ದೇಶ

ಸಂಸ್ಕೃತ ಕಡ್ಡಾಯ ವಿವಾದ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಸ್ಪಷ್ಟನೆ

Vishwanath S

ನವದೆಹಲಿ: ಕೇಂದ್ರೀಯ ವಿದ್ಯಾಲಯಗಳಲ್ಲಿ ಜರ್ಮನ್‌ ಭಾಷೆ ಬದಲಿಗೆ ಮೂರನೆಯ ಭಾಷೆಯಾಗಿ ಸಂಸ್ಕೃತವನ್ನು ಕಡ್ಡಾಯಗೊಳಿಸಬೇಕು ಎಂಬ ತಮ್ಮ ಹೇಳಿಕೆಗೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ (ಎಚ್‌ಆರ್‌ಡಿ) ಸಚಿವೆ ಸ್ಮೃತಿ ಇರಾನಿ ಭಾನುವಾರ ಸಮರ್ಥನೆ ನೀಡಿದ್ದಾರೆ.

ಸಂಸ್ಕೃತ ಕಡ್ಡಾಯಗೊಳಿಸುವ ಮೂಲಕ ಕೇಂದ್ರ ಸರ್ಕಾರ ‘ಶಿಕ್ಷಣವನ್ನು ಕೇಸರೀಕರಣಗೊಳಿಸುತ್ತಿದೆ ಎಂಬ ಟೀಕೆಯನ್ನು ತಳ್ಳಿಹಾಕಿದ ಸ್ಮೃತಿ ಇರಾನಿ, ಕೆಲವರು ನನ್ನನ್ನು ಆರ್‌ಎಸ್‌ಎಸ್‌ ಪ್ರತಿನಿಧಿಯಂತೆ  ಬಿಂಬಿಸುತ್ತಾ, ನಾನು ಮಾಡಿರುವ ಒಳ್ಳೆಯ ಕೆಲಸಗಳನ್ನು ಮರೆಮಾಚಿ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನ ನಡೆಸುತ್ತಿದ್ದಾರೆ. ಜನರು ಯಾಕೆ ನಾನು ಹೇಳಿದ್ದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಬೇಸರ  ವ್ಯಕ್ತಪಡಿಸಿದರು.

2011ರಲ್ಲಿ ಮಾಡಿಕೊಂಡಿರುವ ಒಪ್ಪಂದದಂತೆ ಕೇಂದ್ರೀಯ ವಿದ್ಯಾಲಯಗಳಲ್ಲಿ ಮೂರನೆಯ ಭಾಷೆಯಾಗಿ ಜರ್ಮನ್‌ ಕಲಿಸಲಾಗುತ್ತದೆ. ಆದರೆ ಈ ಒಪ್ಪಂದವು ಸಂವಿಧಾನದ ಉಲ್ಲಂಘನೆ ಆಗುತ್ತದೆ. ಸರ್ಕಾರ ಇದನ್ನು ಪರಿಶೀಲಿಸುತ್ತಿದೆ. ಇನ್ನು ಮೂರನೆಯ ಭಾಷೆಯಾಗಿ ಸಂವಿಧಾನದಲ್ಲಿ ಪಟ್ಟಿ ಮಾಡಿರುವ 23 ಭಾರತೀಯ ಭಾಷೆಗಳಲ್ಲಿ ಯಾವುದನ್ನು ಬೇಕಾದರೂ ಅಳವಡಿಸಿಕೊಳ್ಳಬಹುದು ಎಂದು ಅವರು ಸ್ಪಷ್ಟನೆ ನೀಡಿದರು.

ಸಿಬಿಎಸ್‌ಇ ಪಠ್ಯಕ್ರಮದಿಂದ ಜರ್ಮನ್‌ ಭಾಷೆಯನ್ನು ತೆಗೆದು ಹಾಕುವುದಿಲ್ಲ. ಅದನ್ನು ವಿದೇಶಿ ಭಾಷೆಯಾಗಿ ಪರಿಗಣಿಸಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

SCROLL FOR NEXT