ಜೀವನಶೈಲಿ

ಖಿನ್ನತೆಗೊಳಗಾದವರ ಆರೋಗ್ಯ ಸುಧಾರಣೆಗೆ ವ್ಯಾಯಾಮ ಮುಖ್ಯ

Srinivas Rao BV
ನ್ಯೂಯಾರ್ಕ್: ಖಿನ್ನತೆಗೊಳಗಾದ ವ್ಯಕ್ತಿಗಳ ಆರೋಗ್ಯ ಸುಧಾರಣೆಗೆ ಪ್ರತಿ ನಿತ್ಯದ ವ್ಯಾಯಾಮವೂ ಔಷಧಗಳಷ್ಟೇ ಮುಖ್ಯವಾದದ್ದು ಎನ್ನುತ್ತಿದೆ ಅಮೆರಿಕದ ವಿಶ್ವವಿದ್ಯಾನಿಲಯದ ಅಧ್ಯಯನ ವರದಿ. 
ಮಧ್ಯದ ವಯಸ್ಸಿನಲ್ಲಿ ದೈಹಿಕ ಸದೃಢತೆ ಖಿನ್ನತೆಯಿಂದ ಹೃದಯದ ಮೇಲೆ ಉಂಟಾಗುವ ಪರಿಣಾಮಗಳನ್ನು ತಡೆಯುತ್ತದೆ ಎಂದು ಅಮೆರಿಕದ ಟೆಕ್ಸಸ್ ನ ವಿಶ್ವವಿದ್ಯಾನಿಲಯದ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಖಿನ್ನತೆಯಿಂದ ಬಳಲುತ್ತಿರುವವರಿಗೆ  ಹತಾಶೆ ಮನೋಭಾವ ಕಾಡುತ್ತಿರುತ್ತದೆ, ಈ ನಡುವೆ ವ್ಯಾಯಾಮ ಮಾಡುವುದಕ್ಕೆಲ್ಲಿಂದ ಉತ್ಸಾಹ ಬರಬೇಕು ಎಂಬ ಪ್ರಶ್ನೆಗೂ ಸಂಶೋಧಕರು ಉತ್ತರ ನೀಡಿದ್ದು, ಆರೋಗ್ಯಕರ ವ್ಯಾಯಾಮ ಮಾಡಲು ಖಿನ್ನತೆಗೊಳಗಾದವರಿಗೆ ಉತ್ತೇಜನ ಸಿಗುವುದು ಕಷ್ಟವಾದರೂ ಮಾಡಬಹುದು ಎಂದಿದ್ದಾರೆ. 
ಹೆಚ್ಚಿನ ಪರಿಶ್ರಮ ಹಾಗೂ ಎದುರಾಗುವ ಅಡೆತಡೆಗಳನ್ನು ಮೀರಿ ವ್ಯಾಯಾಮ ಮಾಡುವುದರಿಂದ ಖಿನ್ನತೆಗೊಳಗಾದವರ ಆರೋಗ್ಯ ಮತ್ತಷ್ಟು ಸುಧಾರಿಸುತ್ತದೆ ಎನ್ನುತ್ತಾರೆ ಸಂಶೋಧನಾ ತಂಡದ ಭಾಗವಾಗಿದ್ದ ಮಧುಕರ್ ತ್ರಿವೇದಿ. ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್ ನಲ್ಲಿ ಪ್ರಕಟವಾಗಿರುವ ಸಂಶೋಧನಾ ವರದಿಯ ಪ್ರಕಾರ ಖಿನ್ನತೆಯಿಂದ ಮಧುಮೇಹ, ಕಿಡ್ನಿ ಸಮಸ್ಯೆಯಂತಹ ಸಮಸ್ಯೆಗಳೂ ಉಂಟಾಗುತ್ತವೆ. ಈ ರೀತಿಯ ಸಮಸ್ಯೆಗಳಿಗೆ ಖಿನ್ನತೆ ದೂರ ಮಾಡಲು ನೀಡುವ ಔಷಧಗಳಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಖಿನ್ನತೆಯಿಂದ ಉಂಟಾಗಿರುವ ಮಧುಮೇಹ, ಕಿಡ್ನಿ ರೀತಿಯ ಸಮಸ್ಯೆಗಳಿಗೆ ವ್ಯಾಯಾಮವೇ ಸರಿಯಾದ ಮದ್ದು ಎಂದು ತ್ರಿವೇದಿ ಹೇಳಿದ್ದಾರೆ. 
ಕಾಲೇಜು ವಯಸ್ಸಿನ ಯುವಕರು, ಅಥವಾ ಈಗಷ್ಟೇ ಕೆಲಸಕ್ಕೆ ಸೇರಿರುವ ಯುವಕರಿಗೆ ಅಧ್ಯಯನ ವರದಿಯ ಅಂಶಗಳು ಹೆಚ್ಚು ಪ್ರಸ್ತುತವಾಗಿದೆ. ಸಮಾನ್ಯವಾಗಿ ಈ ವಯಸ್ಸಿನಲ್ಲಿ ದೈಹಿಕ ಚಟುವಟಿಕೆ ಕಡಿಮೆಯಾಗುತ್ತದೆ. ಆದ್ದರಿಂದ  ಈಗಷ್ಟೇ ಕೆಲಸಕ್ಕೆ ಸೇರಿರುವ ಯುವಕರಿಗೆ ಅಧ್ಯಯನ ವರದಿಯ ಅಂಶಗಳು ಹೆಚ್ಚು ಪ್ರಸ್ತುತ ಎನ್ನುತ್ತಾರೆ ಸಂಶೋಧಕರು. 
SCROLL FOR NEXT