ದೇಶ

ನಕಲಿ ಮದ್ಯ ಸೇವಿಸಿ ಐವರು ಸಾವು, 21 ಮಂದಿ ಅಸ್ವಸ್ಥ

Lingaraj Badiger

ವಿಜಯವಾಡ: ಬಾರ್‌ವೊಂದರಲ್ಲಿ ನಕಲಿ ಮದ್ಯ ಸೇವಿಸಿ ಐವರು ಮೃತಪಟ್ಟ ಹಾಗೂ 21 ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದ ದಾರುಣ ಘಟನೆ ವಿಜಯವಾಡದ ಕೃಷ್ಣಲಂಕ ಪ್ರದೇಶದಲ್ಲಿ ನಡೆದಿದೆ.

ಇಂದು ಬೆಳಗ್ಗೆ 9.30ರ ಸುಮಾರಿಗೆ ಮದ್ಯ ಸೇವಿಸಿ ಸ್ವರ್ಣ ಬಾರ್‌ನಿಂದ ಹೊರ ಮೂವರ ಪೈಕಿ ಒಬ್ಬ ರಸ್ತೆಯಲ್ಲಿ ಕುಸಿದು ಬಿದ್ದರೆ, ಮತ್ತಿಬ್ಬರು ಸ್ವಲ್ಪ ದೂರದಲ್ಲಿ ಕುಸಿದು ಬಿದ್ದಿದ್ದಾರೆ.

ರಸ್ತೆಯಲ್ಲಿ ಕುಸಿದು ಬಿದ್ದಿದ್ದ ಈ ಮೂವರನ್ನು ಗಮನಿಸಿದ ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆಸ್ಪತ್ರೆಗೆ ತಲುಪುವ ಮೊದಲೇ ಅವರು ಮೃತಪಟ್ಟಿದ್ದರು. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಧಾವಿಸಿದ ಪೊಲೀಸರು ಪರೀಶಿಲನೆ ನಡೆಸಿದರು. ಈ ವೇಳೆ ನಕಲಿ ಮದ್ಯ ಸೇವಿಸಿ ಮತ್ತಿಬ್ಬರು ಮೃಪಟ್ಟಿರುವುದು ಪತ್ತೆಯಾಗಿದ್ದು, ಅವರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲದೆ ಸ್ವರ್ಣ ಬಾರ್‌ನಲ್ಲಿ ಮದ್ಯ ಸೇವಿಸಿದ 21ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈ ಪೈಕಿ ಐವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

ಮೃತಪಟ್ಟವರನ್ನು ಅಕುಲ್ ವಿಜಯ್ ಕುಮಾರ್, ನರಸ ಗೋಪಿ, ಮೀಸಲ ಮಹೇಶ್, ಮುನಗಲ ಶಂಕರ್ ರಾವ್ ಹಾಗೂ ಎನ್‌ಬಿಬಿವಿ ನಂಚರಯ್ಯ ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ನೆಹರು ನಗರ ಹಾಗೂ ರಣದೇವಿ ನಗರದ ನಿವಾಸಿಗಳಾಗಿದ್ದಾರೆ.

SCROLL FOR NEXT