ದೇಶ

ಮತ್ತೆ ವಿದ್ಯುತ್ ಶಾಕ್?

ಬೆಂಗಳೂರು: ವಿದ್ಯುತ್ ಗ್ರಾಹಕರ ಮೇಲೆ ಮಾರ್ಚ್ 31ರ ನಂತರ ಪ್ರತಿ ಯುನಿಟ್‌ಗೆ 80 ಪೈಸೆ ಹೆಚ್ಚಿನ ಹೊರೆ ಹಾಕಲು ರಾಜ್ಯದ 5 ವಿದ್ಯುತ್ ವಿತರಣಾ ಕಂಪನಿಗಳು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಪ್ರಸ್ತಾವ ಸಲ್ಲಿಸಿವೆ.

ಎಲ್ಲ ವರ್ಗಕ್ಕೆ ವಿದ್ಯುತ್ ದರ ಹೆಚ್ಚಿಸಲು ಕಂಪನಿಗಳು ಅರ್ಜಿ ಸಲ್ಲಿಸಿವೆ. ಅದರಲ್ಲಿ ರೈತರ ಪಂಪ್‌ಸೆಟ್ ಸಹ ಸೇರಿದ್ದು, ಅದರ ಹಣವನ್ನು ಸರ್ಕಾರ ಪಾವತಿಸಲಿದೆ. 2015-16ನೇ ಸಾಲಿಗೆ 63,437 ದಶಲಕ್ಷ ಯುನಿಟ್ ವಿದ್ಯುತ್ ಬೇಕು. ಈಗ ವಿತರಣೆಯಾಗುತ್ತಿರುವುದು 52,056 ದಶಲಕ್ಷ ಯುನಿಟ್.

ಆದಾಯ ಮತ್ತು ವ್ಯಯದ ಅಂತರ 4,165.5 ಕೋಟಿಯಾಗಿದ್ದು, ಈ ಅಂತರ ಭರಿಸಲು ಯುನಿಟ್‌ಗೆ 80 ಪೈಸೆ ಹೆಚ್ಚಿಸಬೇಕೆಂದು ಕಂಪನಿಗಳು ಆಗ್ರಹಿಸಿವೆ.

ಕಲಬುರಗಿ ಕಂಪನಿ 2014ನೇ ಸಾಲಿನ 308.78 ಕೋಟಿ ಸರ್ಕಾರದಿಂದ ಸಹಾಯಧನ ತುಂಬಿಸಿ ಕೊಡಬೇಕೆಂದು ಕೇಳಿದೆ. ಇದಲ್ಲದೆ ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ 255.99 ಕೋಟಿ ಪ್ರಸರಣ ವೆಚ್ಚ ಭರಿಸಿ ಕೊಡಬೇಕೆಂದು ಕೋರಿದೆ. ಇದನ್ನು ಸಾರ್ವಜನಿಕ ವಿಚಾರಣೆ ನಡೆಸಿ ಕೆಇಆರ್‌ಸಿ ದರ ನಿಗದಿ ಪಡಿಸಬೇಕು.

ಹೊಸ ದರ ಜಾರಿಗೆ ತರಲು ಮಾರ್ಚ್ 31ರೊಳಗೆ ತೀರ್ಮಾನವಾಗಬೇಕು. 5 ಕಂಪನಿಗಳಲ್ಲಿ ಬೆಸ್ಕಾಂ 2,62.66 ಕೋಟಿ ಕೊರತೆ ಅನುಭವಿಸುತ್ತಿದೆ. ಮೇ ತಿಂಗಳಿನಲ್ಲಿ 32 ಪೈಸೆ ವಿದ್ಯುತ್ ದರ ಹೆಚ್ಚಿಸಲಾಗಿತ್ತು. ಸರ್ಕಾರ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಮತ್ತು ಪಂಪ್‌ಸೆಟ್ ಸಹಾಯಧನ ನೀಡಲಿದೆ. ಉಳಿದ ಎಲ್ಲ ಗ್ರಾಹಕರಿಗೆ ಈ ಹೊಸ ದರ ಅನ್ವಯವಾಗುತ್ತದೆ.

SCROLL FOR NEXT