ದೇಶ

ದಾಖಲೆಯಿಲ್ಲದೆ ಚಿನ್ನ ಸಾಗಣೆ: ಇಬ್ಬರ ಸೆರೆ

ಬೆಂಗಳೂರು: ಸೂಕ್ತ ದಾಖಲೆಗಳಿಲ್ಲದೇ ಮುಂಬೈನಿಂದ ಬೆಂಗಳೂರಿಗೆ ಚಿನ್ನಾಭರಣ ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿರುವ ಸಿಸಿಬಿ ಪೊಲೀಸರು 1.25 ಕೋಟಿ ಮೌಲ್ಯದ 4.5 ಕೆ.ಜಿ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

ರಾಜಸ್ಥಾನ ಮೂಲದ ಶೈಲೇಶ್ (30) ಗೋಕುಲ್‌ರಾಮ್ (30) ಬಂಧಿತರು. ಆರೋಪಿಗಳು ಸಾಗಿಸುತ್ತಿದ್ದ 4.5 ಕೆ.ಜಿ ಚಿನ್ನಾಭರಣ ಪೈಕಿ 2.2 ಕೆ.ಜಿ ಒಡವೆಗೆ ಮಾತ್ರ ರಸೀದಿ ಹೊಂದಿದ್ದಾರೆ. ಉಳಿದ 2.3 ಕೆ.ಜಿ ಚಿನ್ನಾಭರಣವನ್ನು ದಾಖಲೆ ಇಲ್ಲದೇ ಸಾಗಿಸುತ್ತಿದ್ದರು.

ಚಿಕ್ಕಪೇಟೆಯಲ್ಲಿ ವಾಸವಿರುವ ಆರೋಪಿಗಳು, ನಗರದ ಚಿನ್ನದ ವ್ಯಾಪಾರಿಗಳಿಂದ ಆರ್ಡರ್ ತೆಗೆದುಕೊಂಡು ಮುಂಬೈನಲ್ಲಿ ಒಡವೆ ವಿನ್ಯಾಸ ಮಾಡಿಸಿಕೊಟ್ಟು, ಕಮಿಷನ್ ಪಡೆಯುತ್ತಿದ್ದರು. ತೆರಿಗೆ ವಂಚಿಸುವ ಉದ್ದೇಶದಿಂದ ಕೆಲವು ಆಭರಣಗಳಿಗೆ ಮಾತ್ರ ರಶೀದಿ ಮಾಡಿಸಿ ಉಳಿದ ಆಭರಣವನ್ನು ಅಕ್ರಮವಾಗಿ ಸಾಗಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಅಪರಾಧಿಗಳಿಂದ ಪಡೆದ ಚಿನ್ನಾಭರಣವನ್ನೂ ಈ ರೀತಿ ಅಕ್ರಮವಾಗಿ ಸಾಗಿಸಲಾಗುತ್ತದೆ. ಈ ಇಬ್ಬರ ಆಗಮನದ ಬಗ್ಗೆ ಮೊದಲೇ ಮಾಹಿತಿ ಇತ್ತು. ಶನಿವಾರ ಬೆಳಗ್ಗೆ ಮುಂಬೈನಿಂದ ವಿಮಾನದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ಕಾರಲ್ಲಿ ಚಿಕ್ಕಪೇಟೆಗೆ ತೆರಳುತ್ತಿದ್ದಾಗ ರಾಜಭವನ ರಸ್ತೆಯಲ್ಲಿ ದಾಳಿ ನಡೆಸಿ ಬಂಧಿಸಲಾಯಿತು. 17 ಚಿನ್ನದ ವ್ಯಾಪಾರಿಗಳು ಸೇರಿ 19 ಜನರ ವಿರುದ್ಧ ಕಬ್ಬನ್‌ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT