ದೇಶ

ತೆರಿಗೆ ಪ್ರಕರಣದಲ್ಲಿ ಜಯಾಗೆ "ಕೇಂದ್ರ" ನೆರವು?

Srinivasamurthy VN

ನವದೆಹಲಿ: ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿ ಇತ್ತೀಚೆಗಷ್ಟೇ ಜಾಮೀನು ಪಡೆದು ಕೊಂಚ ನಿರಾಳವಾಗಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರಿಗೆ ಸಂಬಂಧಿಸಿದ ತೆರಿಗೆ ರಿಟರ್ನ್ಸ್ ಪ್ರಕರಣವೊಂದರಲ್ಲಿ ಸುಲಭ ಪರಿಹಾರ ಸಿಗುವ ಸಾಧ್ಯೆತೆಯಿದೆ.

ಇಪ್ಪತ್ತು ವರ್ಷಗಳ ಹಿಂದೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸದ ವಿಚಾರವಾಗಿ ಜಯಲಲಿತಾ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ನ್ಯಾಯಾಲಯದ ಹೊರಗೆ ಇತ್ಯರ್ಥಗೊಳಿಸಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದೆ ಎಂದು ಮೂಲಗಳು ತಿಳಿಸಿವೆ. 1991-92ರಲ್ಲಿ ಹಾಗೂ 1992-93ನೇ ಸಾಲಿನಲ್ಲಿ ಜಯಲಲಿತಾ ತೆರಿಗೆ ಪಾವತಿಸಿರಲಿಲ್ಲ. ಇದೇ ಪ್ರಕರಣದಲ್ಲಿ ಜಯಲಲಿತಾ ಗೆಳತಿ ಶಶಿಕಲಾ ನಟರಾಜನ್ ಅವರೂ ಆರೋಪಿಯಾಗಿದ್ದಾರೆ.

ಮೂಲಗಳ ಪ್ರಕಾರ , ಈ ಪ್ರಕರಣಕ್ಕೆ ಸಂಬಂಧಿಸಿ ಜಯಲಲಿತಾ ಕೇಂದ್ರ ಸರ್ಕಾರಕ್ಕೆ ಈ ಹಿಂದೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ಪ್ರಕರಣವನ್ನು ಮಾತುಕತೆ ಹಾಗೂ ಒಪ್ಪಂದದ ಮೂಲಕ ಇತ್ಯರ್ಥಗೊಳಿಸುವಂತೆ ಕೋರಿದ್ದರು. ಈ ಅರ್ಜಿಯನ್ನು ಪರಿಶೀಲಿಸಲು ಕಳೆದ ಆಗಸ್ಟ್‌ನಲ್ಲಿ ಕೇಂದ್ರ ಸರ್ಕಾರ ಸಮಿತಿಯೊಂದನ್ನು ನೇಮಿಸಿತ್ತು. ಸಮಿತಿ ಈ ಬಗ್ಗೆ ಚರ್ಚಿಸಿ, ಸಂಧಾನದ ಮೂಲಕ ಪ್ರಕರಣ ಇತ್ಯರ್ಥಗೊಳಿಸಲು ಹಸಿರು ನಿಶಾನೆ ನೀಡಿದೆ.

SCROLL FOR NEXT