ನವದೆಹಲಿ: ಸಂಸದರ ಅಮಾನತು ಕ್ರಮ ಖಂಡಿಸಿ ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ವಿರುದ್ಧ ಯುವ ಕಾಂಗ್ರೆಸ್ ಕಾರ್ಯಕರ್ತರು ಅಂಗಿ ಬಿಚ್ಚಿ ಪ್ರತಿಭಟನೆ ಮಾಡಿರುವುದರ ವಿರುದ್ಧ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರು ಶುಕ್ರವಾರ ವಾಗ್ದಾಳಿ ನಡೆಸಿದ್ದಾರೆ.
ಲೋಕಸಭಾ ಸ್ಪೀಕರ್ ಅವರು ಸಂಸತ್ತಿನ ಹೆಮ್ಮೆಯ ಪ್ರತೀಕ. ಓರ್ವ ಮಹಿಳೆಗೆ ಕಾಂಗ್ರೆಸ್ ಪಕ್ಷ ಈ ರೀತಿಯಾಗಿಯೇ ಗೌರವ ಸಲ್ಲಿವುದು, ರಾಹುಲ್ ಗಾಂಧಿ ಅವರು ತಮ್ಮ ಪಕ್ಷದ ಕಾರ್ಯಕರ್ತರಿಗೆ ಈ ರೀತಿಯಾಗಿಯೇ ಪಾಠ ಹೇಳಿಕೊಡುತ್ತಾರೆಯೇ ಎಂದು ಪ್ರಶ್ನಿಸಿರುವ ಅವರು, ಓರ್ವ ಮಹಿಳೆಗೆ ಕಾಂಗ್ರೆಸ್ ಸೂಚಿಸುತ್ತಿರುವ ಈ ಅಗೌರವವನ್ನು ದೇಶದ ಜನತೆ ಎಂದಿಗೂ ಕ್ಷಮಿಸುವುದಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ನಾಗಾ ಶಾಂತಿ ಒಪ್ಪಂದ ಕುರಿತಂತೆ ಕಾಂಗ್ರೆಸ್ ನೀಡಿದ್ದ ಹೇಳಿಕೆ ವಿರುದ್ಧ ಕಿಡಿಕಾರಿರುವ ಅವರು, ನಾಗಾ ಒಪ್ಪಂದವೊಂದು ಐತಿಹಾಸಿಕ ಒಪ್ಪಂದವಾಗಿದ್ದು, ಇಂತಹ ಒಪ್ಪಂದದ ಕುರಿತಂತೆ ಕಾಂಗ್ರೆಸ್ ಪಕ್ಷದ ಅಭಿಪ್ರಾಯ ಕೇಳಿದ್ದರೆ ಇದಕ್ಕೆ ಅವರು ನಿರಾಕರಣೆಯ ಅಭಿಪ್ರಾಯವನ್ನೇ ಸೂಚಿಸುತ್ತಿದ್ದರು. ಕಾಂಗ್ರೆಸ್ ಪಕ್ಷ ಜಿಎಸ್ ಟಿ ಕಾಯ್ದೆಯನ್ನೇಕೆ ವಿರೋಧಿಸಿತ್ತಿದೆ ಎಂದು ಅರ್ಥವಾಗುತ್ತಿಲ್ಲ. ಜಿಎಸ್ ಟಿ ಕಾಯ್ದೆಯು ಮುಂದಿನ ದಿನಗಳಲ್ಲಿ ದೇಶದಲ್ಲಿ ಅರ್ಥಿಕ ಕ್ರಾಂತಿಯನ್ನೇ ಸೃಷ್ಟಿಸಲಿದೆ ಎಂದು ಹೇಳಿದ್ದಾರೆ.