ಬೆಂಗಳೂರು: "ಕರ್ನಾಟಕವಷ್ಟೇ ಅಲ್ಲ, ಇಡೀ ದೇಶದಲ್ಲೇ ಇನ್ನು ಮುಂದೆ ಯಾವುದೇ ಪ್ರಶ್ನೆಪತ್ರಿಕೆ ಸೋರಿಕೆಯನ್ನು ಸಹಿಸುವುದಿಲ್ಲ" ಎಂದು 'ಕಾಕ್ರೋಚ್ ಜನತಾ ಪಕ್ಷ(ಸಿಜೆಪಿ)'ದ ರಾಷ್ಟ್ರೀಯ ಸಹ ಸಂಚಾಲಕ ಅಶುತೋಷ್ ರಾಂಕಾ ಅವರು ಗುಡುಗಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ರಾಂಕಾ, ಕರ್ನಾಟಕ ಲೋಕಸೇವಾ ಆಯೋಗ(KPSC)ದ ನೇಮಕಾತಿ ಹಗರಣದ ವಿರುದ್ಧ ಶೀಘ್ರದಲ್ಲೇ ದೊಡ್ಡ ಮಟ್ಟದಲ್ಲಿ ಹೋರಾಟ ಹಮ್ಮಿಕೊಳ್ಳುವುದಾಗಿ ಘೋಷಿಸಿದ್ದಾರೆ.
"ಕೆಪಿಎಸ್ಸಿ ನೇಮಕಾತಿಯಲ್ಲಿ ನಡೆದಿರುವ ಸಾಲು ಸಾಲು ಅಕ್ರಮಗಳ ಬಗ್ಗೆ ಸಾಕಷ್ಟು ಯುವಕರು ನೇರವಾಗಿ ನಮ್ಮ ಗಮನಕ್ಕೆ ತಂದಿದ್ದಾರೆ. ಈ ಹಗರಣದ ಕುರಿತು ಪ್ರಸ್ತುತ ಎಲ್ಲ ಮೂಲಗಳಿಂದ ಸಂಪೂರ್ಣ ಮಾಹಿತಿಯನ್ನ ಕಲೆಹಾಕಲಾಗುತ್ತಿದೆ. ಅನ್ಯಾಯಕ್ಕೊಳಗಾದ, ಪರೀಕ್ಷೆ ಬರೆದು ವಂಚನೆಗೆ ಒಳಗಾದ ಮತ್ತು ನೊಂದ ವಿದ್ಯಾರ್ಥಿಗಳ ಜೊತೆ ನಿರಂತರವಾಗಿ ಚರ್ಚೆ ನಡೆಸುತ್ತಿದ್ದೇವೆ" ಎಂದು ರಾಂಕಾ ತಿಳಿಸಿದ್ದಾರೆ.
ಈ ಅನ್ಯಾಯದ ವಿರುದ್ಧ ಸಿಜೆಪಿ ವತಿಯಿಂದ ಕಾನೂನು ಹೋರಾಟ ಮತ್ತು ಬೀದಿಗಿಳಿದು ಪ್ರತಿಭಟನೆ ನಡೆಸುವ ಕ್ರಮಗಳನ್ನ ಕೈಗೊಳ್ಳುವ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಅರ್ಹ ಮತ್ತು ನೊಂದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸಿಜೆಪಿ ಮುಖಂಡರು ಕೆಪಿಎಸ್ಸಿ ಹಗರಣದ ವಿರುದ್ಧ ಹೋರಾಟ ರೂಪಿಸಲು ಸಿದ್ಧತೆ ನಡೆಸುತ್ತಿದ್ದಾರೆ.
ಕೇವಲ ನೇಮಕಾತಿ ಹಗರಣ ಮಾತ್ರವಲ್ಲದೆ, ರಾಜ್ಯದ ಸರ್ಕಾರಿ ಶಾಲೆಗಳ ಶೋಚನೀಯ ದುಸ್ಥಿತಿಯ ಬಗ್ಗೆಯೂ ಸಿಜೆಪಿ ತೀವ್ರ ಕಳವಳ ವ್ಯಕ್ತಪಡಿಸಿದೆ. ರಾಜ್ಯದಾದ್ಯಂತ ಇರುವ ಸುಮಾರು 48,500 ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಹಾಗೂ ಶೈಕ್ಷಣಿಕ ಗುಣಮಟ್ಟವನ್ನ ಹೆಚ್ಚಿಸುವ ನಿಟ್ಟಿನಲ್ಲಿ ಸಿಜೆಪಿ ವತಿಯಿಂದ ಸಮಗ್ರ ತಪಾಸಣೆ ಕಾರ್ಯವನ್ನ ಕೈಗೆತ್ತಿಕೊಳ್ಳಲಾಗುವುದು ಎಂದು ರಾಂಕಾ ಹೇಳಿದ್ದಾರೆ.
ಶಾಲಾ ವಿದ್ಯಾರ್ಥಿಗಳಿಗೆ ಅಗತ್ಯವಾಗಿ ಬೇಕಾಗಿರುವ ಶೌಚಾಲಯ, ಗಾಳಿ, ಬೆಳಕು ಮತ್ತು ಗುಣಮಟ್ಟದ ಶಿಕ್ಷಣದಂತಹ ಸೌಲಭ್ಯಗಳ ಪರಿಶೀಲನೆಗಾಗಿ ಮುಂದಿನ ಮೂರು ದಿನಗಳೊಳಗೆ ಪ್ರತ್ಯೇಕ ಜಿಲ್ಲಾ ಮಟ್ಟದ ಸಮಿತಿಗಳನ್ನ ರಚಿಸಲಾಗುವುದು ಎಂದು ರಾಂಕಾ ತಿಳಿಸಿದ್ದಾರೆ.