ಸಚಿವ ಸಂಪುಟ ಸಭೆ  
ರಾಜ್ಯ

ರಾಜ್ಯದ 32,611 ಕೋಟಿ ರೂ. ಯೋಜನೆಗಳಿಗೆ ಗ್ರೀನ್‌ ಸಿಗ್ನಲ್‌: ಮಂಗಳೂರು ಸಂಪುಟ ಸಭೆಯಲ್ಲಿ ಸರ್ಕಾರ ಮಹತ್ವದ ಘೋಷಣೆ..!

ರಾಜ್ಯಾದ್ಯಂತ 15,000 ಕಿ.ಮೀ. ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಯೋಜನೆಯಡಿ ರೂ.10,000 ಕೋಟಿ ಮೀಸಲಿಡಲಾಗಿದೆ. ಗ್ರಾಮಗಳಲ್ಲಿ ಸಿಮೆಂಟ್‌ ಕಾಂಕ್ರೀಟ್‌ ರಸ್ತೆ ಹಾಗೂ ಚರಂಡಿ ವ್ಯವಸ್ಥೆ ನಿರ್ಮಿಸಲು ಮತ್ತೊಂದು ರೂ.6,000 ಕೋಟಿ ಮಂಜೂರು ಮಾಡಲಾಗಿದೆ.

ಮಂಗಳೂರು: ಗ್ರಾಮೀಣ ಮೂಲಸೌಕರ್ಯ, ರಸ್ತೆ, ಡಿಜಿಟಲ್ ಮೂಲಸೌಕರ್ಯ ಹಾಗೂ ಸಾಮಾಜಿಕ ಕಲ್ಯಾಣ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಆದ್ಯತೆ ನೀಡಿರುವ ರಾಜ್ಯ ಸರ್ಕಾರ ಶುಕ್ರವಾರ ಒಟ್ಟು 32,611 ಕೋಟಿ ರೂ. ಮೊತ್ತದ ಯೋಜನೆಗಳಿಗೆ ಅನುಮೋದನೆ ನೀಡಿದೆ.

ಇದೇ ವೇಳೆ ಅರಣ್ಯ ಇಲಾಖೆಯ ‘ಸಿ’ ಮತ್ತು ‘ಡಿ’ ದರ್ಜೆಯ ಹುದ್ದೆಗಳಲ್ಲಿ ಪರಿಶಿಷ್ಟ ಪಂಗಡ ಸಮುದಾಯಗಳಿಗೆ ಶೇ.30ರಷ್ಟು ಮೀಸಲಾತಿ ಕಲ್ಪಿಸುವ ಮಹತ್ವದ ನಿರ್ಧಾರಕ್ಕೂ ಸಂಪುಟ ಒಪ್ಪಿಗೆ ನೀಡಿದೆ.

ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು, ರಾಜ್ಯಾದ್ಯಂತ 15,000 ಕಿ.ಮೀ. ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಯೋಜನೆಯಡಿ ರೂ.10,000 ಕೋಟಿ ಮೀಸಲಿಡಲಾಗಿದೆ. ಗ್ರಾಮಗಳಲ್ಲಿ ಸಿಮೆಂಟ್‌ ಕಾಂಕ್ರೀಟ್‌ ರಸ್ತೆ ಹಾಗೂ ಚರಂಡಿ ವ್ಯವಸ್ಥೆ ನಿರ್ಮಿಸಲು ಮತ್ತೊಂದು ರೂ.6,000 ಕೋಟಿ ಮಂಜೂರು ಮಾಡಲಾಗಿದೆ ಎಂದು ಹೇಳಿದರು.

ಅರಣ್ಯ ಇಲಾಖೆಯ ‘ಸಿ’ ಮತ್ತು ‘ಡಿ’ ದರ್ಜೆಯ ಹುದ್ದೆಗಳಲ್ಲಿ ಸೋಲಿಗ, ಜೇನು ಕುರುಬ, ಮಲೆಕುಡಿಯ, ಎರವ, ಸಿದ್ದಿ, ಬೆಟ್ಟ ಕುರುಬ ಮತ್ತು ಕೊರಗ ಸೇರಿದಂತೆ 13 ಪರಿಶಿಷ್ಟ ಪಂಗಡ ಸಮುದಾಯಗಳಿಗೆ ಶೇ.30ರಷ್ಟು ಮೀಸಲಾತಿ ಕಲ್ಪಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.

ರಾಜ್ಯದ ಡಿಜಿಟಲ್ ಮೂಲಸೌಕರ್ಯವನ್ನು ಬಲಪಡಿಸುವ ಉದ್ದೇಶದಿಂದ ರೂ,1,300 ಕೋಟಿ ಹೂಡಿಕೆಯನ್ನು ನಿರೀಕ್ಷಿಸಿರುವ ಕರ್ನಾಟಕ ಸುಸ್ಥಿರ ದತ್ತಾಂಶ ಕೇಂದ್ರ ನೀತಿ-2026ಕ್ಕೆ ಸಂಪುಟ ತಾತ್ವಿಕ ಅನುಮೋದನೆ ನೀಡಿದೆ ಎಂದು ತಿಳಿಸಿದರು.

ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ಮಾತನಾಡಿ, ಸುರತ್ಕಲ್‌ ಸಮೀಪದ ಬಡಗ-ಎಕ್ಕೂರಿನಲ್ಲಿ ತಿರುಪತಿ ವೆಂಕಟೇಶ್ವರ ದೇವಸ್ಥಾನ ಹಾಗೂ ಕಲ್ಯಾಣ ಮಂಟಪ ನಿರ್ಮಾಣಕ್ಕೆ 10 ಎಕರೆ ಜಮೀನು ಮಂಜೂರು ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದರು.

ಮುಂಬರುವ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳಿಗಾಗಿ 72,000 ಮತಪೆಟ್ಟಿಗೆಗಳನ್ನು ಖರೀದಿಸಲು ರೂ.151 ಕೋಟಿ ಮಂಜೂರು ಮಾಡಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಮಾಹಿತಿ ನೀಡಿದರು.

ಇದೇ ವೇಳೆ ರಾಜ್ಯದಲ್ಲಿ 700 ಹೊಸ ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು ಆರಂಭಿಸುವುದಾಗಿ ಸರ್ಕಾರ ಘೋಷಿಸಿದೆ.

ಇದರಲ್ಲಿ 300 ಶಾಲೆಗಳಿಗೆ ಗಣಿಗಾರಿಕೆ ಆದಾಯದ ಮೂಲಕ ಹಾಗೂ 200 ಶಾಲೆಗಳಿಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಮೂಲಕ ಅನುದಾನ ಒದಗಿಸಲಾಗುತ್ತದೆ. ಹೊಸದಾಗಿ ಸ್ಥಾಪಿಸಲಾಗಿರುವ ಗ್ರಾಮೀಣ ಗ್ರಂಥಾಲಯಗಳಿಗೆ ಕಂಪ್ಯೂಟರ್‌ಗಳು ಮತ್ತು ಯುಪಿಎಸ್‌ ವ್ಯವಸ್ಥೆಗಳನ್ನು ಒದಗಿಸಲು ರೂ.57.15 ಕೋಟಿ ಮಂಜೂರು ಮಾಡಲಾಗಿದೆ.

ಇದಕ್ಕೂ ಮುನ್ನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹಾಗೂ ಸಚಿವ ಸಂಪುಟದ ಸಹೋದ್ಯೋಗಿಗಳು ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.

ಬಳಿಕ ಸರ್ಕ್ಯೂಟ್‌ ಹೌಸ್‌ನಿಂದ ಪ್ರಜಾ ಸೌಧದವರೆಗೆ ತೆರೆದ ಬಸ್‌ನಲ್ಲಿ ಪ್ರಯಾಣಿಸಿದರು. ಈ ವೇಳೆ ಸಾರ್ವಜನಿಕರು ಹರ್ಷೋದ್ಗಾರಗಳೊಂದಿಗೆ ನಾಯಕರನ್ನು ಸ್ವಾಗತಿಸಿದರು.

ಬಳಿಕ ಮಾತನಾಡಿದ ಮುಖ್ಯಮಂತ್ರಿಗಳು ರಾಜ್ಯದ ಎಲ್ಲ ಪ್ರದೇಶಗಳಲ್ಲೂ ಸಮತೋಲಿತ ಅಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ರಾಜ್ಯದ ಇತರ ಭಾಗಗಳಲ್ಲೂ ಇದೇ ರೀತಿಯ ಸಚಿವ ಸಂಪುಟ ಸಭೆಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾಗೆ ಟ್ರಂಪ್‌ ಬಿಗ್ ಶಾಕ್: ಶೇ.100ರಷ್ಟು ಸುಂಕಕ್ಕೆ ಅಸ್ತು, ಭಾರತ-ಚೀನಾ ಮೇಲೂ ನಿರ್ಬಂಧದ ತೂಗುಗತ್ತಿ..!

ಮಂಗಳೂರಿನಲ್ಲಿ ಡಿಕೆಶಿ ಸಂಪುಟ ಸಭೆ, ತುಮಕೂರಿನಲ್ಲಿ ಸಿದ್ದರಾಮಯ್ಯ ಡಿನ್ನರ್ ಮೀಟಿಂಗ್: ಕೈ ಪಾಳಯದಲ್ಲಿ ಶುರುವಾಯ್ತಾ ಹೊಸ ಆಂತರಿಕ ತಂತ್ರಗಾರಿಕೆ..?

ಸರ್ಕಾರದ ಎಲ್ಲ ಘೋಷಣೆಗಳೂ ಕಾಗದದ ಮೇಲೆಯೇ ಉಳಿಯಲಿವೆ: ಆರ್. ಅಶೋಕ್

ಇ-ಸ್ವತ್ತು ಬಾಕಿ ಅರ್ಜಿಗಳ ವಿಲೇವಾರಿಗೆ ಸರ್ಕಾರ ಹೊಸ ಅಭಿಯಾನ..!

ಜನರ ಭಾವನೆ ಮೇಲೆ ರಾಜಕಾರಣ ಮಾಡಲ್ಲ: ಸುಮ್ಮನೆ ಘೋಷಣೆ ಮಾಡಿ ಮರೆಯುವ ಜಾಯಮಾನ ನಮ್ಮದಲ್ಲ- ಸಿಎಂ ಡಿಕೆ ಶಿವಕುಮಾರ್!