ಬೆಂಗಳೂರು: ಗಾಂಧಿನಗರ ಶಾಪಿಂಗ್ ಮಳಿಗೆಯಲ್ಲಿ ಕಳ್ಳತನ ಮಾಡಿದ ಆರೋಪದ ಮೇಲೆ ಬಂಧಿತರಾಗಿದ್ದ ಬಿಬಿಎಂಪಿ ಗಿರಿನಗರ ವಾರ್ಡ್ ಸದಸ್ಯೆ ಎಚ್.ಎಸ್.ಲಲಿತಾ ಅವರು ಅತಿಯಾದ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ತೀವ್ರವಾಗಿ ಅಸ್ವಸ್ಥಗೊಂಡಿರುವ ಲಲಿತಾ ಅವರನ್ನು ಬನ್ನೇರುಘಟ್ಟ ರಸ್ತೆಯ ಸಾಗರ್ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಲಲಿತಾ ಹಲವು ದಿನಗಳ ಹಿಂದೆಯೇ ಮಾತ್ರೆ ಸೇವಿಸಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಮಾಧ್ಯಮಗಳಿಂದಲೇ ನಮಗೂ ಸುದ್ದಿ ತಿಳಿದಿದೆ. ಕುಟುಂಬದಿಂದ ಯಾವುದೇ ದೂರು ಬಂದಿಲ್ಲ. ವಿಚಾರಣ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ಮೇಯರ್ ಶಾಂತಕುಮಾರಿ, ಶಾಸಕ ರವಿ ಸುಬ್ರಮಣ್ಯ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬ ಸದಸ್ಯರ ಬಳಿ ಲಲಿತಾ ಆರೋಗ್ಯ ವಿಚಾರಿಸಿದರು.
ಕೆಲವು ದಿನಗಳ ಹಿಂದೆ ಮನೆಯಲ್ಲಿ ಲಲಿತಾ ಅವರು ಪ್ರಜ್ಞೆ ತಪ್ಪಿ ಅಸ್ವಸ್ಥರಾಗಿ ಮಲಗಿದ್ದರು. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಈ ನಿರ್ಧಾರಕ್ಕೆ ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ ಎಂದು ಗಿರಿನಗರ ಪೊಲೀಸರು ತಿಳಿಸಿದ್ದಾರೆ.
ಏ.22ರಂದು ಗ್ರಾಹಕರಂತೆ ಗಾಂಧಿನಗರ ಸುಖ ಸಾಗರ್ ಮಾಲ್ನಲ್ಲಿರುವ ಅಶೋಕ ಅಪರೆಲ್ಸ್ಗೆ ಬಂದಿದ್ದ ಲಲಿತಾ ಅವರು ಡ್ರೆಸ್ ಕಳ್ಳತನ ಮಾಡಿದ್ದರು. ಇದನ್ನು ಗಮನಿಸಿದ ಮಳಿಗೆ ಮಾಲೀಕರು ಉಪ್ಪಾರಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಲಲಿತಾ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದರು. ಐಪಿಸಿ ಕಲಂ 380(ಕಳ್ಳತನ) ಅನ್ವಯ ಪ್ರಕರಣ ದಾಖಲಿಸಿಕೊಂಡು ಜೈಲಿಗೆ ಕಳುಹಿಸಿದ್ದರು. ಬಳಿಕ ಲಲಿತಾಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು.
ಖಿನ್ನತೆಗೊಳಗಾಗಿದ್ದರು: ಸ್ವಂತ ಉದ್ದೇಶ, ಆರ್ಥಿಕ ಲಾಭಕ್ಕಾಗಿ ಅಲ್ಲದೇ ಸುಖಾಸುಮ್ಮನೆ ಕಳ್ಳತನ ಮಾಡಬೇಕೆನಿಸುವ ಕ್ಲೆಪ್ಟೋಮೆನಿಯಾ ಕಾಯಿಲೆಯಿಂದ ಲಲಿತಾ ಬಳಲುತ್ತಿದ್ದರು ಎನ್ನಲಾಗಿದೆ. ಹೀಗಾಗಿ ಡ್ರೆಸ್ ಕೊಳ್ಳುವ ನೆಪದಲ್ಲಿ ಮಳಿಗೆಗೆ ಹೋಗಿ ಕಳವು ಮಾಡುತ್ತಿದ್ದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದರು. ಜೈಲಿನಿಂದ ಬಂದ ಬಳಿಕ ತೀವ್ರ ಖಿನ್ನರಾಗಿದ್ದ ಲಲಿತಾ ಅವರು, ಹೆಚ್ಚಾಗಿ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದರು.
ಘಟನೆಯಿಂದ ಅವಮಾನವಾಗಿದೆ ಎಂದು ತೀವ್ರ ಮನನೊಂದಿದ್ದರು, ಅನಾರೋಗ್ಯ ಕಾಡುತ್ತಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮಾತ್ರೆ ಸೇವಿಸುತ್ತಿದ್ದರು. ಆದರೆ, ಇತ್ತೀಚಿಗೆ ಹೆಚ್ಚಿದ ಖಿನ್ನತೆಯಿಂದ ಕುಟುಂಬ ಸದಸ್ಯರ ಕಣ್ತಪ್ಪಿಸಿ ಅತಿಯಾದ ಮಾತ್ರೆ ಸೇವಿಸಿರಬಹುದು ಎಂದು ಶಂಕಿಸಲಾಗಿದೆ.
ಚಿನ್ನ, ಬೆಳ್ಳಿ ಕಳ್ಳತನ
ಬನಶಂಕರಿ 3ನೇ ಹಂತದಲ್ಲಿ ಹಾಪ್ಕಾಮ್ಸ್ ವ್ಯವಸ್ಥಾಪಕ ದೇವರಾಜ್ ಎಂಬುವರ ಮನೆಗೆ
ನುಗ್ಗಿದ ಕಳ್ಳರು ಅರ್ಧ ಕೆಜೆಗೂ ಅಧಿಕ ಚಿನ್ನಾಭರಣ ಹಾಗೂ ಕೆಜಿ ಗಟ್ಟಲೆ ಬೆಳ್ಳಿ ವಸ್ತುಗಳನ್ನು ಕದ್ದೊಯ್ದಿದ್ದಾರೆ.
ದೇವರಾಜ್ ಕುಟುಂಬ ಸದಸ್ಯರು ಸ್ವಂತ ಊರು ಚನ್ನಪಟ್ಟಣದ ಬೊಮ್ಮನಾಯಕನಹಳ್ಳಿ ಯಲ್ಲಿ ವಿಶೇಷ ಪೂಜೆಗೆಂದು ಸೋಮವಾರ ಸಂಜೆ ತೆರಳಿದ್ದರು. ಈ ವೇಳೆ ಮಹಡಿ ಮೂಲಕ ಮನೆಗೆ ನುಗ್ಗಿದ ಕಳ್ಳರು ಸುಮಾರು 600 ಗ್ರಾಂ ಚಿನ್ನಾಭರಣ 40.ಕೆ.ಜಿ ಬೆಳ್ಳಿ, 1 ಲಕ್ಷ ನಗದು, ಬೆಲೆಬಾಳುವ ಕೈ ಗಡಿಯಾರ ಕದ್ದೊಯ್ದಿದ್ದಾರೆ.
ದೇವರಾಜ್ ಅವರ ಪುತ್ರ ಹೇಮಂತ್ ಅವರು ರಾತ್ರಿ 12.30ರ ಸುಮಾರಿಗೆ ಮನೆಗೆ ವಾಪಸಾಗಿ ಬಾಗಿಲು ತೆಗೆದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಮನೆಯಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದು, ಬೀರುಗಳನ್ನು ಕಳ್ಳರು ಕಬ್ಬಿಣದ ಆಯುಧ ಬಳಸಿ ಒಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.