ಶ್ರೀನಗರ: ಉಭಯ ರಾಷ್ಟ್ರಗಳ ಭದ್ರತಾ ಸಲಹೆಗಾರರ (ಎನ್ಎಸ್ಎ) ಮಟ್ಟದ ಸಭೆ ಸಂಬಂಧ ಭಾರತ-ಪಾಕಿಸ್ತಾನ ನಡುವೆ ಇದೀಗ ವಾಕ್ಸಮರ ನಡೆಯುತ್ತಿದ್ದರೆ, ಅತ್ತ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಶಬೀರ್ ಅಹ್ಮದ್ ಶಾ ಅವರು ಶನಿವಾರ ದೆಹಲಿಗೆ ತೆರಳುತ್ತಿದ್ದಾರೆ.
ದೆಹಲಿ ಭೇಟಿ ಕುರಿತಂತೆ ಮಾತನಾಡಿರುವ ಅವರು, ಎನ್ಎಸ್ಎ ಸಂಬಂಧ ಸಾಕಷ್ಟು ಗೊಂದಲಗಳಿವೆ. ಆದರೂ, ನಾನು ದೆಹಲಿಗೆ ತೆರಳುತ್ತಿದ್ದೇನೆ. ದೆಹಲಿಗೆ ತೆರಳುತ್ತಿದ್ದಂತೆ ಪಾಕಿಸ್ತಾನದ ಪ್ರಧಾನಿ ಅವರ ರಾಷ್ಟ್ರೀಯ ಭದ್ರತೆ ಹಾಗೂ ವಿದೇಶಾಂಗ ನೀತಿ ಸಲಹೆಗಾರ ಸರ್ತಾಜ್ ಅಜೀಜ್ ಅವರನ್ನು ಭೇಟಿ ಮಾಡಲಾಗುವುದು ಎಂದು ಹೇಳಿದ್ದಾರೆ.
ಭಾರತದ ಜನತೆಯನ್ನು ನಾವು ಕೇಳುವುದಿಷ್ಟೇ, ಪಾಕಿಸ್ತಾನದ ಅಧಿಕಾರಿಗಳು ಭಾರತಕ್ಕೆ ಬಂದಾಗ ಮಾಜಿ ಪ್ರಧಾನಮಂತ್ರಿ ವಾಜಪೇಯಿ, ನಾಯಕ ಎಲ್.ಕೆ.ಅಡ್ವಾಣಿ ಅಥವಾ ಮನಮೋಹನ್ ಸಿಂಗ್ ಅವರು ಈ ರೀತಿಯಾದ ಯಾವುದೇ ಸಮಸ್ಯೆಗಳನ್ನಾಗಲಿ, ಗೊಂದಲಗಳನ್ನಾಗಲಿ ಸೃಷ್ಟಿಸುತ್ತಿರಲಿಲ್ಲ. ಆದರೆ ಈಗಿರುವ ಅಧಿಕಾರಿಗಳೇಕೆ ಗೊಂದಲಗಳನ್ನು ಸೃಷ್ಟಿಸುತ್ತಿದ್ದಾರೆ? ಗೊಂದಲ ಸೃಷ್ಟಿಸುತ್ತಿರುವ ಅಧಿಕಾರಿಗಳ ಅರ್ಥ ಏನು? ಪಾಕಿಸ್ತಾನದ ಅಧಿಕಾರಿಗಳನ್ನು ಭೇಟಿ ಮಾಡಲು ಬಿಡುತ್ತಿದ್ದ ವಾಜಪೇಯಿ, ಅಡ್ವಾಣಿ ಅವರು ತಪ್ಪಾಗಿದ್ದರೇ ಎಂದು ಪ್ರಶ್ನಿಸಿದ್ದಾರೆ.
ಕಾಶ್ಮೀರ ವಿಚಾರ ಅತ್ಯಂತ ಪ್ರಮುಖವಾದದ್ದು, ಪಾಕಿಸ್ತಾನದ ನಿಲುವು ಸ್ಥಿರವಾಗಿದೆ. ಕಾಶ್ಮೀರ ವಿಚಾರ ಕುರಿತಂತೆ ಅವರು ಮಾತನಾಡಲು ತಯಾರಾಗಿದ್ದು, ಏನು ಬೇಕು ಅದನ್ನು ಕೇಳಲು ಸಿದ್ಧರಿದ್ದಾರೆ. ಭಾರತ ಕೂಡ ಈ ಬಗ್ಗೆ ಚರ್ಚೆ ನಡೆಸಿ ಕಾಶ್ಮೀರವನ್ನು ಸೇರ್ಪಡೆಗೊಳಿಸಿಕೊಳ್ಳಲಿ ಎಂದು ಹೇಳಿದ್ದಾರೆ.
ಆಗಸ್ಚ್ 23-24ರಂದು ಹೊಸದಿಲ್ಲಿಯಲ್ಲಿ ನಡೆಯಲಿರುವ ಸಭೆಗೂ ಮುನ್ನ ಕಾಶ್ಮೀರದ ಪ್ರತ್ಯೇಕತಾವಾದಿಗಳ ಜತೆ ಮಾತನಾಡಲು ಪಾಕಿಸ್ತಾನ ಇದೀಗ ಮುಂದಾಗಿದ್ದು, ಇದನ್ನು ಶತಯಾಗತಾಯವಾಗಿ ಭಾರತ ವಿರೋಧಿಸಿದೆ. ಇತ್ತೀಚೆಗಷ್ಟೇ ರಷ್ಯಾದ ಯುಫಾದಲ್ಲಿ ನಡೆದ ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಷ್ ಅವರು ಚರ್ಚಿಸಿದಂತೆ ಭಯೋತ್ಪಾದನೆಯ ಸಭೆಯ ಪ್ರಮುಖ ವಿಷಯವಾಗಬೇಕು. ಯಾವುದೇ ಕಾರಣಕ್ಕೂ ಪಾಕ್ ನ ಎನ್ ಎಸ್ ಎ ಹುರಿಯತ್ ನಾಯಕರ ಜತೆ ಮಾತುಕತೆ ನಡೆಸಬಾರದೆಂದು ಪಾಕಿಸ್ತಾನಕ್ಕೆ ಭಾರತ ಎಚ್ಚರಿಕೆ ನೀಡಿತ್ತು.
ಇದರ ಹಿನ್ನೆಲೆಯಲ್ಲಿ ಷರೀಷ್ ನೇತೃತ್ವದಲ್ಲಿ ಶುಕ್ರವಾರ ಉನ್ನತ ಅಧಿಕಾರಿಗಳ ಸಭೆ ನಡೆದಿತ್ತು. ಸಭೆಯಲ್ಲಿ ಭಾರತದ ಷರತ್ತುಗಳನ್ನು ತಿರಸ್ಕರಿಸಲು ಪಾಕಿಸ್ತಾನ ನಿರ್ಣಯ ಕೈಗೊಳ್ಳಲಾಗಿದೆ. ಪಾಕಿಸ್ತಾನದ ಅಧಿಕಾರಿಗಳು ಭಾರತಕ್ಕೆ ಭೇಟಿ ನೀಡಿದಾಗ ಪ್ರತ್ಯೇಕತಾವಾದಿಗಳ ಜೊತೆ ಮಾತನಾಡುವುದು ಸಂಪ್ರದಾಯವಾಗಿದ್ದು, ಭಾರತ ಉಪದೇಶಕ್ಕೆ ಮಣಿದು ಇದನ್ನು ಮುರಿಯಲು ಸಾಧ್ಯವಿಲ್ಲ. ಒಂದು ವೇಳೆ ಹುರಿಯತ್ ನಾಯಕರ ಜತೆ ಭೇಟಿ ಬೇಡ ಎಂದು ಭಾರತ ತನ್ನ ಪಟ್ಟನ್ನು ಮುಂದುವರಿಸಿದರೆ, ಎನ್ಎಸ್ಎ ಸಭೆಯನ್ನೇ ರದ್ದು ಮಾಡುವುದಾಕಿ ಪಾಕ್ ತೀರ್ಮಾನ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ.