ಬೆಂಗಳೂರು: ಭಾರತ ರತ್ನ ಪುರಸ್ಕೃತ ಹಾಗೂ ಖ್ಯಾತ ವಿಜ್ಞಾನಿ ಪ್ರೊ. ಸಿ.ಎನ್.ಆರ್. ರಾವ್ ಅವರಿಗೆ ಮತದಾರರ ಪಟ್ಟಿಯಲ್ಲಿನ ಹೆಸರು ವ್ಯತ್ಯಾಸಕ್ಕೆ ಸಂಬಂಧಿಸಿದಂತೆ ನೊಟೀಸ್ ನೀಡಲಾಗಿದೆ ಎಂಬ ಮಾಧ್ಯಮ ವರದಿಗಳನ್ನು ಮುಖ್ಯ ಚುನಾವಣಾಧಿಕಾರಿ ಕಚೇರಿ ಸ್ಪಷ್ಟವಾಗಿ ತಳ್ಳಿಹಾಕಿದೆ.
SIR: ಭಾರತ ರತ್ನ ಸಿ.ಎನ್.ಆರ್. ರಾವ್ಗೆ ಹೆಸರು ವ್ಯತ್ಯಾಸದ ಕುರಿತು ನೋಟಿಸ್ ಎಂಬ ಶೀರ್ಷಿಕೆಯಡಿ ಇತ್ತೀಚೆಗೆ ಪ್ರಕಟವಾದ ವರದಿಯಿಂದ ಉಂಟಾದ ವಿವಾದಕ್ಕೆ ಸಂಬಂಧಿಸಿದಂತೆ ಚುನಾವಣಾ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು, ವರದಿಯಲ್ಲಿನ ಮಾಹಿತಿ ವಾಸ್ತವಾಂಶಕ್ಕೆ ವಿರುದ್ಧವಾಗಿದೆ. ಪ್ರೊ. ಸಿ ಎನ್ ರಾವ್ ಅಥವಾ ಅವರ ಕುಟುಂಬದ ಯಾವುದೇ ಸದಸ್ಯರಿಗೆ ಯಾವುದೇ ನೊಟೀಸ್ ನೀಡಿಲ್ಲ ಎಂದು ತಿಳಿಸಿದ್ದಾರೆ.
ಅಧಿಕೃತ ಸ್ಪಷ್ಟನೆಯ ಪ್ರಕಾರ, ಪ್ರೊ. ಸಿ.ಎನ್.ಆರ್. ರಾವ್ ಅವರು 157-ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಭಾಗ ಸಂಖ್ಯೆ 59ರಲ್ಲಿ ಮತದಾರರಾಗಿ ನೋಂದಣಿಯಾಗಿದ್ದಾರೆ. ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಸಂದರ್ಭದಲ್ಲಿ, ಪ್ರಸ್ತುತ ಕರಡು ಮತದಾರರ ಪಟ್ಟಿಯಲ್ಲಿ ಅವರ ಹೆಸರು “Proff C.N.R. Rao S/O Nagesh Rav. H” ಎಂದು ದಾಖಲಾಗಿದ್ದರೆ, 2002ರ ಮತದಾರರ ಪಟ್ಟಿಯಲ್ಲಿ “Rama S/O H. Nagesh” ಎಂದು ದಾಖಲಾಗಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ.
ಪ್ರೊ. ರಾವ್ ಅವರ ಅಪಾರ ಗೌರವ ಹಾಗೂ ದೇಶಕ್ಕೆ ಅವರು ನೀಡಿರುವ ಮಹತ್ವದ ಕೊಡುಗೆಯನ್ನು ಪರಿಗಣಿಸಿ, ರಾಜ್ಯದ ಅಧಿಕಾರಿಗಳು, ರಾಜ್ಯ SVEEP ನೋಡಲ್ ಅಧಿಕಾರಿ, ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಆಯುಕ್ತರು, ಮಲ್ಲೇಶ್ವರಂ ಚುನಾವಣಾ ನೋಂದಣಾಧಿಕಾರಿ (ERO) ಹಾಗೂ ಸ್ಥಳೀಯ ಬೂತ್ ಮಟ್ಟದ ಅಧಿಕಾರಿ (BLO) ಅವರು ಸ್ವತಃ ಅವರ ನಿವಾಸಕ್ಕೆ ತೆರಳಿ ಗಣತಿ ನಮೂನೆಯನ್ನು ತಲುಪಿಸಿದರು.
ಪ್ರೊ. ಸಿ ಎನ್ ರಾವ್ ಅವರ ಮೇಲಿನ ಅಪಾರ ಗೌರವದ ಹಿನ್ನೆಲೆಯಲ್ಲಿ ಯಾವುದೇ ಅಧಿಕೃತ ನೋಟಿಸ್ ನೀಡಲಾಗಿಲ್ಲ. ಬದಲಿಗೆ, BLO ದಾಖಲೆಯನ್ನು ನೇರವಾಗಿ ಹೆಚ್ಚುವರಿ ಚುನಾವಣಾ ನೋಂದಣಾಧಿಕಾರಿ (AERO) ಅವರ ಅನುಮೋದನೆಗಾಗಿ ಶಿಫಾರಸು ಮಾಡಿದರು.
ಬಳಿಕ AERO ಅವರು ನಿನ್ನೆ ಅಂತಿಮ ಮತದಾರರ ಪಟ್ಟಿಯಲ್ಲಿ ಅವರ ಹೆಸರನ್ನು ಅನುಮೋದಿಸಿದ್ದಾರೆ.
ನಡೆದ ಘಟನೆಗಳ ಕ್ರಮವನ್ನು ದೃಢಪಡಿಸಲು ಮಲ್ಲೇಶ್ವರಂ ERO ಅವರ ಅಧಿಕೃತ ಹೇಳಿಕೆಗಳ ಜೊತೆಗೆ ಸ್ಥಳೀಯ BLO ದಾಖಲಿಸಿರುವ ವಿಡಿಯೊ ದೃಶ್ಯಾವಳಿಗಳನ್ನೂ ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ.