ಕೋಲ್ಕತಾ: ಬಹುಕೋಟಿ ಹಗರಣ ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಪಶ್ಚಿಮ ಬಂಗಾಳ ಡಿಜಿಪಿ ರಜತ್ ಮಜುಂದಾರ್ ಅವರಿಗೆ ಕೋಲ್ಕತಾ ಹೈ ಕೋರ್ಟ್ ಸೋಮವಾರ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಈ ಕುರಿತಂತೆ ಇಂದು ವಿಚಾರಣೆ ನಡೆಸಿದೆ ಸುಬ್ರೊಕಮಲ್ ಮುಖರ್ಜಿ ನೇತೃತ್ವದ ಪೀಠವು ರಜತ್ ಮಜುಂದಾರ್ ಅವರಿಗೆ 1 ಲಕ್ಷ ಭದ್ರತಾ ಠೇವಣಿ ಮತ್ತು ಶ್ಯೂರಿಟಿ ನೀಡಿ ಜಾಮೀನು ಪಡೆಯಬೇಕು ಎಂದು ನ್ಯಾಯಾಧೀಶರು ಹೇಳಿದ್ದಾರೆ. ಅಲ್ಲದೆ ಕೋಲ್ಕತಾ ರಾಜ್ಯ ಬಿಟ್ಟು ಎಲ್ಲಿಯೂ ತೆರಳದಂತೆಯೂ ಮತ್ತು ಪೊಲೀಸರ ವಿಚಾರಣೆಗೆ ಸಹಕರಿಸಬೇಕು ಎಂದು ಅವರು ತಾಕೀತು ಮಾಡಿದ್ದಾರೆ. ಒಂದು ವೇಳೆ ಷರತ್ತುಗಳನ್ನು ಉಲ್ಲಂಘಿಸಿದರೆ ಮತ್ತೆ ಬಂಧಿನಕ್ಕೆ ಆದೇಶ ನೀಡಲಾಗುವುದು ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಶಾರದಾ ಚಿಟ್ ಫಂಡ್ ಸಂಸ್ಥೆಯಲ್ಲಿ ರಜತ್ ಮಜುಂದಾರ್ ಅವರು ಭದ್ರತಾ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತದ್ದರು. ಈ ಹಿನ್ನೆಲೆಯಲ್ಲಿ ಹಗರಣವನ್ನು ತನಿಖೆ ನಡೆಸುತ್ತಿದ್ದ ಸಿಬಿಐ ಅಧಿಕಾರಿಗಳು 2014 ಸೆಪ್ಟೆಂಬರ್ನಲ್ಲಿ ಪಶ್ಚಿಮ ಬಂಗಾಳದಲ್ಲಿದ್ದ ರಜತ್ ಮಜುಂದಾರ್ ಅವರ ನಿವಾಸದ ಮೇಲೆಯೂ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡು ರಜತ್ ಅವರನ್ನು ಬಂಧಿಸಿದ್ದರು.