ದೇಶ

ಪೂರ್ಣವಾಗಿ ಪಡಿತರ ವ್ಯವಸ್ಥೆ ಗಣಕೀಕರಣ: ಮೋದಿ ವಾಗ್ದಾನ

Lakshmi R

ನವದೆಹಲಿ: ದೇಶದ ಸಾರ್ವಜನಿಕ ವಿತರಣಾ ವ್ಯವಸ್ಥೆ(ಪಿಡಿಎಸ್) ಸದ್ಯದಲ್ಲೇ ಸಂಪೂರ್ಣವಾಗಿ ಕಂಪ್ಯೂಟರೀಕರಣಗೊಳ್ಳಲಿದೆ.

ಇದು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಆಶ್ವಾಸನೆ. ದೇಶದ ಜನರಿಗೆ 'ಒಳ್ಳೆಯ ದಿನಗಳ' ಅನುಭವ ನೀಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವೇಗದ ಸುಧಾರಣೆಯತ್ತ ಗಮನ ಹರಿಸಿದ್ದಾರೆ.

ಈ ಪೈಕಿ ಪಿಡಿಎಸ್ ಗಣಕೀಕರಣವೂ ಸೇರಿದ್ದು, ಎಫ್‌ಸಿಐ ದಾಸ್ತಾನು ಮಳಿಗೆಗಳಿಂದ ಹಿಡಿದು ಪಡಿತರ ಅಂಗಡಿಗಳು ಮತ್ತು ಗ್ರಾಹಕರವರೆಗೆ ಎಲ್ಲವನ್ನೂ ಕಂಪ್ಯೂಟರೀಕರಣಗೊಳಿಸುವ ದೊಡ್ಡ ಯೋಜನೆ ಹಾಕಿಕೊಂಡಿದ್ದೇವೆ ಎಂದಿದ್ದಾರೆ ಪ್ರಧಾನಿ.

ಇದೇ ವೇಳೆ, ಬಡವರಿಗೆ ಸಬ್ಸಿಡಿಯ ಅಗತ್ಯವಿದ್ದು, ಸಬ್ಸಿಡಿ ಸೋರಿಕೆಯನ್ನು ತಡೆಯುವ ಕಾರ್ಯ ನಡೆಯಬೇಕಿದೆ ಎಂದೂ ಹೇಳಿದ್ದಾರೆ. ಜತೆಗೆ, ಎಲ್‌ಪಿಜಿಯಂತೆ ಇತರೆ ಯೋಜನೆಗಳಿಗೂ ನೇರ ನಗದು ವರ್ಗಾವಣೆ ನೀತಿ ಜಾರಿಗೆ ತರಲು ನಿರ್ಧರಿಸಿದ್ದೇವೆ ಎಂದಿದ್ದಾರೆ.

ರೂ.1,235 ಲಕ್ಷ ಕೋಟಿಗೆ: ಧನಾತ್ಮಕ ಚೌಕಟ್ಟು, ತೆರಿಗೆ ಸ್ಥಿರತೆ ಮತ್ತು ಮೂಲಸೌಕರ್ಯಕ್ಕೆ ಒತ್ತು ನೀಡುವ ಮೂಲಕ ದೇಶದ ಆರ್ಥಿಕತೆಯನ್ನು ರೂ.123 ಲಕ್ಷಕೋಟಿಯಿಂದ ರೂ.1,235 ಲಕ್ಷಕೋಟಿಗೇರಿಸುವುದು ನಮ್ಮ ಉದ್ದೇಶವಾಗಿದೆ.

ಅಭಿವೃದ್ಧಿಯಾದರೆ ಉದ್ಯೋಗಾವಕಾಶ ಸೃಷ್ಟಿಯಾಗುತ್ತದೆ. ಹಾಗಾಗಿ ಸರ್ಕಾರವು ಕೆಲವೊಂದು ನಿಯಮಗಳಲ್ಲಿ ಬದಲಾವಣೆ ತರಲಿದೆ, ತೆರಿಗೆ ವ್ಯವಸ್ಥೆಯಲ್ಲಿ ಸುಧಾರಣೆ ಮಾಡಲಿದೆ ಮತ್ತು ಅಗತ್ಯವಿರುವವರಿಗೆ ಸಬ್ಸಿಡಿ ನೀಡಲಿದೆ ಎಂದಿದ್ದಾರೆ ಮೋದಿ.

ಕಲ್ಲಿದ್ದಲು ಮತ್ತು ಇತರೆ ಖನಿಜ ಗಣಿಗಳ ಹಂಚಿಕೆಯನ್ನು ಪಾರಾದರ್ಶಕವಾಗಿ ನಡೆಸುತ್ತೇವೆ. ವಿದ್ಯುತ್ ಕ್ಷೇತ್ರದಲ್ಲೂ ಇದೇ ರೀತಿಯ ಸುಧಾರಣೆ ತಂದು ಜನರಿಗೆ 247 ವಿದ್ಯುತ್ ದೊರೆಯುವಂತೆ ಮಾಡುತ್ತೇವೆ ಎಂಬ ಭರವಸೆಯನ್ನೂ ಅವರು ನೀಡಿದ್ದಾರೆ.

ಜತೆಗೆ ರೈಲು ಮತ್ತು ರಸ್ತೆ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆಯನ್ನು ಆಕರ್ಷಿಸುವ ನಿಟ್ಟಿನಲ್ಲಿ ಕೆಲವೊಂದು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ತ್ವರಿತ ಮತ್ತು ಸರಳ ಸುಧಾರಣೆಗಳು ವೇಗವಾಗಿ ಬೆಳೆಯುವ ಆರ್ಥಿಕತೆಗೆ ನೆರವಾಗದು.

ಹಾಗಾಗಿ ಸುಧಾರಣೆಗಳು ಕೂಡ ವೇಗವಾಗಿ ನಡೆಯಬೇಕು. ಹಾಗಾಗಿ ಈ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

SCROLL FOR NEXT