ಬೆಂಗಳೂರು: ಫೆಡರೇಶನ್ ಆಫ್ ಕರ್ನಾಟಕ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (FKCCI) ತನ್ನ ಸಂಸ್ಥಾಪನ ದಿನದಂದು ಕಿರ್ಲೋಸ್ಕರ್ ಸಿಸ್ಟಮ್ಸ್ನ ಅಧ್ಯಕ್ಷೆ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಗೀತಾಂಜಲಿ ವಿಕ್ರಮ್ ಕಿರ್ಲೋಸ್ಕರ್ ಅವರಿಗೆ 'ಸರ್ ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ'ಯನ್ನು ಪ್ರದಾನ ಮಾಡಿತು. 1999ರಲ್ಲಿ ಈ ಪ್ರಶಸ್ತಿಯನ್ನು ಆರಂಭಿಸಿದ್ದು ಕಿರಣ್ ಮಜುಂದಾರ್-ಶಾ ನಂತರ ಪ್ರಶಸ್ತಿಗೆ ಆಯ್ಕೆಯಾದ ಎರಡನೇ ಮಹಿಳೆಯಾಗಿದ್ದಾರೆ.
ಈ ವರ್ಷ ಮಹಿಳಾ ಉದ್ಯಮಿಯೊಬ್ಬರು ಪ್ರಶಸ್ತಿಯನ್ನು ಗೆದ್ದಿರುವುದು ನನಗೆ ಸಂತೋಷ ತಂದಿದೆ. FKCCIಯಲ್ಲಿ ಉಮಾ ರೆಡ್ಡಿ ಅವರು ಮೊದಲ ಮಹಿಳಾ ಅಧ್ಯಕ್ಷರಾಗಿದ್ದು ಈ ಬದಲಾವಣೆಯು ಸರಿಯಾದ ದಿಕ್ಕಿನಲ್ಲಿ ಇಟ್ಟ ಹೆಜ್ಜೆಯಾಗಿದೆ. ಉದ್ಯೋಗ ಕ್ಷೇತ್ರದಲ್ಲಿ ಲಿಂಗ ಸಮಾನತೆ ಸಾಧಿಸಿದರೆ, ಭಾರತದ ಜಿಡಿಪಿ (GDP) ಶೇ. 20ರಷ್ಟು ಹೆಚ್ಚಾಗುತ್ತದೆ ಎಂದು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹೇಳಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರ ಮಾರ್ಗದರ್ಶನದಲ್ಲಿ, ನಾವು ರಫ್ತು ಸಾಮರ್ಥ್ಯವನ್ನು 20,000 ದಶಲಕ್ಷ ಅಮೆರಿಕನ್ ಡಾಲರ್ಗೆ ಹೆಚ್ಚಿಸಲು ಕಾರ್ಯಯೋಜನೆಯನ್ನು (roadmap) ಸಿದ್ಧಪಡಿಸಿದ್ದೇವೆ. ಎಂಜಿನಿಯರಿಂಗ್ ಸರಕುಗಳಲ್ಲಿ ಅತಿ ಹೆಚ್ಚಿನ ಸಾಮರ್ಥ್ಯವಿದ್ದು, ನಂತರದ ಸ್ಥಾನಗಳಲ್ಲಿ ಎಲೆಕ್ಟ್ರಾನಿಕ್ಸ್, ಸೆಮಿಕಂಡಕ್ಟರ್ಗಳು, ಔಷಧೀಯ ಉತ್ಪನ್ನಗಳು ಮತ್ತು ಇತರ ಕ್ಷೇತ್ರಗಳಿವೆ. ರಾಜ್ಯದಾದ್ಯಂತ ಎಂಜಿನಿಯರಿಂಗ್ ಪಠ್ಯಕ್ರಮವು ಕೈಗಾರಿಕಾ ವಲಯದ ಬೇಡಿಕೆಗಳಿಗೆ ಅನುಗುಣವಾಗಿರುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರವು ಸಕ್ರಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಮುಖ್ಯ ಕಾರ್ಯದರ್ಶಿಗಳು ಹೇಳಿದರು.
ರಾಜ್ಯದಲ್ಲಿ ಕೈಗಾರಿಕಾ ಅಡಿಪಾಯವನ್ನು ಎಂ. ವಿಶ್ವೇಶ್ವರಯ್ಯ ಹಾಕಿಕೊಟ್ಟರು. FKCCI ಅಧ್ಯಕ್ಷೆಯಾಗಿ ನಾನು ಒಂದು ವರ್ಷ ಪೂರೈಸುತ್ತಿರುವ ಈ ಸಂದರ್ಭದಲ್ಲಿ, ನಾವು ಇನ್ನೂ ಸಾಕಷ್ಟು ಕೆಲಸಗಳನ್ನು ಮಾಡಬೇಕಿದೆ ಎಂಬುದು ಗೊತ್ತಿದೆ ಎಂದು FKCCI ಅಧ್ಯಕ್ಷೆ ಉಮಾ ರೆಡ್ಡಿ ಹೇಳಿದರು.
ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿಯನ್ನು ಎಫ್ಕೆಸಿಸಿಐ 1999ರಲ್ಲಿ ಸ್ಥಾಪಿಸಿದ್ದು, ಕೈಗಾರಿಕೆ, ವ್ಯಾಪಾರ ಮತ್ತು ಸಮಾಜದಲ್ಲಿ ವಿಶಿಷ್ಟ ಸಾಧನೆ, ನಾಯಕತ್ವ ಮತ್ತು ಮಹತ್ವದ ಕೊಡುಗೆ ನೀಡಿದ ಗಣ್ಯರನ್ನು ಗೌರವಿಸುವ ಉದ್ದೇಶ ಹೊಂದಿದೆ.