ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA) ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್ ಕಾರಿಡಾರ್ಗಳಲ್ಲಿ ದ್ವಿಚಕ್ರ ವಾಹನಗಳ ಸಂಚಾರವನ್ನು ನಿಷೇಧಿಸಲು ಈ ಹಿಂದೆ ಕೈಗೊಂಡಿದ್ದ ನಿರ್ಧಾರವನ್ನು ಇದೀಗ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ.
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಈ ಬಗ್ಗೆ ಮಾತನಾಡಿ, ಸಂಜೀವ್ ನಗರ ಕ್ರಾಸ್ನಿಂದ ವಿದ್ಯಾಶಿಲ್ಪ ಜಂಕ್ಷನ್ವರೆಗೆ ಇರುವ ಏರ್ಪೋರ್ಟ್ ರಸ್ತೆ ಎಲಿವೇಟೆಡ್ ಕಾರಿಡಾರ್ನಲ್ಲಿ ಸರಕು ವಾಹನಗಳು, ದ್ವಿಚಕ್ರ ವಾಹನಗಳು ಮತ್ತು ಆಟೋರಿಕ್ಷಾಗಳನ್ನು ಪ್ರವೇಶ ದ್ವಾರಗಳಲ್ಲೇ ಸರ್ವಿಸ್ ರಸ್ತೆಗೆ ತಿರುಗಿಸಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿದೆ ಎಂದು ಹೇಳಿದರು.
ಜಾರಿ ಪ್ರಕ್ರಿಯೆಯ ಮೊದಲ ಹಂತವಾಗಿ ಏರ್ಪೋರ್ಟ್ ರಸ್ತೆ ಎಲಿವೇಟೆಡ್ ಕಾರಿಡಾರ್ನಲ್ಲಿ ಸರಕು ವಾಹನಗಳ ಮೇಲಿನ ನಿರ್ಬಂಧ ಮುಂದುವರಿಯಲಿದೆ. ಸದ್ಯಕ್ಕೆ ದ್ವಿಚಕ್ರ ವಾಹನಗಳು ಮತ್ತು ಆಟೋರಿಕ್ಷಾಗಳಿಗೆ ಎಲಿವೇಟೆಡ್ ಕಾರಿಡಾರ್ನಲ್ಲಿ ಸಂಚರಿಸಲು ಅವಕಾಶ ಮುಂದುವರಿಯಲಿದೆ. ಸೆಪ್ಟೆಂಬರ್ 11ರಿಂದ ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್ ಕಾರಿಡಾರ್ನಲ್ಲೂ ಇದೇ ರೀತಿಯ ಹಂತವಾರು ಕ್ರಮವನ್ನು ಅನುಸರಿಸಲಾಗುವುದು ಎಂದು ಹೇಳಿದರು.
ಬೆಂಗಳೂರು ಸಂಚಾರ ಪೊಲೀಸರು ಈಗಾಗಲೇ ಗುರುತಿಸಲಾಗಿರುವ ಐದು ಎಲಿವೇಟೆಡ್ ಕಾರಿಡಾರ್ಗಳ ಪೈಕಿ ನಾಲ್ಕರಲ್ಲಿ ನಿರ್ಬಂಧಗಳನ್ನು ಜಾರಿಗೊಳಿಸಿದ್ದು, ಪ್ರಾಥಮಿಕ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಬಿಜಿಎಸ್ ಫ್ಲೈಓವರ್, ಪೀಣ್ಯ ಫ್ಲೈಓವರ್ ಮತ್ತು ಡಬಲ್ ಡೆಕ್ಕರ್ ಫ್ಲೈಓವರ್ಗಳಲ್ಲಿ ಸಂಚಾರ ಸುಗಮವಾಗಿ ಸಾಗುತ್ತಿರುವುದು ಕಂಡುಬಂದಿದೆ ಎಂದು ಸಚಿವರು ಹೇಳಿದರು.
ಉಳಿದ ಅಧಿಸೂಚಿತ ನಿರ್ಬಂಧಗಳನ್ನು ಜಾರಿಗೊಳಿಸುವ ಮೊದಲು, ನಿರ್ಬಂಧಗಳ ಪರಿಣಾಮವನ್ನು ನಿರಂತರವಾಗಿ ಪರಿಶೀಲಿಸಲಾಗುವುದು ಎಂದು ಖರ್ಗೆ ಹೇಳಿದರು. ಸಂಚಾರದ ಹರಿವು, ರಸ್ತೆ ಸುರಕ್ಷತಾ ಪರಿಸ್ಥಿತಿಗಳು, ಪ್ರವೇಶ ದ್ವಾರಗಳಲ್ಲಿ ನಿರ್ಬಂಧಗಳನ್ನು ಜಾರಿಗೊಳಿಸುವ ಸಾಧ್ಯತೆ ಹಾಗೂ ಎಲಿವೇಟೆಡ್ ಕಾರಿಡಾರ್ಗಳ ಕೆಳಭಾಗ ಮತ್ತು ಪಕ್ಕದಲ್ಲಿರುವ ರಸ್ತೆಗಳಲ್ಲಿ ಉಂಟಾಗುವ ಪರಿಣಾಮವನ್ನು ಅಧಿಕಾರಿಗಳು ಪರಿಗಣಿಸಲಿದ್ದಾರೆ.
ಆದೇಶಗಳ ಆಧಾರದ ಮೇಲೆ ಮಾತ್ರ ಬೆಂಗಳೂರಿನ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಜಾರಿಗೊಳಿಸುವ ಬದಲು, ಸ್ಥಳೀಯ ಸಂಚಾರ ಪರಿಸ್ಥಿತಿಗಳ ಮೇಲೆ ಅವುಗಳ ನೈಜ ಪರಿಣಾಮವನ್ನು ಅಂದಾಜಿಸಿ, ಸಾರ್ವಜನಿಕರಿಗೆ ಕನಿಷ್ಠ ಅನಾನುಕೂಲವಾಗುವಂತೆ ಹಂತ ಹಂತವಾಗಿ ಜಾರಿಗೊಳಿಸುವುದು ನಮ್ಮ ಉದ್ದೇಶ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಬೆಂಗಳೂರು ಗ್ರಾಮಾಂತರ ಸಂಸದ ಡಾ. ಸಿ.ಎನ್. ಮಂಜುನಾಥ್, ಐದು ಪ್ರಮುಖ ಫ್ಲೈಓವರ್ಗಳು ಮತ್ತು ಎಲಿವೇಟೆಡ್ ಕಾರಿಡಾರ್ಗಳಲ್ಲಿ ಪ್ರಸ್ತಾಪಿಸಲಾಗಿರುವ ನಿರ್ಬಂಧಗಳು ಈಗಾಗಲೇ ದಟ್ಟಣೆಯಿಂದ ಕೂಡಿರುವ ರಸ್ತೆಗಳಲ್ಲಿ ಸಂಚಾರ ದಟ್ಟಣೆಯನ್ನು ಮತ್ತಷ್ಟು ಹೆಚ್ಚಿಸಬಹುದು. ಹೀಗಾಗಿ ಈ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುಮಾರು 80 ಲಕ್ಷ ದ್ವಿಚಕ್ರ ವಾಹನಗಳಿದ್ದು, ನಗರದಲ್ಲಿ ನೋಂದಣಿಯಾಗಿರುವ ಪ್ರತಿ 10 ವಾಹನಗಳ ಪೈಕಿ ಸುಮಾರು ಏಳು ದ್ವಿಚಕ್ರ ವಾಹನಗಳಾಗಿವೆ ಎಂದರು.
ಎಲಿವೇಟೆಡ್ ಕಾರಿಡಾರ್ಗಳಿಂದ ಇಷ್ಟೊಂದು ದೊಡ್ಡ ಪ್ರಮಾಣದ ಸಂಚಾರವನ್ನು ಮುಖ್ಯ ರಸ್ತೆಗಳು ಮತ್ತು ಸರ್ವಿಸ್ ರಸ್ತೆಗಳಿಗೆ ತಿರುಗಿಸುವುದರಿಂದ ಈಗಿರುವ ರಸ್ತೆ ಜಾಲದ ಮೇಲೆ ಹೆಚ್ಚುವರಿ ಒತ್ತಡ ಉಂಟಾಗಬಹುದು ಎಂದು ಹೇಳಿದರು.
ಬೆಂಗಳೂರಿನ ಪ್ರಯಾಣಿಕರ ಹಿತದೃಷ್ಟಿಯಿಂದ ಸರ್ಕಾರ ಈ ನಿರ್ಬಂಧಗಳನ್ನು ಮರುಪರಿಶೀಲಿಸಿ, ಹೆಚ್ಚು ಪ್ರಾಯೋಗಿಕ ಹಾಗೂ ದತ್ತಾಂಶ ಆಧಾರಿತ ವಿಧಾನವನ್ನು ಅಳವಡಿಸಿಕೊಳ್ಳಬೇಕು. ಬೆಂಗಳೂರಿಗೆ ಸುರಕ್ಷಿತ ರಸ್ತೆಗಳು ಮಾತ್ರವಲ್ಲ, ಇನ್ನಷ್ಟು ಪರಿಣಾಮಕಾರಿ ಸಂಚಾರ ನಿರ್ವಹಣೆಯೂ ಅಗತ್ಯವಿದೆ ಎಂದು ಮಂಜುನಾಥ್ ಹೇಳಿದರು.