ಪಾಟ್ನಾ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸ್ವಚ್ಛ ಭಾರತ ಅಭಿಯಾನದ ಬಗ್ಗೆ ಮಾತನಾಡಿದ್ದು, ಮೋದಿ ಅವರ ಯೋಜನೆ ವಿಫಲವಾಗಿದೆ ಎಂದಿದ್ದಾರೆ.
ಪಾಟ್ನಾ ಗೆ ಭೇಟಿ ನೀಡಿ ಬಿಹಾರ ಸರ್ಕಾರ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅರವಿಂದ್ ಕೇಜ್ರಿವಾಲ್, ಯುವಜನತೆ ಮೋದಿ ಅವರಲ್ಲಿ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಮೋದಿ ಅವರ ಸ್ವಚ್ಛ ಭಾರತ ಅಭಿಯಾನ ವಿಫಲವಾಗಿದೆ ಎಂದು ಹೇಳಿದ್ದಾರೆ.
ಚುನಾವಣೆಗೂ ಮುನ್ನ ಕಪ್ಪು ಹಣ ವಾಪಸ್ ತರುವುದಾಗಿ ಮೋದಿ ಜನರಿಗೆ ಭರವಸೆ ನೀಡಿದ್ದರು. ಆದರೆ ಈಗ ಕಪ್ಪು ಹಣದ ವಿಷಯವನ್ನು ಕೈಬಿಟ್ಟಿರುವ ಮೋದಿ, ಜನರಿಗೆ ಯೋಗ ಮಾಡಲು ಹೇಳುತ್ತಿದ್ದಾರೆ. ಇದರೊಂದಿಗೆ ಸ್ವಚ್ಛ ಭಾರತ ಅಭಿಯಾನಕ್ಕೆ ಕರೆ ನೀಡಿದ್ದಾರೆ. ಈ ಅಭಿಯಾನಕ್ಕಾಗಿ ಮಿಲಿಯನ್ ಗಟ್ಟಲೆ ಹಣ ಖರ್ಚು ಮಾಡಲಾಗಿದೆ. ಆದರೆ ಒಂದೇ ಒಂದು ರಸ್ತೆಯೂ ಸ್ವಚ್ಚವಾಗಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಬಿಹಾರದ ಜನತೆ, ದೆಹಲಿ ಅಥವಾ ಕೇಂದ್ರ ಸರ್ಕಾರದ ಎರಡು ಮಾದರಿಯ ಸರ್ಕಾರಗಳ ಪೈಕಿ ಒಂದು ಮಾದರಿಯನ್ನು ಆಯ್ಕೆ ಮಾಡಿಕೊಳ್ಳಬೇಕಿದೆ, ನಕಾರಾತ್ಮಕ ರಾಜಕೀಯ, ದೋಷಾರೋಪಣೆಯ ರಾಜಕೀಯವನ್ನು ಜನರು ತಿರಸ್ಕರಿಸುತ್ತಿದ್ದಾರೆ. ಮೋದಿ ಸರ್ಕಾರದಲ್ಲಿ ಜನತೆಗೆ ವಿಶ್ವಾಸ ಕಡಿಮೆಯಾಗುತ್ತಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.