ಮೈಸೂರು: ಟಿ. ನರಸೀಪುರದಲ್ಲಿ ಗಣೇಶೋತ್ಸವ ಸಂಬಂಧ ರಾಜ್ಯಾದ್ಯಂತ ಸುದ್ದಿಯಾಗಿರುವ ಸ್ಥಳೀಯ ಪೊಲೀಸ್ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಧನಂಜಯ್, ವಿಚಾರಣೆ ನೆಪದಲ್ಲಿ ಜನರನ್ನು ಠಾಣೆಗೆ ಕರೆದು ಹಲ್ಲೆ ನಡೆಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.
ಅವರ ಧಮ್ಕಿಗೆ ಸಂಬಂಧಿಸಿದ ವಿಡಿಯೋ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಭಾರೀ ಸದ್ದು ಮಾಡುತ್ತಿದ್ದು, ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಕೌಟುಂಬಿಕ ಕಲಹದ ವಿಚಾರವಾಗಿ ನಾಲ್ವರು ದಲಿತ ಯುವಕರನ್ನು ಠಾಣೆಗೆ ಕರೆಸಿದ್ದ ಧನಂಜಯ್ ಅವರ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದರು ಎಂಬ ಆರೋಪವಿದೆ.
ಯುವಕರ ಫೋಟೋಗಳು ಮತ್ತು ಹಲ್ಲೆಗೆ ಬಳಸಲಾದ ಮರದ ಬ್ಯಾಟ್ಗಳ ಚಿತ್ರಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿವೆ. ವಿಚಾರಣೆಗೆ ಬಂದವರನ್ನು ಥಳಿಸಲೆಂದೇ ಠಾಣೆಯಲ್ಲಿ ಕ್ರಿಕೆಟ್ ಬ್ಯಾಟ್, ವಿಕೆಟ್ಗಳು ಹಾಗೂ ಮರದ ತುಂಡುಗಳನ್ನು ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ.
ಇನ್ಸ್ಪೆಕ್ಟರ್ ಧನಂಜಯ್ ಅವರ ದೌರ್ಜನ್ಯದ ವಿರುದ್ಧ ನೊಂದ ಯುವಕರು ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರು ಸಲ್ಲಿಸಿದ್ದರು. ಅಲ್ಲದೆ ದಲಿತ ಸಂಘರ್ಷ ಸಮಿತಿ (ದಸಂಸ) ಸೇರಿದಂತೆ ಹಲವು ಪ್ರಗತಿಪರ ಸಂಘಟನೆಗಳು ಇನ್ಸ್ಪೆಕ್ಟರ್ ವಿರುದ್ಧ ಬೀದಿಗಿಳಿದು ತೀವ್ರ ಹೋರಾಟ ನಡೆಸಿದ್ದವು. ಆದರೂ ತಮ್ಮ ದರ್ಪ ಮತ್ತು ದಿಮಾಕಿನ ವರ್ತನೆಯನ್ನು ಮುಂದುವರಿಸಿದ್ದ ಧನಂಜಯ್ ವಿರುದ್ಧ ಇಲಾಖಾ ಮಟ್ಟದಲ್ಲಿ ಸೂಕ್ತ ಕಠಿಣ ಕ್ರಮವಾಗಿರಲಿಲ್ಲ ಎಂಬ ಆರೋಪ ಕೇಳಿಬಂದಿದೆ.
ಇನ್ಸ್ಪೆಕ್ಟರ್ ಧನಂಜಯ್ ಸುಮಾರು ಒಂದು ವರ್ಷದ ಹಿಂದೆಯೂ ಐದಾರು ಯುವಕರ ಮೇಲೆ ಇದೇ ರೀತಿಯ ಅಮಾನವೀಯ ಹಲ್ಲೆ ನಡೆಸಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದರು ಎಂಬ ಮಾತುಗಳು ಕೇಳಿಬರುತ್ತಿದೆ.