ದೇಶ

ದೆಹಲಿ ಸಿಎಂ ಆಗಿ ಕೇಜ್ರಿವಾಲ್ ಪ್ರಮಾಣ, ಭ್ರಷ್ಟಾಚಾರ ಮುಕ್ತ ದೆಹಲಿಗಾಗಿ ಪಣ

Vishwanath S

ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸು ಗಳಿಸಿದ್ದ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ 2ನೇ ಬಾರಿಗೆ ದೆಹಲಿಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು, ದೆಹಲಿಯನ್ನು ಭ್ರಷ್ಟಾಚಾರ ಮುಕ್ತ ರಾಜ್ಯವನ್ನಾಗಿ ಮಾಡುವ ಭರವಸೆ ನೀಡಿದ್ದಾರೆ.

ರಾಮ್ ಲೀಲಾ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೆಹಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ಕೇಜ್ರಿವಾಲ್ ಅವರು ದೇವರ ಹೆಸರಿನಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಬಳಿಕ ಕೇಜ್ರಿವಾಲ್ ಅವರ ನಿಕಟವರ್ತಿ ಮನೀಶ್ ಸಿಸೋಡಿಯಾ ಸಹ ಪ್ರಮಾಣವಚನ ಸ್ವೀಕರಿಸಿದರು.

ಎಎಪಿ ನಾಯಕ ಸತ್ಯೇಂದ್ರ ಜೈನ್ ಅವರು ಎರಡನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದ್ದು,  ಇನ್ನುಳಿದ ಶಾಸಕರು ಇದೇ ಮೊದಲ ಬಾರಿಗೆ ಸಂಪುಟ ಸೇರಿಕೊಳ್ಳಲಿದ್ದಾರೆ. ಜಿತೇಂದ್ರ ತೋಮಾರ್, ಗೋಪಾಲ್ ರಾಯ್, ಸಂದೀಪ್ ಕುಮಾರ್ ಮತ್ತು ಆಸಿಮ್ ಅಹ್ಮದ್ ಖಾನ್ ಕೇಜ್ರಿವಾಲ್ ಸಂಪುಟ ಸೇರಿರುವ ಇತರ ಶಾಸಕರು.

ಪ್ರಮಾಣವಚನ ಸ್ವೀಕರಿಸಿದ ಬಳಿಕ ಮಾತನಾಡಿದ ಕೇಜ್ರಿವಾಲ್, ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷವನ್ನು ಪುನಃ ಅಧಿಕಾರಕ್ಕೆ ತಂದಿದ್ದಕ್ಕೆ ಬೆಂಬಲಿಗರಿಗೆ ಧನ್ಯವಾದ ಅರ್ಪಿಸಿದರು. ಅಲ್ಲದೆ ನಮ್ಮ ಸರ್ಕಾರ 24 ಗಂಟೆಗಳ ಕಾಲ ನಿರಂತರವಾಗಿ ಕಾರ್ಯನಿರ್ವಹಿಸಲಿದೆ. ಆಪ್ ಸಚಿವರು, ಶಾಸಕರು ದೆಹಲಿಯ ಅಭಿವೃದ್ಧಿಗಾಗಿ ದುಡಿಯಲಿದ್ದಾರೆ ಎಂದರು.

ಹಿಂದೂ, ಮುಸ್ಲಿಂ ಕೈಸ್ತ ಹೀಗೆ ಧರ್ಮ ಭೇದ, ಜಾತಿ ಭೇದ ವಿಲ್ಲದೆ ಮತ ಹಾಕಿ ಪೂರ್ಣ ಪ್ರಮಾಣದಲ್ಲಿ ಆಪ್ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದೀರ. ಜನತೆ ಆಪ್ ಸರ್ಕಾರದ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುತ್ತೇವೆ ಎಂದರು.

ಭ್ರಷ್ಟಾಚಾರ ನಿರ್ಮೂಲನೆ

ಭ್ರಷ್ಟಾಚಾರ ನಿರ್ಮೂಲನೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಅಣ್ಣಾ ಹಜಾರೆಯವರ ಆಶೆಯವಾಗಿತ್ತು. ಅವರ ಆಶೆಯವನ್ನು ಪೂರೈಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದರು. ಅಲ್ಲದೆ ಯಾರಾದ್ರೂ ಲಂಚ ಕೇಳಿದರೆ ನಿಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡಿ, ಆ ವಿಡಿಯೋವನ್ನು ನನಗೆ ಕಳಿಸಿ ನಾನು ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಜನತೆಗೆ ಭರವಸೆ ನೀಡಿದರು.



SCROLL FOR NEXT