ದೇಶ

ಪರಮಾಣು ಒಪ್ಪಂದ ಭವಿಷ್ಯದಲ್ಲಿ ಹೆಚ್ಚು ಪರಿಣಾಮ ಬೀರಲಿದೆ: ಮೋದಿ

ನವದೆಹಲಿ: ತ್ರಿರಾಷ್ಟ್ರ ಪ್ರವಾಸದಲ್ಲಿ ಪರಮಾಣು ಒಪ್ಪಂದ ಮಾಡಿರುವುದು ದೊಡ್ಡ ಸಾಧನೆಯಾಗಿದ್ದು, ಈ ಒಪ್ಪಂದ ಭವಿಷ್ಯದಲ್ಲಿ ಭಾರತದ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.

ತ್ರಿರಾಷ್ಟ್ರ ಪ್ರವಾಸ ಪೂರ್ಣಗೊಳಿಸಿ ಭಾರತಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ಪಕ್ಷದ ಸಂಸದರೊಂದಿಗೆ ಇಂದು ನವದೆಹಲಿಯಲ್ಲಿ ಮಾತನಾಡಿರುವ ಮೋದಿ ಅವರು, ಅಧಿಕಾರಕ್ಕೆ ಬಂದ ಪ್ರತಿಯೊಂದು ಸರ್ಕಾರವೂ ಪರಮಾಣು ಒಪ್ಪಂದಕ್ಕಾಗಿ ಹರಸಾಹಸ ಪಡುತ್ತಿದ್ದವು. ನಮ್ಮ ಸರ್ಕಾರ ಪರಮಾಣು ಒಪ್ಪಂದ ಸಾಧಿಸಿರುವುದು ಒಂದು ದೊಡ್ಡ ಸಾಧನೆಯಾಗಿದೆ. ಈ ಸಾಧನೆಯನ್ನು ಬಡಜನರಿಗೆ ಸಮರ್ಪಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ತಮ್ಮ ಸಾಧನೆಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವಾರಾಜ್ ಹಾಗೂ ವಿ.ಕೆ. ಸಿಂಗ್ ಅವರು ಪ್ರಮುಖ ಪಾತ್ರವಹಿಸಿದ್ದು, ಪರಮಾಣು ಒಪ್ಪಂದದಲ್ಲಿ ಅವರ ಪಾತ್ರ ಅಪಾರವಾಗಿದೆ ಎಂದು ಮೋದಿ ಶ್ಲಾಘಿಸಿದ್ದಾರೆ. ಅಲ್ಲದೆ, ಜನರು ನಮ್ಮ ಸರ್ಕಾರದ ನಂಬಿಕೆ ಇಟ್ಟು ಬಹುಮತದಿಂದ ಅಧಿಕಾರಕ್ಕೆ ಬರುವಂತೆ ಮಾಡಿದ್ದಾರೆ. ಅವರ ನಂಬಿಕೆಗೆ ಎಂದಿಗೂ ಚಿರಋಣಿಯಾಗಿರುತ್ತೇನೆ. ಈ ಕುರಿತಂತೆ ಜನರಿಗೆ ಎಷ್ಟು ಅಭಿನಂದಿಸಿದರೂ ಸಾಲದು ಎಂದು ಮೋದಿ ಹೇಳಿದ್ದಾರೆ.

ಇದೇ ವೇಳೆ ಪ್ರಸ್ತುತ ದೇಶದ ಪ್ರಮುಖ ಸ್ಥಿತಿಗತಿಗಳು ಹಾಗೂ ಯುದ್ಧಗ್ರಸ್ಥ ಯೆಮೆನ್ ನಲ್ಲಿ ಸಿಲುಕಿರುವ ಭಾರತೀಯರ ಕುರಿತಂತೆ ಪಕ್ಷದ ಸಂಸದರೊಂದಿಗೆ ಮೋದಿ ಅವರು ಚರ್ಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.

42 ವರ್ಷಗಳ ಬಳಿಕೆ ಕೆನಡಾಕ್ಕೆ ಭೇಟಿ ನೀಡಿದ ಭಾರತ ಮೊದಲ ಪ್ರಧಾನಿ ನರೇಂದ್ರ ಮೋದಿ, ರಷ್ಯಾ, ಕಜಕಸ್ತಾನಕ್ಕೆ ಈಗಲೇ ಯುರೇನಿಯಂ ಪೂರೈಕೆ ಮಾಡುತ್ತಿದ್ದ ಕೆನಡಾ ದೇಶದೊಂದಿಗೆ ಪರಮಾಣು ಒಪ್ಪಂದಕ್ಕೆ ಸಹಿ ಹಾಕಿಸಿ ಕೊಳ್ಳುವಲ್ಲಿ ಯಶಸ್ವಿ ಸಾಧಿಸಿದ್ದಾರೆ.

ಕೆನಡಾ ಪ್ರವಾಸದ ವೇಳೆ ಕೆನಡಾ ಪ್ರಧಾನಿ ಸ್ಟೀಫನ್ ಹಾರ್ಪರ್ ಅವರನ್ನು ಭೇಟಿ ಮಾಡಿದ ನರೇಂದ್ರ ಮೋದಿ ಅವರು ದ್ವಿಪಕ್ಷೀಯ ಸಹಕಾರ ಮಾತುಕತೆಯಲ್ಲಿ ಯಶಸ್ವಿ ಸಾಧಿಸಿದರು. ಇದರಂತೆ ಕೆನಡಾ ಪ್ರಧಾನಿ 5 ವರ್ಷಗಳವರೆಗೆ ಅಂತರರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆಯ ಸುರಕ್ಷತಾ ನಿಯಮಗಳ ಅಡಿಯಲ್ಲಿ ಭಾರತಕ್ಕೆ ಯುರೇನಿಯಂ ಪೂರೈಕೆ ಮಾಡುವ ಕುರಿತಂತೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. 

ಒಪ್ಪಂದದ ಪ್ರಕಾರ, ಕಮೆಕೊ ಕಾರ್ಪೋರೇಷನ್ ಕಂಪನಿಯು ಭಾರತಕ್ಕೆ ಈ ವರ್ಷದಿಂದ ಐದು ವರ್ಷಗಳವರೆಗೆ ಸುಮಾರು ರು.1,600 ಕೋಟಿ ಮೌಲ್ಯದ 3 ಸಾವಿರ ಮೆಟ್ರಿಕ್ ಟನ್ ಯುರೇನಿಯಂ ಪೂರೈಕೆ ಮಾಡಲಿದೆ ಎಂದು ಹೇಳಲಾಗುತ್ತಿದೆ.

SCROLL FOR NEXT