ದೇಶ

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ ಠಾಕೂರ್ ಪ್ರಮಾಣವಚನ ಸ್ವೀಕಾರ

Sumana Upadhyaya

ನವದೆಹಲಿ: ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ಅವರು ಸುಪ್ರೀಂ ಕೋರ್ಟಿನ 43ನೇ ಮುಖ್ಯ ನ್ಯಾಯಮೂರ್ತಿಯಾಗಿ ಗುರುವಾರ ಅಧಿಕಾರ ಸ್ವೀಕರಿಸಿಕೊಂಡಿದ್ದಾರೆ.

ಇಂದು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಠಾಕೂರ್ ಅವರಿಗೆ ಪ್ರಮಾಣವಚನ ಬೋಧಿಸಿದರು.

ಜಮ್ಮು-ಕಾಶ್ಮೀರದ ರಂಬನ್ ಜಿಲ್ಲೆಯ ಬಟ್ರೂ ಎಂಬಲ್ಲಿ ಜನವರಿ 4, 1952ರಲ್ಲಿ ಜನಿಸಿದ ಠಾಕೂರ್ 2017ರಲ್ಲಿ ನಿವೃತ್ತಿಯಾಗಿವುದರಲ್ಲಿದ್ದಾರೆ.

ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರಾಗಿ 2009, ನವೆಂಬರ್ 17ರಂದು ಅಧಿಕಾರ ಸ್ವೀಕರಿಸಿಕೊಂಡಿದ್ದ ನ್ಯಾಯಮೂರ್ತಿ ಠಾಕೂರ್, ಕ್ರಿಕೆಟ್ ಸಂಸ್ಥೆಯ ಆಡಳಿತವನ್ನು ಸ್ವಚ್ಛಗೊಳಿಸಲು ಈ ವರ್ಷ ಜನವರಿಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಸ್ಪಾಟ್ ಫಿಕ್ಸಿಂಗ್ ಹಗರಣ ಮತ್ತು ಬೆಟ್ಟಿಂಗ್ ಹಗರಣದ ವಿಚಾರಣೆಯನ್ನು ಸಮರ್ಥವಾಗಿ ನಡೆಸಿ ತೀರ್ಪು ನೀಡಿದ ಹೆಗ್ಗಳಿಕೆ ಠಾಕೂರ್ ಅವರದ್ದು. ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾದ ಬಿಸಿಸಿಐಯನ್ನು ಹೆಚ್ಚು ಪಾರದರ್ಶಕಗೊಳಿಸಲು ಮತ್ತು ಜವಾಬ್ದಾರಿಯುತವಾಗಿಸಲು ಕ್ರಮ ಕೈಗೊಳ್ಳಲು ನ್ಯಾಯಮೂರ್ತಿ ಆರ್ ಎಂ ಲೋಧಾ ಸಮಿತಿಯನ್ನು ರಚಿಸುವಂತೆ ಅವರು ಆದೇಶ ನೀಡಿದ್ದರು.

ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ತೀರ್ವ ಮುಜುಗರವನ್ನುಂಟುಮಾಡಿದ್ದ ಶಾರದಾ ಚಿಟ್ ಫಂಡ್ ಹಗರಣ ಕುರಿತು ಸಿಬಿಐ ತನಿಖೆ ನಡೆಸುವಂತೆ ಠಾಕೂರ್ ಅವರನ್ನೊಳಗೊಂಡ ವಿಭಾಗೀಯ ಪೀಠ ಆದೇಶ ನೀಡಿತ್ತು. ಉತ್ತರ ಪ್ರದೇಶದ ಮಾಜಿ ಸಚಿವರೊಬ್ಬರಿಗೆ ಸಂಬಂಧಿಸಿದ ಬಹುಕೋಟಿ ರೂಪಾಯಿ ಹಗರಣ ಕುರಿತ ಜಾಮೀನು ಅರ್ಜಿ ವಿಚಾರಣೆಯನ್ನು ನಡೆಸಿದ್ದರು.

SCROLL FOR NEXT