ಜಾರ್ಖಂಡ್: ನಿನ್ನೆ ರಾಂಚಿ ಜೈಲಿನ 15 ವಿಚಾರಣಾಧೀನ ಕೈದಿಗಳು ತಪ್ಪಿಸಿಕೊಳ್ಳುವ ವೇಳೆ ಇಬ್ಬರು ಕೈದಿಗಳು ಪೊಲೀಸರ ಗುಂಡಿಗೆ ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ 14 ಮಂದಿ ಜೈಲು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ನಿನ್ನೆ ರಾಂಚಿ ಛಾಯ್ಬಾಸಾ ಜೈಲಿನ ಕುಖ್ಯಾತ ನಕ್ಸಲರು ಸೇರಿದಂತೆ 15 ಮಂದಿ ಪರಾರಿಯಾಗುವಲ್ಲಿ ಯಶಸ್ವಿಯಾದರು. ಈ ವೇಳೆ ಕೈದಿಗಳು ಪರಾರಿಯಾಗುವುದನ್ನು ತಡೆಯಲು ಯತ್ನಿಸಿದ ಪೊಲೀಸರು ಅವರನ್ನು ಗುರಿಯನ್ನಾಗಿಸಿ ಗುಂಡುಹಾರಿಸಿದ್ದಾರೆ. ಈ ವೇಳೆ ಇಬ್ಬರು ಕೈದಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದರು.
ತಪ್ಪಿಸಿಕೊಂಡವರ ಬಂಧನಕ್ಕಾಗಿ ಜಿಲ್ಲಾದ್ಯಂತ ಕಟ್ಟೆಚ್ಚರ ಘೋಷಿಸಲಾಗಿದೆ. ಮೃತ ನಕ್ಸಲರನ್ನು ತಿಪಾದಾಸ್ ಹಾಗೂ ರಾಮ್ವಿಲಾಸ್ ತಾತಿ ಎಂದು ಗುರುತಿಸಲಾಗಿದೆ.
ನಿನ್ನೆ 40ಕ್ಕೂ ಹೆಚ್ಚು ಮಂದಿ ಕೈದಿಗಳನ್ನು ವಿಚಾರಣೆಗಾಗಿ ಪೊಲೀಸ್ ವ್ಯಾನ್ವೊಂದರಲ್ಲಿ ಸ್ಥಳೀಯ ನ್ಯಾಯಾಲಯಕ್ಕೆ ಕರೆದೊಯ್ಯಲಾಗಿತ್ತು. ವಿಚಾರಣೆ ಬಳಿಕ ಮರಳಿ ಈ ಕೈದಿಗಳನ್ನು ಜೈಲಿನ ಆವರಣದಲ್ಲಿ ಇಳಿಸುತ್ತಿದ್ದಾಗ, ಇವರುಗಳು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಈ ವೇಳೆ ಐವರು ಕೈದಿಗಳಿಗೆ ಪೊಲೀಸರು ಗುಂಡಿಟ್ಟಿದ್ದಾರೆ. ಈ ವೇಳೆ ಇಬ್ಬರು ನಕ್ಸಲರು ಸ್ಥಳದಲ್ಲೇ ಸಾವನ್ನಪ್ಪಿದರು.