ರಮ ಎಸಗಿದ್ದಾರೋ ಅವರ ವಿರುದ್ಧ ಹೋರಾಡಿ. ಆಗ ನಾವು ನಿಮಗೆ ಶಹಬ್ಬಾಸ್ಗಿರಿ ಕೊಡುತ್ತೇವೆ ಎಂದಿದ್ದಾರೆ ಎನ್ನಲಾಗಿದೆ.
ಮುಂದುವರೆದು, ಮತ್ತೊಬ್ಬ ದೂರುದಾರೆ ಭಾವನಗೂ ಬೆದರಿಕೆ ಕರೆ ಬಂದಿದೆ ಎನ್ನಲಾಗಿದ್ದು, ಅದರಂತೆ, ನೀನು ಎಲ್ಲಿ ಇರುತ್ತೀಯಾ ಹೇಳು? ಬೆಂಗಳೂರಿನಲ್ಲಿ ಇರುತ್ತೀಯಾ? ನಿನಗೆ 5 ರೂಪಾಯಿ ರೇಷನ್ ಕೂಡ ಸಿಗದಹಾಗೆ ಮಾಡಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.
ಪ್ರಕರಣವೇನು?
ಪಶುಸಂಗೋಪನೆ ಇಲಾಖೆಯ 400 ಪಶು ವೈದ್ಯಾಧಿಕಾರಿಗಳ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆದಿದೆ ಎಂದು ಆರೋಪಿಸಿ ಜುಲೈ 25 ರಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಮಂಜುನಾಥ್ ಅವರು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪರೀಕ್ಷೆಗೂ ಮುನ್ನವೇ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಒಎಂಆರ್ ಶೀಟ್ ತಿದ್ದುಪಡಿ ಮಾಡಿರುವ ಆರೋಪ ಕೇಳಿಬಂದಿದೆ. ಜೊತೆಗೆ, ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ (CID) ತಂಡವು ಕೆಪಿಎಸ್ಸಿಯ ಮಾಜಿ ಪರೀಕ್ಷಾ ನಿಯಂತ್ರಕ ಹಾಗೂ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರನ್ನು ಬಂಧಿಸಿ ಅಮಾನತುಗೊಳಿಸಿದೆ. ಇದರೊಂದಿಗೆ, ಈ ಪ್ರಕರಣದಲ್ಲಿ ಕೋಟ್ಯಂತರ ರೂಪಾಯಿ ಡೀಲ್ ಕುದುರಿಸುತ್ತಿದ್ದ ಮುಖ್ಯ ಮಧ್ಯವರ್ತಿ ಬಸವರಾಜ್ ಕನ್ನಾಳೆ ಎಂಬಾತನನ್ನು ಸಿಐಡಿ ಬಂಧಿಸಿದೆ.