ರಾಯಚೂರು: ರಾತ್ರಿ ವೇಳೆ ಹಾಕಿದ ಡಿಜೆ ಸೌಂಡಿಗೆ ಮಗು ಅಸ್ವಸ್ಥಗೊಂಡಿದೆ ಎಂದು ಆರೋಪಿಸಿ ಪೋಷಕರು ಜಿಲ್ಲಾಧಿಕಾರಿ ನಿವಾಸದ ಎದುರು ಪ್ರತಿಭಟನೆ ನಡೆಸಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ರಾಯಚೂರಿನ ಗೋಲ್ ಮಾರ್ಕೆಟ್ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು, ಬಡಾವಣೆಯ ನಿವಾಸಿ ಹಾಗೂ ಬಿಎಸ್ಪಿ ಜಿಲ್ಲಾಧ್ಯಕ್ಷ ಜೈಭೀಮ್ ವಲ್ಲಭ ತನ್ನ ಪುತ್ರಿಯನ್ನು ಎತ್ತಿಕೊಂಡು ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಮುಂಜಾನೆ ಎರಡು ಗಂಟೆ ಸುಮಾರಿಗೆ ಪ್ರತಿಭಟನೆ ನಡೆಸಿದ ಘಟನೆ ವರದಿಯಾಗಿದೆ.
ರಾತ್ರಿ ವೇಳೆ ಡಿ.ಜೆ ಬ್ಯಾನ್ ಅಂತ ಪೊಲಿಸರು ಆದೇಶಿಸಿದ್ದರೂ ಯಾರು ಪಾಲನೆ ಮಾಡುತ್ತಿಲ್ಲ. ಇದರಿಂದ ಚಿಕ್ಕ ಮಕ್ಕಳು, ವಯೋ ವೃದ್ಧರ ಆರೋಗ್ಯಕ್ಕೆ ಸಮಸ್ಯೆಯಾಗುತ್ತಿದೆ. ಕೂಡಲೇ ಜಿಲ್ಲಾಧಿಕಾರಿ ಸ್ಥಳಕ್ಕೆ ಬರಬೇಕು ಎಂದು ಒತ್ತಾಯಿಸಿದರು. ಈ ವೇಳೆ ಪೊಲೀಸರು ತಡೆದು ಬೆಳಗ್ಗೆ ಮಾತನಾಡುವಂತೆ ಸೂಚಿಸಿದರು.
ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜೈಭೀಮ್ ವಲ್ಲಭ, ನಮ್ಮ ಮಕ್ಕಳ ಆರೋಗ್ಯಕ್ಕಿಂತ ಜಿಲ್ಲಾಧಿಕಾರಿಗೆ ನಿದ್ರೆಯೇ ಮುಖ್ಯವಾಗಿದೆಯೇ? ಹಾಗಾದರೆ ನಾನು ಬೆಳಗ್ಗಿನವರೆಗೆ ಇಲ್ಲಿಯೇ ಕೂರುವೆ ಎಂದು ಪಟ್ಟು ಹಿಡಿದರು. ಬಳಿಕ ಪೊಲೀಸರು ಮಗುವನ್ನು ಆಸ್ಪತ್ರೆಗೆ ಕರೆದೊಯ್ದು ಬೆಳಗ್ಗೆ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿಸುತ್ತೇವೆ ಎಂದು ಸಮಾಧಾನ ಪಡಿಸಿದರು.