ನವದೆಹಲಿ: ಆಟೋ ರಿಕ್ಷಾ ಪರವಾನಿಗೆ ಹಗರಣಕ್ಕೆ ಸಂಬಂಧಿಸಿದಂತೆ ಸಾರಿಗೆ ಇಲಾಖೆಯ ಮೂವರು ಅಧಿಕಾರಿಗಳನ್ನು ದೆಹಲಿ ಸರ್ಕಾರ ಶನಿವಾರ ಅಮಾನತು ಮಾಡಿದೆ.
ಇಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ, ಆಟೋ ರಿಕ್ಷಾಗಳ ಪರವಾನಗಿ ನವೀಕರಣಕ್ಕಾಗಿ ಲಂಚ ಪಡೆದ ಆರೋಪದ ಎದುರಿಸುತ್ತಿದ್ದ ಉಪ ಆಯುಕ್ತ(ಆಟೋ ರಿಕ್ಷಾ ಘಟಕ) ರಾಯ್ ಬಿಸ್ವಾಸ್, ಇನ್ಸ್ಪೆಕ್ಟರ್ ಮನಿಶ್ ಪುರಿ ಹಾಗೂ ಗುಮಾಸ್ತ ಅನಿಲ್ ಯಾದವ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು.
ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದ ಸಾರಿಗೆ ಇಲಾಖೆಯ ಮೂವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಟ್ವಿಟ್ ಮಾಡಿದ್ದಾರೆ.